×
Ad

ಬೆಂಗಳೂರು: ಅರಕಲಗೂಡಿನಲ್ಲಿ ಜ.4 ರಿಂದ ಪಶುಮೇಳ

Update: 2018-01-03 18:39 IST

ಬೆಂಗಳೂರು, ಜ.3: ಪಶುಪಾಲನೆ, ವೈದ್ಯಕೀಯ ಇಲಾಖೆ ಜ.4 ರಿಂದ ಎರಡು ದಿನಗಳ ಕಾಲ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಕ್ರೀಡಾಂಗಣದಲ್ಲಿ ಪಶುಮೇಳ ಆಯೋಜಿಸಲಾಗಿದೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶುಪಾಲನೆ, ವೈದ್ಯಕೀಯ ಇಲಾಖೆ ನಿರ್ದೇಶಕ ಮಂಜುನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ ಪಶು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಪಶು ಸಂಗೋಪನೆ ಸಚಿವ ಎ.ಮಂಜು ಅಧ್ಯಕ್ಷತೆ ವಹಿಸಲಿದ್ದು, ಗಣಿ ಇಲಾಖೆ ಸಚಿವ ವಿನಯ್ ಕುಲಕರ್ಣಿ, ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ಹಾಸನ ಜಿ.ಪಂ.ಅಧ್ಯಕ್ಷೆ ಶ್ವೇತಾ ದೇವರಾಜ್ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ರೈತರಿಗೆ ವಿವಿಧ ಜಾನುವಾರು ತಳಿಗಳ ಪರಿಚಯ ಹಾಗೂ ನಿರ್ವಹಣೆ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಉದ್ದೇಶದಿಂದ ಪಶುಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ನಿರುದ್ಯೋಗಿ ಯುವಕ, ಯುವತಿಯರು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ, ಒಂದೇ ಸೂರಿನಡಿ ಇಲಾಖೆಯ ಯೋಜನೆಗಳ ಮಾಹಿತಿ ನೀಡಲಾಗುವುದು. ಪಶು ಸಂಗೋಪನೆಯಲ್ಲಿ ಸಾಧನೆಗೈದ ರೈತರ ಜತೆ ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕೋಳಿ ತಳಿ, ರೇಷ್ಮೆಹುಳು ಸಾಕಾಣಿಕೆ ಕುರಿತಂತೆ ತಾಂತ್ರಿಕ ಮಾಹಿತಿ, ಕಿರುಚಿತ್ರ ಪ್ರದರ್ಶನದ ಮೂಲಕ ನೂತನ ಆವಿಷ್ಕಾರಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುವುದು. ದೇಶಿಯ ಜಾನುವಾರು 9 ತಳಿ, ವಿದೇಶಿ ಜಾನುವಾರು 2, 9 ಕುರಿ, 5 ಮೇಕೆ, 4 ಎಮ್ಮೆ ತಳಿ, 4 ಹಂದಿ, 5 ದೇಶೀಯ ಕೋಳಿ, ಬಾತುಕೋಳಿ ಸೇರಿದಂತೆ 4 ಮೊಲದ ತಳಿಗಳನ್ನು ಪ್ರದರ್ಶನದಲ್ಲಿಟ್ಟು ಮಾಹಿತಿ ನೀಡಲಾಗುವುದೆಂದು ವಿವರಿಸಿದರು.

ಮೇಳದಲ್ಲಿ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಿದ್ದು, ವಿಜೇತ ಹಸುವಿನ ಮಾಲಕರಿಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ. ಹಸುಗಳ ತಳಿಗಳ ಆಧಾರದ ಮೇಲೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ, 50 ಸಾವಿರ, 30 ಸಾವಿರ ಹಾಗೂ 20 ಸಾವಿರ ನಗದು ಬಹುಮಾನ ನೀಡಲಾಗುವುದೆಂದರು. ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಜಾನುವಾರುಗಳಿಗೆ ಕರ್ನಾಟಕ ಹಾಲು ಮಹಾ ಮಂಡಳಿಯಿಂದ 10 ಕೆ.ಜಿ ಉಚಿತ ಆಹಾರ ನೀಡಲಾಗುವುದು. ಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಎನ್‌ಇಸಿಪಿಪಿ ವತಿಯಿಂದ ಬೇಯಿಸಿದ ಮೊಟ್ಟೆ, ಹಾಲು, ಮಜ್ಜಿಗೆಯನ್ನು ಉಚಿತವಾಗಿ ವಿತರಿಸಲಾಗುವುದೆಂದು ಹೇಳಿದರು. ಪಶು ಅಭಿವೃದ್ಧಿ ಇಲಾಖೆ ಹಾಗೂ ಖಾಸಗಿ ಕಂಪನಿಗಳ ಸಹಯೋಗದಲ್ಲಿ 200 ಮಳಿಗೆಗಳನ್ನು ತೆರೆಯಲಾಗುವುದೆಂದು ಮಂಜುನಾಥ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News