ಪ್ರತೀ ತಿಂಗಳ ಎರಡನೆ ರವಿವಾರ ‘ವಿರಳ ಸಂಚಾರ ದಿನ’:ಸಚಿವ ರೇವಣ್ಣ
ಬೆಂಗಳೂರು, ಡಿ.1: ಬೆಂಗಳೂರಿಗರು ತಮ್ಮ ಪರಿಸರದ ಉಳಿವಿಗಾಗಿ ತಿಂಗಳಲ್ಲಿ ಒಂದು ದಿನ ಸ್ವಂತ ವಾಹನಗಳ ಬಳಕೆಯನ್ನು ಸ್ಥಗಿತಗೊಳಿಸುವ ದಿಟ್ಟ ನಿರ್ಧಾರ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ವತಿಯಿಂದ ಪ್ರತಿ ತಿಂಗಳ ಎರಡನೆ ರವಿವಾರ ‘ವಿರಳ ಸಂಚಾರ ದಿನ’(ಲೆಸ್ ಟ್ರಾಫಿಕ್ ಡೇ) ಅಭಿಯಾನ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2018ನೆ ಸಾಲಿನ ಜನವರಿ 14(ಎರಡನೆ ರವಿವಾರ)ರಂದು ಸಂಕ್ರಾಂತಿ ಹಬ್ಬ ಇರುವುದರಿಂದ, ಫೆಬ್ರವರಿ ತಿಂಗಳಿನಿಂದ ಈ ಅಭಿಯಾನವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು.
ಈ ಸಂಬಂಧ ಶೀಘ್ರದಲ್ಲೇ ಬೆಂಗಳೂರು ನಗರದ ವಿವಿಧ ನಾಗರಿಕ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಲಿ ಅಧ್ಯಕ್ಷರು, ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರೊಂದಿಗೆ ಸಭೆ ನಡೆಸಲಾಗುವುದು ಎಂದವರು,
ಪ್ರತಿತಿಂಗಳ ಎರಡನೆ ರವಿವಾರ ಸ್ವಂತ ವಾಹನವನ್ನು ಬಳಸದೆ ಸಮೂಹ ಸಾರಿಗೆ ಬಳಸಲು ಪ್ರತಿಯೊಬ್ಬರೂ ಪಣತೊಟ್ಟು, ಬೆಂಗಳೂರಿನ ಪರಿಸರ ಮಾಲಿನ್ಯ ತಡೆಗಟ್ಟುವ ಜತೆಗೆ ಸಂಚಾರ ನಿಯಂತ್ರಣಕ್ಕೂ ಮುಂದಾಗಬೇಕು ಎಂದು ಮನವಿ ಮಾಡಿದರು.
ವಾಯುಮಾಲಿನ್ಯ ಹೆಚ್ಚುತ್ತಿರುವ ಪ್ರಮುಖ ನಗರಗಳಲ್ಲಿ ಬೆಂಗಳೂರು ಸೇರಿದೆ. ಭವಿಷ್ಯದಲ್ಲಿ ದಿಲ್ಲಿಯ ವಿಷಮಯ ವಾತಾವರಣ ಮೀರಿಸುವ ಅಪಾಯವನ್ನು ನಮ್ಮ ನಗರ ಎದುರಿಸುತ್ತಿದೆ. ಲಕ್ಷಾಂತರ ವಾಹನಗಳು ಉಗುಳುತ್ತಿರುವ ಹೊಗೆಯಿಂದಾಗಿ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.
