ಅಂಬೇಡ್ಕರ್ ವಿಚಾರಗಳೆಂದರೆ ಸಂಘಪರಿವಾರಕ್ಕೆ ಭಯ: ಬಾಬು ಮ್ಯಾಥ್ಯೂ

Update: 2017-12-09 16:22 GMT

ಬೆಂಗಳೂರು, ಡಿ.9: ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಅಂಬೇಡ್ಕರ್‌ರನ್ನು ಕಂಡರೆ ಭಯವಿದೆ. ಅಂಬೇಡ್ಕರ್ ವಿಚಾರಧಾರೆಗಳನ್ನು ಎದುರಿಸಲು ಸಾಧ್ಯವಾಗದೇ ಅದನ್ನು ದಮನ ಮಾಡುವ ಕುತಂತ್ರ ಮಾಡಲಾಗುತ್ತಿದೆ ಎಂದು ಕಾನೂನು ತಜ್ಞ ಬಾಬು ಮ್ಯಾಥ್ಯೂ ಅಭಿಪ್ರಾಯಿಸಿದ್ದಾರೆ.

ಶನಿವಾರ ನಗರದ ಗಾಂಧಿ ಭವನದಲ್ಲಿ ಬೆಂಗಳೂರು ದಲಿತ್ ಫೋರಂನಿಂದ ಆಯೋಜಿಸಿದ್ದ ಭಾರತ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರ ಕನಸು ವಿಷಯ ಕುರಿತ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂಬೇಡ್ಕರ್ ಇಡೀ ವಿಶ್ವಕ್ಕೆ ಬೆಳಕಿನ ಕಿರಣವಾಗಿ ಕಾಣುತ್ತಿರುವ ಸಂದರ್ಭದಲ್ಲಿ ಕೋಮುವಾದಿ ಶಕ್ತಿಗಳು ಅದನ್ನು ದಮನ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಸಂವಿಧಾನವನ್ನೇ ಬುಡಮೇಲು ಮಾಡುವ ಹುನ್ನಾರ ಮಾಡಲಾಗುತ್ತಿದೆ ಎಂದು ಹೇಳಿದರು.

ಅಂಬೇಡ್ಕರ್ ರಚಿಸಿರುವ ಸಂವಿಧಾನವೇ ಸರಿಯಿಲ್ಲ ಎಂದು ಹಿಂದುತ್ವವಾದಿ ಶಕ್ತಿಗಳು ವ್ಯಾಪಕ ಅಪಪ್ರಚಾರ ನಡೆಸುತ್ತಿದೆ. ಆದರೆ, ನಮ್ಮ ಸಂವಿಧಾನ ಸ್ವಾತಂತ್ರ ಚಳವಳಿಯಿಂದ ಪ್ರೇರಣೆ ಪಡೆದುಕೊಂಡಿದೆ. ಅದನ್ನು ಇಲ್ಲವಾಗಿಸಲು ಸಾಧ್ಯವಿಲ್ಲ ಎಂದ ಅವರು, ಇಂದಿನ ನಮ್ಮ ಸಂವಿಧಾನ ಉಳಿಸಿಕೊಳ್ಳಲು ಮತ್ತೊವ್ಮೆು ಚಳವಳಿ ರೂಪಿಸಬೇಕು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಚಳವಳಿ ರೂಪಿಸುವ ಮೊದಲು ಸಾಮಾನ್ಯ ಜನರಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದ ಅವರು, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಅಪಾಯದಲ್ಲಿದ್ದು, ಪ್ರಜಾತಂತ್ರ ವ್ಯವಸ್ಥೆಯನ್ನು ಇಲ್ಲವಾಗಿಸುವ ವ್ಯವಸಿ್ಥತ ಸಂಚು ನಡೆಯುತ್ತಿದೆ ಎಂದರು.

