ಉದ್ಯೋಗದ ಆಮಿಷವೊಡ್ಡಿ 7 ಲಕ್ಷ ವಂಚನೆ: ಆರೋಪ
ಬೆಂಗಳೂರು, ನ.6: ಖಾಸಗಿ ಕಂಪೆನಿಯಲ್ಲಿ ಟ್ರಾವೆಲ್ಸ್ ಮ್ಯಾನೇಜರ್ ಹುದ್ದೆ ನೀಡುವುದಾಗಿ ನಿರುದ್ಯೋಗಿ ಯುವಕನಿಗೆ ಮೂವರು ಯುವತಿಯರ ಹೆಸರಿನಲ್ಲಿ ಕರೆ ಮಾಡಿಸಿ ನಂಬಿಸಿ 7ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗಾಗಿ ಸಿಐಡಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಏರ್ಟೆಲ್ ಕಂಪೆನಿಯಲ್ಲಿ ಟ್ರಾವೆಲ್ಸ್ ಮ್ಯಾನೇಜರ್ ಹುದ್ದೆಗೆ ಪ್ರೀತಿ, ಕೀರ್ತಿ, ರಾಧಿಕಾ ಎನ್ನುವ ಯುವತಿಯರ ಹೆಸರಿನಲ್ಲಿ ಮೊಬೈಲ್ ಕರೆ ಮಾಡಿಸಿ ನಂಬಿಸಿದ ವಂಚಕನೊಬ್ಬ 7,19,360 ರೂ. ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ಕಳೆದ ಅ.9 ರಂದು ಮೊಬೈಲ್ ಕರೆ ಮಾಡಿಸಿ ನಾಳೆ ಸಂದರ್ಶನವಿದೆ ಎಂದು ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ವಂಚಿಸಲಾಗಿದ್ದು, ಮರುದಿನ ಯಾವುದೇ ಸಂದರ್ಶನ ನಡೆಯದಿದ್ದರಿಂದ ಆತಂಕಗೊಂಡು ಪರಿಶೀಲನೆ ನಡೆಸಿದ ಯುವಕನಿಗೆ ತಾವು ಹಾಕಿದ ಹಣ ಅನಿಲ್ ಕುಮಾರ್ ರಾಯ್ ಎಂಬವರ ಹೆಸರಿನ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವುದು ಕಂಡು ಬಂದಿದೆ.
ಈ ಬಗ್ಗೆ ವಂಚನೆಗೊಳಗಾದ ಯುವಕ ಸಿಐಡಿ ಪೊಲೀಸರಿಗೆ ದೂರು ನೀಡಿ ಕರೆ ಮಾಡಿದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ವಿವರಗಳು ಇನ್ನಿತರ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.