×
Ad

ಹೆಚ್ಚು ಗಿಡಗಳು ನೆಡಲು ಸರಕಾರದ ಮೇಲೆ ಒತ್ತಡ ಹಾಕಿ: ಪರಿಸರವಾದಿ ಯಲ್ಲಪ್ಪರೆಡ್ಡಿ

Update: 2017-12-08 18:32 IST

ಬೆಂಗಳೂರು, ಡಿ.8: ಒತ್ತುವರಿಯಾದ ಪ್ರದೇಶದಲ್ಲಿ, ಖಾಲಿ ಸ್ಥಳಗಳಲ್ಲಿ ಹಾಗೂ ಪಾರ್ಕ್‌ಗಳಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವಂತೆ ಸಾರ್ವಜನಿಕರು ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಪರಿಸರವಾದಿ ಯಲ್ಲಪ್ಪರೆಡ್ಡಿ ತಿಳಿಸಿದ್ದಾರೆ.

ಶುಕ್ರವಾರ ನಗರದ ಲಾಲ್‌ಬಾಗ್‌ನಲ್ಲಿ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ‘ಮೈ ಟ್ರೀ-ಮೈ ಲೈಫ್’ ಮರಗಳನ್ನು ತಬ್ಬಿಕೊಳ್ಳುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದೆರಡು ದಿನ ಅನ್ನ, ನೀರಿಲ್ಲದಿದ್ದರೂ ಬದುಕಬಹುದು. ಆದರೆ, ಗಾಳಿಯಿಲ್ಲದೆ ಬದುಕಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಹೀಗಾಗಿ, ಎಲ್ಲ ಉದ್ಯಾನವನ, ಖಾಲಿ ಸ್ಥಳಗಳಲ್ಲಿ ಸರಕಾರದಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ ಹಾಕಿಕೊಳ್ಳಬೇಕು. ಜೊತೆಗೆ, ಮರಗಳ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಯಲ್ಲಪ್ಪರೆಡ್ಡಿ ಇದೇ ವೇಳೆ ತಿಳಿಸಿದರು.

ಮರಗಳ ಸಂರಕ್ಷಣೆ ಕುರಿತಂತೆ ಮಕ್ಕಳಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಮರಗಳನ್ನು ‘ನನ್ನ ಜೀವನ ನನ್ನ ಮರ’ ಎನ್ನುವ ಘೋಷಣೆಯೊಂದಿಗೆ ಬೆಂಗಳೂರು, ಕೋಲಾರ, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳ 55 ಶಾಲೆಗಳಿಂದ ಆಗಮಿಸಿದ್ದ ಸಾವಿರಾರು ಮಕ್ಕಳು ಲಾಲ್‌ಬಾಗ್‌ನಲ್ಲಿರುವ 10 ಸಾವಿರಕ್ಕೂ ಅಧಿಕ ಮರಗಳನ್ನು 2 ನಿಮಿಷ ಅಪ್ಪಿಕೊಳ್ಳುವ ಮೂಲಕ ಮರಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.

ಈ ಕಾರ್ಯಕ್ರಮದ ಮೂಲಕ ಹಿಂದೆ ಕೇರಳ ರಾಜ್ಯದಲ್ಲಿ 5 ಸಾವಿರ ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಗಿನ್ನಿಸ್ ದಾಖಲೆ ಮಾಡಲಾಗಿತ್ತು. ನಗರದಲ್ಲಿ ಇಂದು 10 ಸಾವಿರಕ್ಕೂ ಅಧಿಕ ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಕೇರಳ ರಾಜ್ಯ ನಿರ್ಮಿಸಿದ್ದ ದಾಖಲೆಯನ್ನು ಮುರಿದು ರಾಜ್ಯದಿಂದ ಗಿನ್ನಿಸ್ ದಾಖಲೆ ಮಾಡಲು ಈ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಆಯೋಜಕರು ಹೇಳಿದರು. ಗಿನ್ನಿಸ್ ದಾಖಲೆ ಮಾಡುವ ಉದ್ದೇಶಕ್ಕಿಂತಲೂ ಮರಗಳ ಸಂರಕ್ಷಣೆ ಕುರಿತಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಹೇಳಿದರು.

ರೋಟರಿ ಸಂಸ್ಥೆ, ಸಿವಿಲ್ ಡಿೆನ್ಸ್, ತೋಟಗಾರಿಕೆ ಇಲಾಖೆ ಸಹಯೋಗ ದೊಂದಿಗೆ ಹಮ್ಮಿಕೊಂಡಿದ್ದ ಈ ಅಪ್ಪಿಕೋ ಕಾರ್ಯಕ್ರಮದ ಅಂಗವಾಗಿ ಲಾಲ್‌ಬಾಗ್ ನ ಸಾಕಷ್ಟು ಮರಗಳಿಗೆ ಟೇಪ್‌ಗಳನ್ನು ಸುತ್ತಲಾಯಿತು. ಗಿನ್ನಿಸ್ ದಾಖಲೆಗೆ ಅಗತ್ಯವಿ ರುವ 300 ಷರತ್ತುಗಳನ್ನು ಸಹ ಲೋಪದೋಷಗಳಾಗದಂತೆ ಅನುಸರಿಸಲಾಗಿತ್ತು.

ಕಾರ್ಯಕ್ರಮದ ಪೂರ್ವಭಾವಿಯಾಗಿ ಲಾಲ್‌ಬಾಗ್ ಹೇಗೆ ವ್ಯವಹರಿಸಬೇಕು ಹಾಗೂ ಮರಗಳನ್ನು ಹೇಗೆ, ಎಷ್ಟು, ಯಾವಾಗ ಅಪ್ಪಿಕೊಳ್ಳಬೇಕು ಎನ್ನುವ ಕುರಿತು ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಒಂದು ದಿದ ತರಬೇತಿಯನ್ನೂ ನೀಡಲಾಗಿತ್ತು.

ನಗರದಲ್ಲಿ ಇನ್ನು ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸುವ ಕುರಿತಂತೆ ಹಾಗೂ ಖಾಲಿ ಇರುವ ಜಾಗಗಳಲ್ಲಿ ಮತ್ತು ಅತಿಕ್ರಮಣಗೊಂಡಿರುವ ಜಾಗಗಳನ್ನು ತೆರವುಗೊಳಿಸಿ ಗಿಡಗಳನ್ನು ನೆಡಲು ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಮಾಜಿ ನಿರ್ದೇಶಕರು, ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ, ತೋಟಗಾರಿಕೆ ಇಲಾಖೆ ನಿರ್ದೇಶಕ ರಾವ್, ಜಿಲ್ಲಾ ಗೌರ್ನರ್ ಆಶಾ ಪ್ರಸನ್ನಕುಮಾರ್ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News