ಜೀವಪರ ಚಿಂತನೆಗೆ ಅಡಿಗರ ಸಾಹಿತ್ಯದ ಮರು ಓದು ಅಗತ್ಯ: ನರಹಳ್ಳಿ ಬಾಲಸುಬ್ರಹ್ಮಣ್ಯ
ಬೆಂಗಳೂರು, ಜ.6: ಸರ್ವಾಧಿಕಾರಿ ಧೋರಣೆಯ ರಾಜಕೀಯ ವ್ಯವಸ್ಥೆ ಹಾಗೂ ಬಂಡವಾಳಶಾಹಿ ಪ್ರೇರಿತ ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಗೋಪಾಲಕೃಷ್ಣ ಅಡಿಗರ ಬರಹಗಳು ನಮ್ಮ ಆಲೋಚನೆಯನ್ನು ಜೀವಪರವಾಗಿ ಕಟ್ಟುವಲ್ಲಿ ಸಾಕಷ್ಟು ಕೊಡುಗೆ ನೀಡಬಲ್ಲದು ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಶನಿವಾರ ಸಾಹಿತ್ಯ ಅಕಾಡೆಮಿ ಹಾಗೂ ಬೆಂಗಳೂರು ಕೇಂದ್ರಿಯ ವಿವಿ ವತಿಯಿಂದ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಕವಿ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ರೀತಿಯ ಸರ್ವಾಧಿಕಾರಿ ಧೋರಣೆಗಳನ್ನು ವಿರೋಧಿಸುವುದೇ ಗೋಪಾಲಕೃಷ್ಣ ಅಡಿಗರ ಸಾಹಿತ್ಯದ ಮೂಲ ಧಾತುವೆಂದು ತಿಳಿಸಿದರು.
ಪ್ರಸಕ್ತ ದಿನಗಳಲ್ಲಿ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರ ಜೀವವನ್ನೇ ತೆಗೆಯುವಂತಹ ವಿಷಮಯ ಸ್ಥಿತಿಯಿದೆ. ವ್ಯಕ್ತಿಯೊಬ್ಬ ತನ್ನ ಆಲೋಚನೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಲು ಸಾಧ್ಯವಿಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಕವಿ ಗೋಪಾಲಕೃಷ್ಣ ಅಡಿಗರ ಚಿಂತನೆ -ಬರಹಗಳು ದುಷ್ಟಶಕ್ತಿಗಳನ್ನು ಸಮರ್ಥವಾಗಿ ಎದುರಿಸುವಂತಹ ನೈತಿಕ ಸ್ಥೈರ್ಯ ನೀಡಬಲ್ಲವು ಎಂದು ಅವರು ಹೇಳಿದರು.
ಆಧುನಿಕ ಬಂಡವಾಳಶಾಹಿ ವರ್ಗವು ವ್ಯಕ್ತಿಯ ಖಾಸಗಿತನವನ್ನು ನಾಶಮಾಡಿ ಯಂತ್ರದ ಒಂದು ಭಾಗವನ್ನಾಗಿಸುತ್ತಿದೆ. ವೇಗದ ಜೀವನದಲ್ಲಿ ಯಾರೂ ಅರೆಕ್ಷಣ ನಿಂತು ತನ್ನ ಸುತ್ತಮುತ್ತಲಿನ ಪರಿಸರವನ್ನು, ಜನರನ್ನು ನೋಡುವ ಸ್ಥಿತಿಯಲಿಲ್ಲ. ಇದು ಮನುಷ್ಯನೊಳಗಿರುವ ಪ್ರೀತಿ, ಸ್ನೇಹ, ವಿಶ್ವಾಸವನ್ನು ನಾಶಮಾಡುವಂತಹ ಪ್ರವೃತ್ತಿಯಾಗಿದೆ. ಇಂತಹ ಯಾಂತ್ರಿಕ ಮನಸ್ಥಿತಿಯಿಂದ ಹೊರಬರಲು ಸಾಹಿತ್ಯ ನಮಗೆ ನೆರವಾಗಬಲ್ಲದು ಎಂದು ಅವರು ಹೇಳಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ಒಂದು ತಲೆಮಾರಿನ ಕಣ್ಣು ತೆರೆಸಿದ ನಮ್ಮೆಲ್ಲರ ನೆಚ್ಚಿನ ಕವಿ ಗೋಪಾಲಕೃಷ್ಣ ಅಡಿಗರು ನಂಬಿದ್ದು, ನೋಡಿದ್ದು ಹಾಗೂ ಮಾತನಾಡಿದೆಲ್ಲವೂ ಒಂದೇ ಆಗಿತ್ತು. ಎಲ್ಲಿಯೂ ದ್ವಂದ್ವಾರ್ಥ ಬರುವಂತೆ ಮಾತನಾಡುತ್ತಿರಲಿಲ್ಲ. ತನ್ನ ಮಾತಿನಲ್ಲಿ ಸತ್ಯ ಹಾಗೂ ಖಚಿತತೆಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು ಎಂದು ಸ್ಮರಿಸಿದರು.