ಸಂವಿಧಾನ ರಕ್ಷಣೆ ಮಾಡಬೇಕಾದ ಆಡಳಿತ ವ್ಯವಸ್ಥೆಯಲ್ಲಿಂದು ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಆಶಯ ಹೊಂದಿರುವವರು ಅಧಿಕಾರ ನಡೆಸುತ್ತಿರುವುದು ಅಪಾಯಕಾರಿಯಾದುದು. ಲೋಕಸಭೆ, ರಾಜ್ಯಸಭೆ, ರಾಷ್ಟ್ರಾಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಅವರೇ ತುಂಬಿಕೊಂಡಿದ್ದಾರೆ. ಹೀಗಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ವಿಧದ ಭಾರತದ ಸಂವಿಧಾನ ಚರ್ಚೆಯಾಗುತ್ತಿದೆ ಎಂದು ನುಡಿದರು.

ಕಾರ್ಪೊರೇಟ್, ಬಂಡವಾಳಶಾಹಿಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಸಂವಿಧಾನವನ್ನು ಬದಲಾವಣೆ ಮಾಡಲು ಹಲವು ರೀತಿಯ ಸಿದ್ಧತೆಗಳು ನಡೆದಿದೆ. ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಸ್ಪಷ್ಟತೆಯಿಲ್ಲದ ಆರ್ಥಿಕ ನೀತಿಗಳು ಜಾರಿ ಮಾಡಿದರೆ, ಇಂದಿನ ಪ್ರಧಾನಿ ಮೋದಿ ಹಿಂದಿನ ನೀತಿಗಳ ಕುರಿತು ಕನಿಷ್ಟ ತಿಳಿವಳಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಮಾರುಕಟ್ಟೆ ವ್ಯವಸ್ಥೆ, ಕಾರ್ಪೊರೇಟ್ ವ್ಯವಸ್ಥೆಯಿಂದ ದೇಶ ಅಭಿವೃದ್ಧಿಯಾಗುವುದಿಲ್ಲ. ಬದಲಿಗೆ, ನಿರುದ್ಯೋಗ, ಅಸಮಾನತೆ, ಬಡತನ, ಶಿಕ್ಷಣ, ಆರೋಗ್ಯದ ಸ್ಥಿತಿ ಬದಲಾಗಬೇಕು ಎಂದು ವಿವರಿಸಿದರು.

ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳು ಹಾಗೂ ಮುಂದಿನ ವರ್ಷದಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಫ್ಯಾಶಿಸ್ಟ್, ಕೋಮುವಾದಿ ಶಕ್ತಿಗಳಿಗೆ ಅತ್ಯಂತ ಪ್ರಮುಖವಾದುದಾಗಿದೆ. ಈ ಚುನಾವಣೆಗಳಲ್ಲಿ ಜನರ ತೀರ್ಮಾನವೇ ಮುಂದಿನ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದ ಅವರು, ಇದುವರೆಗೂ ಗುಜರಾತ್‌ನಲ್ಲಿ ಬಿಜೆಪಿ ಹೇಳಿಕೊಂಡು ಬಂದ ಹಸಿ ಸುಳ್ಳುಗಳು ಬಯಲಾಗುತ್ತಿವೆ. ಜನ ಬಿಜೆಪಿಯನ್ನು ತಿರಸ್ಕರಿಸುತ್ತಿದ್ದಾರೆ ಹಾಗೂ ಅವರ ವಿರುದ್ಧ ತಿರುಗಿಬೀಳುತ್ತಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಎಡಪಂಥೀಯ, ಚಿಂತಕರು, ವಿಚಾರವಾದಿಗಳು, ಅಂಬೇಡ್ಕರ್‌ವಾದಿಗಳ ಮೇಲೆ ದಾಳಿ ನಡೆಸುತ್ತಿದೆ. ಅದರ ಭಾಗವಾಗಿ ದಿಲ್ಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪ್ರವೇಶಾವಕಾತಿಯನ್ನು ನಿಲ್ಲಿಸುವಂತೆ ಮಾಡಲಾಗಿದೆ. ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿನ ವಿಶ್ವವಿದ್ಯಾಲಯಗಳ ಮೇಲೆ ವ್ಯವಸ್ಥಿತ ಸಂಚು ರೂಪಿಸಿ ದಾಳಿ ಮಾಡುವಂತೆ ಕೋಮುವಾದಿಗಳಿಗೆ ಹಾಗೂ ಅದರ ಅಂಗ ಸಂಘಟನೆಗಳಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News