×
Ad

200 ಕೋಟಿ ರೂ.ಮೊತ್ತದ ಭೂಮಿ ಡಿ-ನೋಟಿಫೈ: ಸಿಎಂ ವಿರುದ್ಧ ಆರ್.ಅಶೋಕ್ ಆರೋಪ

Update: 2018-01-03 19:29 IST

ಬೆಂಗಳೂರು,ಜ.3: ಉದ್ಯಾನವನಕ್ಕೆ ಮೀಸಲಿಟ್ಟ 200 ಕೋಟಿ ರೂ.ಗಳಿಗೂ ಅಧಿಕ ಮೊತ್ತದ 2.39 ಎಕರೆ ಭೂಮಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಉಲ್ಲಂಘಿಸಿ ಡಿ-ನೋಟಿಫೈ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ಮಲ್ಲೇಶ್ವರಂ ಬಿಜೆಪಿ ಕೇಂದ್ರ ಕಚೇರಿಯ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಮಹಾರಾಜರ ಕಾಲದಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಮೀನನ್ನು ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘಿಸಿ ಡಿ-ನೋಟಿಫೈ ಮಾಡಲಾಗಿದೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

2014ರ ನವೆಂಬರ್ 18ರಂದು ಸಿದ್ದರಾಮಯ್ಯ ‘ರೀಡು’ ಹೆಸರಿನಲ್ಲಿ ಡಿ-ನೋಟಿಫೈ ಮಾಡಿದ್ದು, ಬೆಂಗಳೂರು ದಕ್ಷಿಣ ತಾಲೂಕು ಕಸಬಾ ಹೋಬಳಿಯ ಲಾಲ್‌ಬಾಗ್ ಸಿದ್ದಾಪುರ ಗ್ರಾಮದ(ಜಯನಗರ 1ನೆ ಬ್ಲಾಕ್) ಸರ್ವೆ ನಂ.27/1, 28/4, 28/5 ಮತ್ತು 28/6ರ 2.39 ಎಕರೆ ವಿಸ್ತೀರ್ಣದ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ ಎಂದು ದೂರಿದರು.

ಖಾಸಗಿ ಬಿಲ್ಡರ್ ಕಂಪೆನಿಗೆ ಡಿನೋಟಿಫೈ ಮಾಡಿದ್ದು, ಸಿದ್ದರಾಮಯ್ಯ ಯಾವ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಿದ್ದಾರೆಂಬುದು ಗೊತ್ತಾಗಬೇಕು. ಸಾರ್ವಜನಿಕರಿಗೆ ಮೀಸಲಿಟ್ಟ ಜಮೀನು ಡಿನೊಟಿಫೈ ಮಾಡಿರುವುದನ್ನು ಖಂಡಿಸಿ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಮುಖಂಡರಾದ ಅಶ್ವಥ್ ನಾರಾಯಣ, ಮಾಳವಿಕ ಸೇರಿದಂತೆ ಇನ್ನಿತರರು ಹಾಜರಿದ್ದರು

ಮುಖ್ಯಮಂತ್ರಿ ವಿರುದ್ಧದ ಡಿನೋಟಿಫಿಕೇಷನ್ ಆರೋಪ ನಿರಾಧಾರ: ಡಾ.ಬಿ.ಎಲ್.ಶಂಕರ್
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಆರ್.ಅಶೋಕ್ ಮಾಡಿರುವ ಡಿನೋಟಿಫಿಕೇಷನ್ ಆರೋಪವು ನಿರಾಧಾರ ಎಂದು ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್ ತಿರುಗೇಟು ನೀಡಿದರು.

ಬುಧವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಟಿಸಿಪಿ ಉಪಕಾಯ್ದೆ 69(2) ವ್ಯಾಪ್ತಿಯಲ್ಲಿ ಲಾಲ್ ಬಾಗ್ ಸಿದ್ದಾಪುರ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ 2 ಎಕರೆ 39.50 ಗುಂಟೆ ಜಮೀನನ್ನು ಬದಲಾವಣೆ ಮಾಡಲಾಗಿದೆ ಎಂದರು.
ಪ್ರೀತಿ ರಂಕಾ ಎಂಬವರು 2011ರ ಜು.21ರಂದು ಉದ್ಯಾನವನ ಹಾಗೂ ಖಾಲಿ ಭೂಮಿಯನ್ನು ವಾಸಯೋಗ್ಯ ನಿವೇಶನವನ್ನಾಗಿ ಪರಿವರ್ತಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ 1948ರಲ್ಲಿ ಕನಕಪಾಳ್ಯ ಬಡಾವಣೆಗೆ ಸೇರಿದ್ದ ಈ ಭೂಮಿಯನ್ನು ಯಾವುದೇ ಪೂರ್ವಭಾವಿ ಸೂಚನೆಗಳಿಲ್ಲದೆ 1954ರ ಸೆ.30ರಂದು ಅಧಿಸೂಚನೆಯಿಂದ ಹಿಂಪಡೆಯಲಾಗಿತ್ತು ಎಂದು ಅವರು ಹೇಳಿದರು.

1954ರ ಫೆ.11ರಂದು ಮೈಸೂರು ಗೆಜೆಟ್‌ನಲ್ಲಿ ಡಿನೋಟಿಫಿಕೇಶನ್ ಪ್ರಕಟಿಸಲಾಯಿತು. ಆರ್‌ಸಿಡಿಪಿ-1995ರಲ್ಲಿ ಅದನ್ನು ವಾಸಯೋಗ್ಯ ನಿವೇಶನವೆಂದು ಪರಿಗಣಿಸಲಾಗಿತ್ತು. ತರುವಾಯ ಆರ್‌ಎಂಪಿ-2015ರ ಕರಡು ಪ್ರತಿಯಲ್ಲೂ ವಾಸಯೋಗ್ಯ ನಿವೇಶನವೆಂದೇ ನಮೂದಿಸಲಾಗಿತ್ತು. ಆದರೆ ಅಂತಿಮ ಆರ್‌ಎಂಪಿ-2015ರಲ್ಲಿ ಇದನ್ನು ಉದ್ಯಾನ ಮತ್ತು ಖಾಲಿ ಜಾಗವೆಂದು ಗೊತ್ತುಪಡಿಸಲಾಯಿತು ಎಂದು ಶಂಕರ್ ತಿಳಿಸಿದರು.

ಭೂ ಪರಿವರ್ತನೆಯ ಅರ್ಜಿ ಪಡೆದು ಸ್ಥಾನಿಯ ಇಂಗ್ಲಿಷ್ ದಿನಪತ್ರಿಕೆಯಲ್ಲಿ 2012ರ ಮೇ 12ರಂದು ಪತ್ರಿಕಾ ಪ್ರಕಟಣೆಯನ್ನು ನೀಡಲಾಯಿತು. 15 ದಿನಗಳಲ್ಲಿ ಯಾವುದಾದರು ಆಕ್ಷೇಪಣೆಗಳು ಮತ್ತು ಸಲಹೆಗಳಿದ್ದಲ್ಲಿ ತಿಳಿಸಬೇಕೆಂದು ಕೋರಲಾಯಿತು. ಆದರೆ, ನಿಗದಿತ ದಿನಾಂಕದವರೆಗೆ ಯಾವುದೇ ಆಕ್ಷೇಪಗಳು, ಸಲಹೆಗಳು ಬರಲಿಲ್ಲ. ಆದರೆ, ನಂತರ ಆಕಾಶ್ ರಂಕಾ, ಕೆ.ಎ.ಮೂರ್ತಿ ಮತ್ತು ವಿಜಯಸಾರಥಿ ಎಂಬವರಿಂದ ಆಕ್ಷೇಪಗಳು ಬಂದವು ಎಂದು ಅವರು ಹೇಳಿದರು.

2014ರ ಫೆ.18ರಲ್ಲಿ ಭೂ ಪರಿವರ್ತನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಆನಂತರ, ಸರಕಾರವು ನ.18ರಂದು ಭೂ ಪರಿವರ್ತನೆಗೆ ಅನುಮೋದನೆ ನೀಡಿತು. ಪುನಃ ಇದೇ ವಿಷಯವು ಸಂಬಂಧಿಸಿದ ಅಧಿಕಾರಸ್ಥರ ಮುಂದೆ ಪ್ರಸ್ತಾಪಿಸಲ್ಪಟ್ಟಿತು. ಸಂಬಂಧಿಸಿದ ಅಧಿಕಾರಿಗಳು ಉದ್ಯಾನವನ ಮತ್ತು ಖಾಲಿ ಜಾಗವನ್ನು ನಿವೇಶನವನ್ನಾಗಿ ಪರಿವರ್ತಿಸಲು ಒಪ್ಪಿಗೆ ಸೂಚಿಸಿದರು ಎಂದು ಶಂಕರ್ ತಿಳಿಸಿದರು.

