ರಾಜಕಾಲುವೆಗಳ ಕಾಮಗಾರಿ ಗಡುವಿನೊಳಗೆ ಪೂರ್ಣಗೊಳಿಸಿ : ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಬೆಂಗಳೂರು, ಡಿ. 15: ನಗರದ ರಾಜಕಾಲುವೆಗಳ ಪುನರ್ ವಿನ್ಯಾಸ ಕಾಮಗಾರಿಯನ್ನು ನಿರ್ದಿಷ್ಟ ಗಡುವಿನೊಳಗೆ ಮುಕ್ತಾಯಗೊಳಿಸಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಈ ಸಂಬಂಧ ಸಿಟಿಜನ್ ಆಕ್ಷನ್ಸ್ ಫೋರಂ (ಸಿಎಎಫ್) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಜಯ್ನ ಕೊಠಾರಿ ಅವರು ವಾದಿಸಿ, ರಾಜಕಾಲುವೆಗಳ ದುರಸ್ತಿ ಮತ್ತು ಸ್ವಚ್ಛತೆ ಹಾಗೂ ಪುನರ್ ವಿನ್ಯಾಸ ಕಾಮಗಾರಿಯನ್ನು ಬಿಬಿಎಂಪಿ ಇನ್ನೂ ಮುಕ್ತಾಯಗೊಳಿಸಿಲ್ಲ. ಕೆಲವೆಡೆ ಕಾಮಗಾರಿಯಿಂದ ರಸ್ತೆಗಳ ಮೇಲೆ ತ್ಯಾಜ್ಯ ಹೊರ ಹಾಕಲಾಗಿದ್ದು ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ರಮೇಶ್, ಏನ್ರೀ ಯುದ್ಧೋಪಾದಿಯಲ್ಲಿ ಕೆಲಸ ನಡೆಸುತ್ತಿದ್ದೀರಾ ಹೇಗೆ. ಬೆಂಗಳೂರು ಡ್ರೈನೇಜ್ ಗಾರ್ಬೇಜ್ಗೆ ಹೆಸರಾಗಿಬಿಟ್ಟಿದೆ ಎಂದು ಬಿಬಿಎಂಪಿ ಪರ ವಕೀಲರನ್ನು ಕೆಣಕಿದರು.
ಇದಕ್ಕೆ ಉತ್ತರಿಸಿದ ವಿ.ಶ್ರೀನಿಧಿ ಅವರು, ಸ್ವಾಮಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 2006 ರಿಂದ 2017ರ ಜುಲೈ 31ರವರೆಗೆ 177.02 ಕಿ.ಮೀ ಉದ್ದದ ರಾಜಕಾಲುವೆಗೆ ಹೊಸ ರೂಪ ನೀಡಲಾಗುತ್ತಿದೆ. ಇದಕ್ಕಾಗಿ ನಗರೋತ್ಥಾನ ಯೋಜನೆಯಡಿ 1367 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.
2016-17 ಮತ್ತು 2017-18ರ ಸಾಲಿನಲ್ಲಿ 1,100 ಕೋಟಿ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಪರಿಣಾಮ ಪ್ರವಾಹ ಉಂಟಾಗಿ ಹಾನಿ ಉಂಟಾದ ಪ್ರದೇಶಗಳಲ್ಲಿನ 20 ಕಿ.ಮೀ. ದುರಸ್ತಿಗೆ 96 ಕೋಟಿ ಒದಗಿಸಲಾಗಿದೆ ಎಂದು ತಿಳಿಸಿದರು.
ಈತನಕ 389 ಕಿ.ಮೀ.ಉದ್ದದಷ್ಟು ರಾಜಕಾಲುವೆಗೆ ಹೊಸ ವಿನ್ಯಾಸ ಒದಗಿಸಲಾಗಿದೆ. ಉಳಿದ 453 ಕಿ.ಮೀನಷ್ಟು ಕಾಮಗಾರಿ ಬಾಕಿ ಇದೆ. 1,988 ಕಡೆ ಒತ್ತುವರಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 1,225 ಒತ್ತುವರಿ ತೆರವುಗೊಳಿಸಲಾಗಿದೆ. ತೆರವುಗೊಳಿಸಬೇಕಾಗಿರುವ ಪ್ರದೇಶಗಳ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿದೆ. ಈ ಕುರಿತು ಭೂ ದಾಖಲೆಗಳ ಜಂಟಿ ನಿರ್ದೇಶಕ ಕಚೇರಿ ಜೊತೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದರು.
