×
Ad

ಚಳವಳಿಗಾರರು ಮಾಧ್ಯಮಗಳ ಮೇಲೆ ನಂಬಿಕೆ ಇಡುವ ಅಗತ್ಯವಿಲ್ಲ : ದಿನೇಶ್ ಅಮೀನ್‌ಮಟ್ಟು

Update: 2017-12-07 18:45 IST

ಬೆಂಗಳೂರು,ಡಿ.7: ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಉದ್ಯಮವಾಗಿ ಪರಿವರ್ತನೆಯಾಗಿರುವ ಹಿನ್ನೆಲೆಯಲ್ಲಿ ಚಳವಳಿಗಾರರು ಮಾಧ್ಯಮಗಳ ಮೇಲೆ ನಂಬಿಕೆ ಇಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್ ಮಟ್ಟು ಅಭಿಪ್ರಾಯಿಸಿದ್ದಾರೆ.

ಬುಧವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ತಲ್ಲಣಗಳು’ ವಿಷಯ ಕುರಿತು ಮಾತನಾಡಿದ ಅವರು, ದೇಶದಲ್ಲಿರುವ ಬಹುತೇಕ ಪತ್ರಿಕೆಗಳು, ಟಿವಿ ಚಾನೆಲ್‌ಗಳು, ರೇಡಿಯೋಗಳು ಓದುಗರನ್ನು, ವೀಕ್ಷಕರನ್ನು ಹಾಗೂ ಕೇಳುಗರನ್ನು ನಂಬಿ ಬದುಕುತ್ತಿಲ್ಲ. ಕೇವಲ ಉದ್ಯಮಿಗಳು ಕೊಡುವ ಜಾಹೀರಾತಿನಿಂದ ಮಾತ್ರವೇ ನಡೆಯುತ್ತಿವೆ. ಹೀಗಾಗಿ ಅವರ ಮೊದಲ ಆದ್ಯತೆ ಉದ್ಯಮಿಯೇ ಹೊರತು ಜನ ಸಾಮಾನ್ಯರಲ್ಲ ಎಂದು ತಿಳಿಸಿದರು.

ಈಗಾಗಲೆ ಕೆಲವು ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ರಿಲಾಯನ್ಸ್ ಕಂಪೆಯ ಅಡಿಯಾಳಾಗಿವೆ. ಇನ್ನು ಕೆಲವೇ ವರ್ಷಗಳಲ್ಲಿ ಬಹುತೇಕ ಮಾಧ್ಯಮಗಳು ಅವರ ಹಿಡಿತಕ್ಕೆ ಸಿಲುಕಲಿವೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಸಂಪಾದಕರು ಉದ್ಯಮಕ್ಕೆ ಪೂರಕವಾದ ವರದಿಗಳನ್ನು ಮಾತ್ರ ಬರೆಯುತ್ತಾರೆ, ಪ್ರಕಟಿಸುತ್ತಾರೆ ಎಂದು ಅವರು ಹೇಳಿದರು.

ಫೇಸ್‌ಬುಕ್ ಪರ್ಯಾಯ ಮಾಧ್ಯಮ: ಈಗ ಜನತೆಗಿರುವ ಏಕೈಕ ಮಾಧ್ಯಮ ಸಾಮಾಜಿಕ ತಾಣಗಳಾದ ಫೇಸ್‌ಬುಕ್, ವಾಟ್ಸಾಪ್, ಟ್ವಿಟರ್ ಆಗಿದೆ. ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಿಗೆ ಸೀಮಿತ ಚೌಕಟ್ಟಿದೆ. ತಮ್ಮ ಮಾಲಕನ ಸಿದ್ಧಾಂತಕ್ಕೆ ಅನುಗುಣವಾಗಿ ಮಾತ್ರ ಸುದ್ದಿಗಳು ಪ್ರಕಟಗೊಳ್ಳುತ್ತವೆ. ಆದರೆ, ಫೇಸ್‌ಬುಕ್ ಪ್ರತಿಯೊಬ್ಬರ ಅನಿಸಿಕೆಗಳಿಗೆ, ಬರವಣಿಗೆಗೆ ಸೂಕ್ತವಾದ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.