ಭೂ ಪರಿವರ್ತನೆ ನಿರ್ಧಾರ ಹಿಂಪಡೆದ ಬಿಡಿಎ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ರಿಟ್ ಅಪೀಲ್ ಸಲ್ಲಿಸಿದರು. ಅದರಂತೆ, ಮೊದಲ ಪರಿಹಾರವಾಗಿ ರಾಜ್ಯ ಸರಕಾರದ ಆದೇಶವನ್ನು ಅನಾವಶ್ಯಕವಾಗಿ ಅಸಿಂಧುಗೊಳಿಸಲಾಗಿದೆ. ಇದರ ಘೋಷಣೆಯ ಅನುಸಾರವಾಗಿ, ಉದ್ಯಾನವನ ಮತ್ತು ಖಾಲಿ ಸ್ಥಳಕ್ಕಾಗಿ ಉದ್ದೇಶಿಸಲಾಗಿದ್ದ ಲಾಲ್ ಬಾಗ್ ಸಿದ್ದಾಪುರ ಗ್ರಾಮದ 2 ಎಕರೆ 39.50 ಗುಂಟೆ ಸ್ಥಿರಾಸ್ತಿಗೆ ಸಂಬಂಧಿಸಿದ ಯೋಜನೆಯನ್ನು 2015ರ ಮಾಸ್ಟರ್ ಪ್ಲಾನ್ ಪ್ರಕಾರ ರದ್ದುಗೊಳಿಸಲಾಗಿದೆ. ಅದೇ ಸಂದರ್ಭದಲ್ಲಿ ಅರ್ಜಿದಾರರಿಗೆ ಸಂಬಂಧಿಸಿದ ಈ ಸ್ಥಿರಾಸ್ತಿಯಲ್ಲಿ ವಸತಿಯ ಉದ್ದೇಶಕ್ಕಾಗಿ ಭೂಮಿಯನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.

ಆಕಾಶ್ ರಂಕಾ, ಲೋಕಾಯುಕ್ತ ಕಚೇರಿಗೂ ದೂರು ಸಲ್ಲಿಸಿದ್ದಾರೆ. ಲೋಕಾಯುಕ್ತರೂ ಬಿಡಿಎಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸವಿವರವಾದ ವರದಿಯನ್ನು ಸಲ್ಲಿಸಲು ಆದೇಶ ನೀಡಿದ್ದಾರೆ. ಅದರಂತೆ, ಬಿಡಿಎ 2016ರ ಮಾ.28ರಂದು ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದೆ ಎಂದು ಶಂಕರ್ ತಿಳಿಸಿದರು.
ಆಕಾಶ್ ರಂಕಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ 2017ರ ಜು.6ರಂದು ವಜಾಗೊಳಿಸಿದೆ. ಇದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಪ್ರಸ್ತುತ ಈ ವಿಚಾರವು ಸುಪ್ರೀಂಕೋರ್ಟ್ ಎದುರಿದೆ. ಹೈಕೋರ್ಟ್ ನೀಡಿದ್ದ ಆದೇಶವನ್ನಷ್ಟೇ ಸರಕಾರ ಪಾಲನೆ ಮಾಡಿದೆ ಎಂದು ಅವರು ಹೇಳಿದರು.

ಮೇಲ್ನೋಟಕ್ಕೆ ಯಾವುದೋ ದಾಖಲೆಗಳನ್ನಿಟ್ಟುಕೊಂಡು ಅಶೋಕ್ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬಂದು ಹೋಗಿರುವುದರಿಂದ ಅಶೋಕ್, ಅಮಿತ್ ಶಾರನ್ನು ಮೆಚ್ಚಿಸಲು ಈ ರೀತಿಯ ಆರೋಪಗಳನ್ನು ಮಾಡಿದ್ದಾರೆ.
-ಬಿ.ಎಲ್.ಶಂಕರ್ ಕೆಪಿಸಿಸಿ ಹಿರಿಯ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News