×
Ad

ಬೆಂಗಳೂರಿನಲ್ಲಿ ಐದು ವರ್ಷಗಳಿಂದ ವಾಸವಿರುವವರಿಗೆ ಮನೆ: ಸಿದ್ದರಾಮಯ್ಯ

Update: 2017-12-05 19:22 IST

ಬೆಂಗಳೂರು, ಡಿ.5: ಬೆಂಗಳೂರು ನಗರದಲ್ಲಿ ಲಭ್ಯವಿರುವ ಸುಮಾರು 1200 ಎಕರೆ ಜಮೀನಿನಲ್ಲಿ ಕೆಳ ಅಂತಸ್ತು ಹೊರತುಪಡಿಸಿ ಮೂರು ಮಹಡಿಯ ವಸತಿಗೃಹಗಳನ್ನು ನಿರ್ಮಿಸಿ ಅರ್ಹ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಗಳವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣದಲ್ಲಿ ವಸತಿ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಸೂರಿಲ್ಲದೆ ವಾಸಿಸುತ್ತಿರುವ ಅರ್ಹ ಫಲಾನುಭವಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕುಟುಂಬದ ವಾರ್ಷಿಕ ಆದಾಯ ಗರಿಷ್ಠ 87,000 ರೂ.ಗಳ ಒಳಗಿರುವವರು ಅರ್ಹ ಫಲಾನುಭವಿಗಳಾಗಿರುತ್ತಾರೆ. ಸರಕಾರದ ವತಿಯಿಂದ ಪ್ರತಿ ವರ್ಷ ಒಂದು ಲಕ್ಷ ಮನೆಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.

 ಸರಕಾರ ಪ್ರತಿ ಮನೆಗೆ 5.50 ಲಕ್ಷ ರೂ. ದಿಂದ 6 ಲಕ್ಷ ರೂ. ಹಣ ಖರ್ಚು ಮಾಡುತ್ತಿದೆ. ಮನೆಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಶೇ.30 ರಷ್ಟು ಪರಿಶಿಷ್ಟ ವರ್ಗಕ್ಕೆ ಶೇ. 10 ರಷ್ಟು ಅಲ್ಪಸಂಖ್ಯಾತರಿಗೆ ಶೇ.10 ರಷ್ಟು ಹಾಗೂ ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಮೀೀಸಲಿಟ್ಟಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 3.50 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗದವರಿಗೆ 2.70 ಲಕ್ಷ ರೂ. ಸಹಾಯಧನ ನೀಡಲಿದ್ದು, ಮನೆ ಹಂಚಿಕೆ ವೇಳೆಯಲ್ಲಿ ಫಲಾನುಭವಿಗಳು ಹಣವನ್ನು ತುಂಬಬಹುದಾಗಿದೆ ಎಂದು ಅವರು ಹೇಳಿದರು.

ಇಂದಿನಿಂದ 2018ರ ಜನವರಿ 5ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಮನೆಗಳ ಹಂಚಿಕೆಯು ಶೇ.75 ರಷ್ಟು ಲಾಟರಿ ಮೂಲಕ ಹಾಗೂ ಶೇ.25 ರಷ್ಟು ಮನೆಗಳನ್ನು ಅರ್ಹ ಕಡುಬಡವರಿಗೆ ಹಂಚಿಕೆ ಮಾಡಲಾಗುವುದು. ಈ ಯೋಜನೆಯಡಿ ವಸತಿ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

  ಅರ್ಜಿ ಸಲ್ಲಿಕೆ ಶುಲ್ಕವನ್ನು ವಸತಿ ಇಲಾಖೆಯು 250 ರೂ.ಗಳಿಗೆ ನಿಗದಿಪಡಿಸಿತ್ತು, ಆದರೆ ಈ ಶುಲ್ಕ ಹೆಚ್ಚಾಗಿದೆ ಎಂದು ತಿಳಿದು 100 ರೂ.ಗೆ ಇಳಿಸಲಾಗಿದೆ. ಬೆಂಗಳೂರು ಒನ್‌ಕೇಂದ್ರಗಳು ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್ ಕಚೇರಿಗಳಲ್ಲಿ ಜ. 5ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಅವರು ತಿಳಿಸಿದರು.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಮಾತಿಗಾಗಿ http://www.ashraya.kar.nic.in/cmonelakh ವೆಬ್‌ಸೈಟನ್ನು ಹಾಗೂ ದೂ. 080-2318888ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಇಡೀ ದೇಶದಲ್ಲೇ ಈ ವಸತಿಯೋಜನೆ ವಿಶಿಷ್ಟವಾಗಿದೆ. ಇದರ ಉಪಯೋಗವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಈ ವೇಳೆ ವಸತಿ ಸಚಿವ ಎಂ.ಕೃಷ್ಣಪ್ಪ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾಜ್, ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್, ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಸೇರಿದಂತೆ ಮುಖ್ಯಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿಗಳು, ವಸತಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News