×
Ad

ಬೆಂಗಳೂರು: ರೌಡಿಶೀಟರ್‌ಗಳ ವಿಚಾರಣೆ

Update: 2017-11-03 20:41 IST

ಬೆಂಗಳೂರು, ನ.3: ಸಂಪಿಗೆಹಳ್ಳಿಯ ವಿವಿಧೆಡೆ ರೌಡಿ ಚಟುವಟಿಕೆಗಳಲ್ಲಿ ತೊಡಗಿರುವ 81 ಮಂದಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿರುವ ಈಶಾನ್ಯ ವಿಭಾಗದ ಪೊಲೀಸರು, ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ನಗರದ ಸಂಪಿಗೆಹಳ್ಳಿ, ಅಮೃತಹಳ್ಳಿ, ಬಾಗಲೂರು, ಕೊತ್ತನೂರು, ಪೊಲೀಸ್ ಠಾಣೆಗಳ ವ್ಯಾಪ್ತಿಯ 81 ರೌಡಿಗಳನ್ನು ಸಂಪಿಗೆಹಳ್ಳಿ ಎಸಿಪಿ ಕಚೇರಿಗೆ ಕರೆತಂದ ಪೊಲೀಸರು ಅವರ ಪೂರ್ವಾಪರಗಳನ್ನು ಪರಿಶೀಲನೆ ನಡೆಸಿದರು.

ಅಪರಾಧ ಚಟುವಟಿಕೆಗಳಲ್ಲಿ ತೊಡಗದಂತೆ, ಭೂ ವ್ಯಾಜ್ಯಗಳಲ್ಲಿ ತಲೆಹಾಕದಂತೆ, ಅಪರಾಧಗಳಿಗೆ ನೆರವಾಗದಂತೆ, ರೌಡಿಗಳಿಗೆ ಡಿಸಿಪಿ ಎಸ್.ಗಿರೀಶ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಯಾವುದೇ ಅಪರಾಧ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಭಾಗಿಯಾಗಿರುವುದು ಕಂಡುಬಂದರೆ, ಅಂತಹವರನ್ನು ಮುಲಾಜಿಲ್ಲದೆ ಬಂಧಿಸಿ, ಶಿಕ್ಷೆ ವಿಧಿಸಲಾಗುವುದು ಎಂದು ಅವರು ಹೇಳಿದರು.

ಅಪರಾಧ ಚಟುವಟಿಕೆಗಳನ್ನು ಬಿಟ್ಟು ಉತ್ತಮ ಜೀವನ ನಡೆಸಿದರೆ, ಅವರನ್ನು ರೌಡಿ ಪಟ್ಟಿಯಿಂದ ಕೈಬಿಡಲು ಚಿಂತನೆ ನಡೆಸಲಾಗುವುದು ಎಂದು ಗಿರೀಶ್ ಭರವಸೆ ನೀಡಿದರು. 

ಇದೇ ವೇಳೆ ವಿಚಾರಣೆ ನಡೆಸಿದ ಎಲ್ಲ 81 ಮಂದಿ ರೌಡಿಗಳ ವಿಳಾಸ, ಉದ್ಯೋಗ, ಸಂಬಂಧಿಕರ ವಿವರವನ್ನು ಪೊಲೀಸರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News