ಹಿರಿಯ ಪತ್ರಕರ್ತೆ ವಿಜಯಮ್ಮ ಮಾತನಾಡಿ, ನನ್ನ ಮನೆಯಲ್ಲಿ ನಮ್ಮಿಷ್ಟದ ಊಟವನ್ನು ತಿನ್ನಲು, ಇಷ್ಟದ ಬಟ್ಟೆ ಧರಿಸಲು ಹಿಂಜರಿಯುವಂತಹ ಭಯದ ವಾತಾವರಣ ನಿರ್ಮಿಸುವ ಮೂಲಕ ಪಟ್ಟಭದ್ರರು ತಮ್ಮ ಕಬಂಧಬಾಹುಗಳನ್ನು ಮನೆ, ಮನಗಳಿಗೆ ಚಾಚಿದ್ದಾರೆ. ಈ ದುಷ್ಟರಿಂದ ಮುಕ್ತಿ ಪಡೆದು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಜನಹೋರಾಟವೊಂದೇ ಮಾರ್ಗವೆಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಪಟ್ಟಭದ್ರರು ಶತಮಾನಗಳ ಕಾಲ ಮಹಿಳೆಯರನ್ನು ಮೌನಕ್ಕೆ ದೂಡಿ ಯಶಸ್ವಿಯಾಗಿದ್ದರು. ಈಗ ಲೇಖಕರನ್ನು ಮೌನಕ್ಕೆ ಶರಣಾಗುವಂತೆ ಒತ್ತಡ, ಬೆದರಿಕೆ ಹಾಕುತ್ತಿದ್ದಾರೆ. ಆದರೆ, ಸತ್ಯವನ್ನು ಶೋಧಿಸುವುದೇ ನಿಜವಾದ ಸಾಹಿತ್ಯದ ಸಾರವಾಗಿರುವುದರಿಂದ ಬರಹಗಾರನ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಮರುಳಸಿದ್ದಪ್ಪ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ಉಡುಪಿಯಲ್ಲಿ ಧರ್ಮ ಸಂಸತ್ ಅಧಿವೇಶನ ನಡೆಸಿರುವುದು ದೇಶ ದ್ರೋಹ ಹಾಗೂ ಧರ್ಮ ದ್ರೋಹದ ಕೃತ್ಯವಾಗಿದೆ. ಹೀಗಾಗಿ ಧರ್ಮ ಸಂಸತ್‌ನಲ್ಲಿ ಕೈಗೊಂಡಿರುವ ಯಾವುದೇ ನಿರ್ಣಯಗಳಿಗೆ ಜನತೆ ಬೆಂಬಲ ಕೊಡಬಾರದು ಎಂದು ಅವರು ಹೇಳಿದರು.

ಈ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹನುಮಂತಯ್ಯ, ಜನವಾದಿ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ, ವಿಚಾರವಾದಿ ಕೇಶವ ಶರ್ಮ ಮತ್ತಿತರರಿದ್ದರು.

ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ಪ್ರತಾಪ್ ಸಿಂಹ, ಆರೆಸ್ಸೆಸ್ ಮುಖಂಡರು ಸೇರಿದಂತೆ ಪಟ್ಟಭದ್ರ ಹಿತಾಸಕ್ತಿಯ ಪರವಾಗಿರುವವರು ಜನವಿರೋಧಿಯಾಗಿ, ಅವೈಜ್ಞಾನಿಕವಾಗಿ ಏನೇ ಬರೆದರು, ಮಾತನಾಡಿದರು ನಮ್ಮ ಪ್ರಭುತ್ವ ವ್ಯವಸ್ಥೆ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಿಲ್ಲ. ಆದರೆ, ವ್ಯವಸ್ಥೆಯನ್ನು ಚಿಕಿತ್ಸಾ ದೃಷ್ಟಿಯಿಂದ ನೋಡುವ, ಸಮಾಜದಲ್ಲಿ ನಡೆಯುವ ಅನಾಗರಿಕ, ಕೋಮುವಾದೀಕರಣವನ್ನು ವಿರೋಧಿಸಿ ಬರೆದ ತಕ್ಷಣ ಪಟ್ಟಭದ್ರರಿಂದ ಕೊಲೆ ಬೆದರಿಕೆ ಬಂದರೆ, ಪ್ರಭುತ್ವ ಪೊಲೀಸರ ಮೂಲಕ ಕಿರುಕುಳ ನೀಡಲು ಪ್ರಾರಂಭಿಸುತ್ತದೆ.
-ಬಂಜಗೆರೆ ಜಯಪ್ರಕಾಶ್, ಸಂಸ್ಕೃತಿ ಚಿಂತಕ

 ನಾನು ಕೆಳದ ವಿಧಾನಸಭಾ ಚುನಾವಣೆಯಲ್ಲಿ ಬಹಿರಂಗವಾಗಿ ಕಾಂಗ್ರೆಸನ್ನು ಬೆಂಬಲಿಸಿದ್ದೆ, ಈ ಬಾರಿಯು ಬೆಂಬಲಿಸುತ್ತೇನೆ. ನಮಗೆ ನಿರ್ದಿಷ್ಟವಾದ ರಾಜಕೀಯ ಪ್ರಜ್ಞೆ ಇಲ್ಲದಿದ್ದರೆ ಜನವಿರೋಧಿಗಳಿಗೆ, ದೇಶ ದ್ರೋಹಿಗಳಿಗೆ ಸುಲಭವಾಗಿ ರಾಜಕೀಯ ಅಧಿಕಾರ ಸಿಕ್ಕಿಬಿಡುತ್ತೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಕೆಲಸ ಕಾರ್ಯಗಳ ಜೊತೆಗೆಯೇ ರಾಜಕೀಯ ಅರಿವನ್ನು ಪಡೆಯುವುದು ಅಗತ್ಯವಿದೆ.
-ಕೆ.ಎಂ.ಮರುಳಸಿದ್ದಪ್ಪ ಅಧ್ಯಕ್ಷ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News