ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರಿಗೆ ‘ಮಹಾವೀರ ಶಾಂತಿ ಪ್ರಶಸ್ತಿ’: ಸಚಿವೆ ಉಮಾಶ್ರೀ

Update: 2017-12-08 13:36 GMT

ಬೆಂಗಳೂರು, ಡಿ. 7: ಶ್ರವಣಬೆಳಗೊಳ ಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಅವರಿಗೆ 2017ನೆ ಸಾಲಿನ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಪ್ರಶಸ್ತಿಯು 10 ಲಕ್ಷ ರೂ.ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಹಿರಿಯ ಸಾಹಿತಿ ಜಿನದತ್ತ ದೇಸಾಯಿ ಅವರ ಅಧ್ಯಕ್ಷತೆಯ ಸಮಿತಿಯು ಈ ಆಯ್ಕೆ ಮಾಡಿದ್ದು, ಮಹಾವೀರ ಜಯಂತಿಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಭಟ್ಟಾರಕ ಪಟ್ಟಾಚಾರ್ಯರು 44 ವರ್ಷಗಳಿಂದ ಶ್ರವಣಬೆಳಗೊಳ ಮಠದ ಪೀಠಾಧ್ಯಕ್ಷರಾಗಿ ಜನಹಿತ ಮತ್ತು ಆಧ್ಯಾತ್ಮಿಕ ಕೈಂಕರ್ಯದಲ್ಲಿ ತೊಡಗಿದ್ದು, ಪ್ರಾಕೃತ ಅಧ್ಯಯನ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಅನೇಕ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅನ್ನದಾಸೋಹ ಮತ್ತು ಜ್ಞಾನದಾಸೋಹ ಎರಡನ್ನೂ ನಡೆಸುವ ಮೂಲಕ ಸಾಮಾಜಿಕ ಉನ್ನತ್ತಿಗೆ ಶ್ರಮಿಸಿದ್ದಾರೆ. ಧಾರ್ಮಿಕ ಸಭೆಗಳ ಜೊತೆಗೆ ಸಾಹಿತ್ಯಿಕ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಶ್ರವಣಬೆಳಗೊಳ ಮಠ ಸಮಾಜಮುಖಿಯಾಗಿ ಶ್ರಮಿಸುತ್ತಿದೆ ಎಂದು ಅವರು ಬಣ್ಣಿಸಿದ್ದಾರೆ.

‘ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಲಾಗುವ ‘ಜಾನಪದ ಶ್ರೀ’ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಿಂದ ಎರಡಕ್ಕೆ ಹೆಚ್ಚಳ ಮಾಡಿದ್ದು, ಇಬ್ಬರು ಗಣ್ಯರಿಗೆ ‘ಜಾನಪದ ಶ್ರೀ’ ಪ್ರಶಸ್ತಿ ನೀಡಲಾಗುವುದು’

-ಉಮಾಶ್ರೀ ಕನ್ನಡ ಮತ್ತು ಸಂಸ್ಕೃತಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News