ವಚನಕಾರರು ತಮ್ಮ ಜೀವನದ ಅನುಭವದ ಸಾರವನ್ನೇ ವಚನಗಳ ಮೂಲಕ ಕಟ್ಟಿಕೊಡುತ್ತಿದ್ದರು. ಅವರಂತೆಯೇ ಕವಿ ಗೋಪಾಲಕೃಷ್ಣ ಅಡಿಗರು ಯಾರೋ ಹೇಳಿದ್ದನ್ನು, ನೋಡಿದ್ದನ್ನು ಬರೆಯುತ್ತಿರಲಿಲ್ಲ. ತಮ್ಮ ಚಿಂತನೆಗಳನ್ನು ಅನುಭವೀಕರಿಸಿ, ಅದರಿಂದ ಮೂಡಿದಂತಹ ಸತ್ಯಾಂಶಗಳನ್ನು ಬರಹರೂಪಕ್ಕಿಳಿಸುತ್ತಿದ್ದರು ಎಂದು ಅವರು ಹೇಳಿದರು.
ತಮಿಳಿನ ಹಿರಿಯ ಸಾಹಿತಿ ಸಿರ್ಪಿ ಬಾಲಸುಬ್ರಹ್ಮಣ್ಯಂ ಮಾತನಾಡಿ, ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸ ಆಲೋಚನಾ ಲಹರಿಯನ್ನು ನೀಡಿದವರು ಗೋಪಾಲಕೃಷ್ಣ ಅಡಿಗರು. ಅವರ ಕಾವ್ಯ, ಕತೆಗಳು ಹಾಗೂ ಪ್ರಬಂಧಗಳು ವಿಮರ್ಶಕರಿಗೆ ಸಾಕಷ್ಟು ಪ್ರಭಾವ ಬೀರಿವೆ. ಒಂದು ತಲೆಮಾರಿನ ಯುವ ಸಾಹಿತಿಗಳಿಗೆ ಕಣ್ಣೋಟ ನೀಡಿದ ಸಾಹಿತಿಯೆಂದು ಅವರು ತಿಳಿಸಿದರು.
ಅಡಿಗರ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದ ನಂತರ ಹಿರಿಯ ಸಾಹಿತಿಗಳಾದ ಎಚ್.ಎಸ್.ಶಿವಪ್ರಕಾಶ್, ರಾಮಕುಮಾರ್ ಮುಖ್ಯೋಪಾಧ್ಯಾಯ, ಗೋವಿಂದ ರಾಜರೇಕರ್, ಎಚ್.ಎಸ್.ರಾಘವೇಂದ್ರರಾವ್ ಗೋಪಾಲಕೃಷ್ಣ ಅಡಿಗರ ಬದುಕು ಸಾಹಿತ್ಯದ ಕುರಿತು ಮಾತನಾಡಿದರು.