ಜನವರಿಯಿಂದ ದಲಿತ ಸಾಹಿತ್ಯ ಸಮ್ಮೇಳನ: ಡಾ.ವಸುಂಧರಾ ಭೂಪತಿ

Update: 2017-12-18 14:43 GMT

ಬೆಂಗಳೂರು. ಡಿ.18: ಮುಂದಿನ ವರ್ಷದ ಜನವರಿಯಿಂದ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ದಲಿತ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಪುಸ್ತಕ ಪ್ರಾಧಿಕಾರ ಮುಂದಾಗಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ದಲಿತ ಸಾಹಿತ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಜನವರಿಯ ಮೊದಲನೇ ವಾರದಲ್ಲಿ ದಾವಣಗೆರೆ, ಜ.15 ರ ನಂತರ ಬೀದರ್(ಬಸವ ಕಲ್ಯಾಣ), ಕೊನೆವಾರ ತುಮಕೂರು ಹಾಗೂ ಫೆಬ್ರವರಿ ಮೊದಲ ವಾರದಲ್ಲಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆಯಲಿವೆ ಎಂದು ವಿವರಿಸಿದರು. ರಾಜ್ಯಾದ್ಯಂತ ಪುಸ್ತಕಗಳ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಬೀದರ್‌ನಿಂದ ಮಡಿಕೇರಿವರೆಗೆ ಪುಸ್ತಕ ಜಾಥ ಹಮ್ಮಿಕೊಳ್ಳಲಾಗಿದ್ದು, ವಾಹನದಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ಈ ಜಾಥ ಒಂದು ಜಿಲ್ಲೆಯಲ್ಲಿ ಒಂದು ದಿನ ಸಂಚಾರ ಮಾಡಲಿದ್ದು, ಉದ್ಯಾನವನ, ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಜೊತೆಗೆ, ತುಮಕೂರು, ಬೀದರ್, ಗುಲಬರ್ಗಾ ಹಾಗೂ ಮಂಗಳೂರಿನಲ್ಲಿ ಪುಸ್ತಕ ವೆುೀಳ ಆಯೋಜಿಸಲಾಗುತ್ತಿದ್ದು, ಪ್ರತಿ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಈ ವೆುೀಳ ನಡೆಯಲಿದೆ ಎಂದು ಅವರು ತಿಳಿಸಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಕುರಿತು ಅರಿವು ಮೂಡಿಸುವ ಸಲುವಾಗಿ ಶಾಲಾ ಮಕ್ಕಳಿಗೆ ಅಚ್ಚುಮೆಚ್ಚು ಪುಸ್ತಕ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಜಾಣ-ಜಾಣೆಯರು ಎಂಬ ಸ್ಪರ್ಧೆಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದ್ದು, ವಿದ್ಯಾರ್ಥಿಗಳಿಗೇ ತಮಗೆ ಇಷ್ಟವಾದ ಪುಸ್ತಕ ಓದಿ ಚರ್ಚೆ ಮಾಡಬೇಕು. ಅನಂತರ ಜಿಲ್ಲಾ ಮಟ್ಟದಲ್ಲಿ ಉತ್ತಮ ಓದುಗರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಸಗಟು ಖರೀದಿ:ಪ್ರಾಧಿಕಾರದ ವತಿಯಿಂದ 2010-11 ರಿಂದ ಸಗಟು ಖರೀದಿ ಮಾಡುವುದನ್ನು ನಿಲ್ಲಿಸಲಾಗಿತ್ತು. ಇದೀಗ ನಾವು ಆರಂಭ ಮಾಡಲಾಗುತ್ತಿದ್ದು, 14-15 ನೆ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳನ್ನು ಸಗಟು ಖರೀದಿ ಮೂಲಕ ಆಯ್ಕೆ ಮಾಡಿ ಖರೀದಿ ಮಾಡಲಾಗುತ್ತಿದೆ. ಈ ಬಾರಿ ಲೇಖಕರಿಂದ 7 ಸಾವಿರ ಹಾಗೂ ಪ್ರಕಾಶಕರಿಂದ 1 ಲಕ್ಷ ರೂ.ಗಳಿಗೆ ಖರೀದಿ ಮಾಡಲಾಗುತ್ತಿದೆ. ಮುಂದಿನ ಸಾಲಿನಿಂದ ಲೇಖಕರಿಂದ 15 ಸಾವಿರ ಹಾಗೂ ಪ್ರಕಾಶಕರಿಂದ ಒಂದೂವರೆ ಲಕ್ಷ ರೂ.ಗಳ ಮೊತ್ತದ ಪುಸ್ತಕ ಖರೀದಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ವಸುಂಧರಾ ಭೂಪತಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News