ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜಿಸಿ ವಿವಾದಕ್ಕೀಡಾದ ರಾಮ್ ಶಿಂಧೆ
ಮುಂಬೈ,ನ.20 : ಮಹಾರಾಷ್ಟ್ರ ಜಲಸಂರಕ್ಷಣಾ ಸಚಿವ ರಾಮ್ ಶಿಂಧೆ ಅವರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿ ಸಚಿವರನ್ನು ವಿವಾದದಲ್ಲಿ ಸಿಲುಕಿಸಿದೆ. ಸಚಿವರು ಕಾರೊಂದರಲ್ಲಿ ಸಂಚರಿಸುವ ಸಂದರ್ಭ ಸೋಲಾಪುರ-ಬರ್ಷಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದ್ದಾಗ ಈ ವೀಡಿಯೋ ತೆಗೆಯಲಾಗಿತ್ತೆನ್ನಲಾಗಿದೆ. ಅದೀಗ ವೈರಲ್ ಆಗಿ ಬಿಟ್ಟಿದೆ.
ಸರಕಾರದ ಮಹತ್ವಾಕಾಂಕ್ಷೆಯ ಜಲಯುಕ್ತ ಶಿವರ್ ಯೋಜನೆಯ ಪ್ರಚಾರಕ್ಕಾಗಿ ರಾಜ್ಯವಿಡೀ ಒಂದು ತಿಂಗಳು ಸಂಚರಿಸಿ ಸುಸ್ತಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭ ಉಪಾಯವಿಲ್ಲದೆ ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜಿಸಬೇಕಾಯಿತೆಂದು ಶಿಂಧೆ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. "ನಾನು ಜ್ವರದಿಂದ ಬಳಲುತ್ತಿದ್ದೆ. ಹತ್ತಿರದಲ್ಲೆಲ್ಲೂ ಶೌಚಾಲಯ ಕೂಡ ಇಲ್ಲದೇ ಇದ್ದುದರಿಂದ ಹೀಗೆ ಮಾಡುವುದು ಅನಿವಾರ್ಯವಾಯಿತು" ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಇದೀಗ ವಿಪಕ್ಷ ಎನ್ಸಿಪಿಗೆ ಒಂದು ಅಸ್ತ್ರವೊದಗಿಸಿದ್ದು ಹೆದ್ದಾರಿಯಲ್ಲಿ ಶೌಚಾಲಯವಿಲ್ಲದೇ ಇರುವುದು ಸ್ವಚ್ಛ ಭಾರತ ಅಭಿಯಾನದ ವೈಫಲ್ಯವನ್ನು ಬೊಟ್ಟು ಮಾಡಿ ತೋರಿಸುತ್ತದೆ ಎಂದು ಪಕ್ಷದ ವಕ್ತಾರ ನವಾಬ್ ಮಲಿಕ್ ಹೇಳಿದ್ದಾರೆ.