‘‘ಇಂತಹ ಸಂಗತಿಗಳು ನಡೆಯುತ್ತವೆ’’- ಸೈನಿಕರನ್ನು ಬಲಿ ತೆಗೆದುಕೊಂಡ ಉಗ್ರರ ದಾಳಿಗೆ ಬಿಜೆಪಿ ಸಂಸದನ ಪ್ರತಿಕ್ರಿಯೆ

Update: 2018-01-02 05:49 GMT

ಹೊಸದಿಲ್ಲಿ, ಜ.2: ‘‘ಇಂತಹ ಸಂಗತಿಗಳು ನಡೆಯುತ್ತವೆ’’- ಇದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಇತ್ತೀಚೆಗೆ ನಡೆದ ಉಗ್ರ ದಾಳಿಗಳಲ್ಲಿ ಸೈನಿಕರು ಹುತಾತ್ಮರಾದ ಬಗ್ಗೆ ಬಿಜೆಪಿ ಸಂಸದ ನೇಪಾಳ್ ಸಿಂಗ್‌ ಪ್ರತಿಕ್ರಿಯಿಸಿದ ರೀತಿ.

‘‘ಜವಾನರು ಸೇನೆಗೆ ಕೆಲಸ ಮಾಡುವುದರಿಂದ ಹಾಗೂ ಅವರಿರುವ ವೃತ್ತಿಯಿಂದಾಗಿ ಅವರು ಸಾವನ್ನು ನಿರೀಕ್ಷಿಸಬೇಕು’’ ಎಂದೂ ಉತ್ತರ ಪ್ರದೇಶದ ರಾಮಪುರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿಂಗ್ ಹೇಳಿದ್ದಾರೆ.

‘‘ಸೇನೆಯಲ್ಲಿ ಪ್ರತೀ ದಿನ ಸೈನಿಕರು ಸಾವನ್ನಪ್ಪುತ್ತಾರೆ. ಸೈನಿಕರು ಸಾವನ್ನಪ್ಪದೇ ಇರುವ ಯುದ್ಧ ನಡೆದ ದೇಶ ಜಗತ್ತಿನಲ್ಲಿಯೇ ಇಲ್ಲ. ಇಂತಹ ಸಂಗತಿಗಳು ನಡೆಯುತ್ತವೆ’’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಅಸಂವೇದಿತನದ ಮಾತುಗಳ ಬಗ್ಗೆ ಅವರನ್ನು ನಂತರ ಪ್ರಶ್ನಿಸಿದಾಗ ತಾನು ಸೇನೆಯನ್ನು ಅವಮಾನಿಸುವ ಉದ್ದೇಶ ಹೊಂದಿಲ್ಲ ಎಂದವರು ಹೇಳಿದ್ದಾರೆ. ‘‘ ನನಗೆ ದುಃಖವೂ ವಿಷಾದವೂ ಆಗುತ್ತಿದೆ. ನಾನು ಅವಮಾನಕಾರಿಯಾಗಿರುವಂತಹ ಮಾತುಗಳನ್ನೇನು ಆಡಿಲ್ಲ’’ ಎಂದು ಅವರು ಹೇಳಿದ್ದಾರೆ.

ಇಸ್ರೇಲ್ ಮಾಡಿದಂತೆ ಭಾರತ ತನ್ನ ಸೈನಿಕರ ಸುರಕ್ಷತೆಗೆ ಕ್ರಮವೇಕೆ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರ ನೀಡಿದರು. ‘‘ಮನುಷ್ಯರ ಸಾವನ್ನು ತಡೆಯಬಹುದಾದ ಸಾಧನದ ಬಗ್ಗೆ ನಿಮಗೆ ಗೊತ್ತೇನು? ಹಾಗಿದ್ದರೆ ಗುಂಡುಗಳನ್ನು ನಿಷ್ಕ್ರಿಯಗೊಳಿಸಬಲ್ಲ ಸಾಧನವಿದ್ದರೆ ನನಗೆ ತಿಳಿಸಿ. ಅದನ್ನು ನಮ್ಮ ಸೈನಿಕರಿಗಾಗಿ ಉಪಯೋಗಿಸುತ್ತೇವೆ.’’
ಪಾಕಿಸ್ತಾನ ಪ್ರೇರಿತ ಉಗ್ರ ದಾಳಿಗಳನ್ನು ಗ್ರಾಮಗಳಲ್ಲಿ ನಡೆಯುವ ಜಗಳಗಳಿಗೆ ಅವರು ಹೋಲಿಸಿದ್ದಾರೆ. ‘‘ಗ್ರಾಮಸ್ಥರು ತಮ್ಮೊಳಗೆ ಜಗಳ ಮಾಡುವಾಗ ಕೆಲವರು ಗಾಯಗೊಳ್ಳುತ್ತಾರೆ’’ ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News