ಯಲಹಂಕ, ದಕ್ಷಿಣ, ಪೂರ್ವ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಒತ್ತುವರಿ ಗುರುತಿಸಲು ಸರ್ವೇಯರ್ಗಳ ನಿಯೋಜನೆ ಮಾಡಲಾಗಿದೆ. ಉಳಿದ ವಲಯಗಳಲ್ಲಿ ಸರ್ವೇಯರ್ಗಳ ನಿಯೋಜನೆಗೆ ಭೂ ದಾಖಲೆಗಳ ಜಂಟಿ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ಒತ್ತುವರಿ ಪ್ರದೇಶದ ಒಟ್ಟು ವ್ಯಾಪ್ತಿ 11 ಎಕರೆ 21 ಗುಂಟೆಯಷ್ಟು ಇದೆ. ಇದರ ಪುನರ್ ವಿನ್ಯಾಸಕ್ಕೆ 600 ಕೋಟಿ ರೂ.ಅಂದಾಜಿಸಲಾಗಿದೆ ಎಂದು ಶ್ರೀನಿಧಿ ವಿವರಿಸಿದರು.
ಈ ಕುರಿತಂತೆ ನ್ಯಾಯಪೀಠಕ್ಕೆ ಲಿಖಿತ ವಿವರಣೆ ನೀಡಲು ಶ್ರೀನಿಧಿ ಮುಂದಾದರು. ಆದರೆ, ಇದನ್ನು ಒಪ್ಪದ ನ್ಯಾಯಮೂರ್ತಿ ರಮೇಶ್, ರಾಜಕಾಲುವೆಗಳ ಪುನರ್ ವಿನ್ಯಾಸಕ್ಕೆ ಯಾರು ಹಣ ಕೊಡುತ್ತಾರೆ, ಎಷ್ಟು ಕೊಡಬೇಕು, ರಾಜಕಾಲುವೆ ನೀರು ಅಂತಿಮವಾಗಿ ಎಲ್ಲಿಗೆ ಹೋಗಿ ಸೇರುತ್ತದೆ. ಅದನ್ನು ಶುದ್ಧೀಕರಣ ಮಾಡಿ ಬಿಡಲಾಗುತ್ತದೆಯೇ ಹೇಗೆ ಅಥವಾ ಸುಮ್ಮನೇ ಹೇಗೆ ಹರಿಯುತ್ತದೊ ಹಾಗೇ ಬಿಡುತ್ತೀರೊ ಎಂಬ ಪ್ರಶ್ನೆಗಳ ಸುರಿಮಳೆಗರೆದರು.
ನೀವು ರಾಜಕಾಲುವೆ ದುರಸ್ತಿ, ಪುನರ್ ವಿನ್ಯಾಸವನ್ನು ವರ್ಷದುದ್ದಕ್ಕೂ ಹೀಗೆಯೇ ಮಾಡುತ್ತಲೇ ಇದ್ದರೆ ಹೇಗೆ ಎಂದು ಪ್ರಶ್ನಿಸಿದ ರಮೇಶ್, ನಾರ್ವೆಯಂತಹ ದೇಶದಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ನೆರೆಯ ದೇಶಗಳಿಗೂ ನಾರ್ವೆ ತಾನು ಉತ್ಪಾದಿಸಿದ ವಿದ್ಯುತ್ ಅನ್ನು ಮಾರಾಟ ಮಾಡುತ್ತದೆ. ಆದರೆ, ಅಂತರರಾಷ್ಟ್ರೀಯ ಖ್ಯಾತಿಯ ಬೆಂಗಳೂರು ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ನೀವು ರಾಜಕಾಲುವೆಗಳಿಗೆ ಹೊಸ ರೂಪ ಕೊಡುವುದನ್ನು ಇಂತಿಷ್ಟು ಸಮಯದಲ್ಲಿ ಪೂರೈಸಲೇಬೇಕು. ಇಲ್ಲದೇ ಹೋದರೆ ನ್ಯಾಯಾಲಯವೇ ನಿರ್ದಿಷ್ಟ ಗುಡುವು ನೀಡುತ್ತದೆ. ಈ ಕುರಿತಂತೆ ಮುಂದಿನ ವಿಚಾರಣೆ ವೇಳೆಗೆ ನಿಮ್ಮ ಕ್ರಿಯಾ ಯೋಜನೆಯ ವಿವರಗಳನ್ನು ಕೋರ್ಟ್ಗೆ ಸಲ್ಲಿಸಿ ಎಂದು ರಮೇಶ್ ಆದೇಶಿಸಿದರು. ವಿಚಾರಣೆಯನ್ನು 2018ರ ಜನವರಿ 23ಕ್ಕೆ ಮುಂದೂಡಲಾಗಿದೆ.