ವಿರಳ ಸಂಚಾರ ದಿನದಂದು ಬೆಂಗಳೂರಿನಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳು, ಬಾಡಿಗೆ ವಾಹನಗಳು, ಆಟೊರಿಕ್ಷಾಗಳು ಹಾಗೂ ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕೆ ಯಾವುದೆ ನಿರ್ಬಂಧ ಇರುವುದಿಲ್ಲ. ಈ ವಾಹನಗಳನ್ನು ಸ್ವಂತ ವಾಹನಗಳ ಮಾಲಕರು ತಮ್ಮ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಬೆಂಗಳೂರಿನೆಲ್ಲೆಡೆ ಇರುವ ಜಾಹೀರಾತು ಫಲಕಗಳಲ್ಲಿ ಲೆಸ್ ಟ್ರಾಫಿಕ್ ಡೇ ಅಭಿಯಾನದ ಮಹತ್ವವನ್ನು ಸಾರಲಾಗುವುದು. ವಿರಳ ಸಂಚಾರ ದಿನದ ಪರಿಕಲ್ಪನೆಯು ಇಡೀ ವಿಶ್ವದಲ್ಲೆ ಪ್ರಥಮವಾದದ್ದು. ಬೆಂಗಳೂರಿನಲ್ಲಿ ಸುಮಾರು 64,36,813 ವಾಹನಗಳು ಕಳೆದ ಸೆಪ್ಟಂಬರ್ ಅಂತ್ಯಕ್ಕೆ ನೋಂದಣಿಯಾಗಿವೆ. ಇದರಲ್ಲಿ 49,42,170 ದ್ವಿಚಕ್ರ ವಾಹನಗಳಿವೆ ಎಂದು ಅವರು ವಿವರಣೆ ನೀಡಿದರು.
ಹಳದಿ ನೋಂದಣಿ ಫಲಕ ಹೊಂದಿರುವ ಸಾರಿಗೆ ವಾಹನಗಳ ಸಂಖ್ಯೆ 6,95,582. ಒಟ್ಟು ಬೆಂಗಳೂರಿನಲ್ಲಿ 71,31,392 ವಾಹನಗಳು ನೋಂದಣಿಯಾಗಿವೆ. ವಿರಳ ಸಂಚಾರ ದಿನದಂದು ಸಂಪೂರ್ಣವಾಗಿ ವಾಹನಗಳ ಬಳಕೆ ನಿಲ್ಲಿಸಿದರೆ ಪರಿಸರಕ್ಕೆ ಹಾಗೂ ಸುಂದರ ಬೆಂಗಳೂರಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕರ್ಕಶ ಹಾರನ್ಗಳಿಗೆ ಕಡಿವಾಣ: ಖಾಸಗಿ ಬಸ್ ಹಾಗೂ ಲಾರಿಗಳಲ್ಲಿ ಬಳಸುತ್ತಿರುವ ಕರ್ಕಶವಾದ ಶಬ್ದವನ್ನು ಹೊಂದಿರುವ ಹಾರನ್ಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಪರಿಸರ ಸಂರಕ್ಷಣೆಗಾಗಿ 2 ಸ್ಟ್ರೋಕ್ ಆಟೊಗಳನ್ನು 4 ಸ್ಟ್ರೋಕ್ಗೆ ಪರಿವರ್ತಿಸಿಕೊಳ್ಳಲು 30 ಸಾವಿರ ರೂ.ವರೆಗೆ ಸಹಾಯಧನವನ್ನು ಸರಕಾರದ ವತಿಯಿಂದ ನೀಡಲಾಗುತ್ತಿದೆ ಎಂದು ನುಡಿದರು.
ಇಂದಿರಾ ಸಾರಿಗೆ-ಬಸ್ಪಾಸ್: ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿರುವ ಸುಮಾರು 2 ಲಕ್ಷ ಮಹಿಳಾ ಕಾರ್ಮಿಕರಿಗಾಗಿ ಇಂದಿರಾ ಸಾರಿಗೆ ಆರಂಭಿಸಲು ಸರಕಾರ ನಿರ್ಧರಿಸಿದೆ. ಇದರ ಜತೆಗೆ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗಾಗಿ ಇಂದಿರಾ ಬಸ್ಪಾಸ್ಗಳನ್ನು ಪರಿಚಯಿಸಲಾಗುತ್ತಿದೆ ಎಂದು ರೇವಣ್ಣ ತಿಳಿಸಿದರು.
'ರಸ್ತೆಗಿಳಿಯಲಿವೆ ಇಲೆಕ್ಟ್ರಿಕ್ ಬಸ್ಸುಗಳು'
ಬೆಂಗಳೂರಿನಲ್ಲಿ ಇಲೆಕ್ಟ್ರಿಕ್ ಬಸ್ಸುಗಳ ಸಂಚಾರವನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಕೇಂದ್ರ ಸರಕಾರದ ಜತೆ ಮಾತುಕತೆ ನಡೆಯುತ್ತಿದೆ.
-ಎಚ್.ಎಂ.ರೇವಣ್ಣ, ಸಾರಿಗೆ ಸಚಿವ