×
Ad

ದಕ್ಷಿಣ ಕನ್ನಡ ಜಿಲ್ಲೆ ಕೆಳಹಂತದ ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಕ್ರಮ: ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2018-01-08 18:07 IST

ಬೆಂಗಳೂರು, ಜ. 7: ದಕ್ಷಿಣ ಕನ್ನಡ ಜಿಲ್ಲೆ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಎಸ್ಸೈ, ಇನ್ಸ್‌ಪೆಕ್ಟರ್ ಸೇರಿದಂತೆ ಕೆಳಹಂತದ ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡುವ ಬಗ್ಗೆ ಐಜಿಪಿಯಿಂದ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೆಳಹಂತದ ಪೊಲೀಸ್ ಸಿಬ್ಬಂದಿ ‘ಒಂದು ವಿಚಾರಧಾರೆ’ಗೆ ಬದ್ಧವಾಗಿರುವ ಕಾರಣಕ್ಕೆ ಜಿಲ್ಲೆಯಲ್ಲಿ ಪದೇ ಪದೇ ಸಂಘರ್ಷ ಏರ್ಪಡುತ್ತಿದೆ’ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ರಾಜ್ಯದ 30 ಜಿಲ್ಲೆಗಳ ಪೈಕಿ ನಾಲ್ಕೈದು ಜಿಲ್ಲೆಗಳನ್ನು ಸೇರಿಸಿ ಏಳು ವಲಯಗಳನ್ನು ರಚಿಸಲಾಗಿದೆ. ಆಯಾ ವಲಯದಲ್ಲಿರುವ ಕೆಳಹಂತದ ಸಿಬ್ಬಂದಿ ಅದೇ ವಲಯದಲ್ಲೆ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಹಿರಿಯ ಅಧಿಕಾರಿಗಳೆಲ್ಲ ಒಳ್ಳೆಯವರಿದ್ದು, ಕೆಳಹಂತದ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಕೆಲ ಜಿಲ್ಲೆಗಳು ಕೋಮುಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದ್ದು, ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುವ ಸಿಬ್ಬಂದಿಯನ್ನೇ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ತನಿಖೆಯಿಂದ ಬಯಲು: ದೀಪಕ್ ರಾವ್ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಿದ್ದು, ಮತ್ತಿಬ್ಬರು ಆರೋಪಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ವಿಚಾರಣೆ ಬಳಿಕ ದೀಪಕ್ ರಾವ್ ಹತ್ಯೆಯ ಹಿಂದೆ ಯಾರಿದ್ದಾರೆಂಬುದು ಗೊತ್ತಾಗಲಿದೆ ಎಂದು ರಾಮಲಿಂಗಾರೆಡ್ಡಿ, ಎಚ್‌ಡಿಕೆ ಹೇಳಿಕೆಗೆ ಸ್ಪಷ್ಟಣೆ ನೀಡಿದರು.

ದೀಪಕ್ ಹತ್ಯೆಯ ಹಿಂದೆ ಸ್ಥಳೀಯ ಬಿಜೆಪಿ ಕಾರ್ಪೋರೇಟ್‌ವೊಬ್ಬರ ಕೈವಾಡದ ಬಗ್ಗೆ ಪೊಲೀಸ್ ತನಿಖೆಗೆ ಮೊದಲೇ ಏನೂ ಹೇಳಲು ಆಗುವುದಿಲ್ಲ. ಹಿರಿಯ ಅಧಿಕಾರಿಗಳು ಮಂಗಳೂರಿನಲ್ಲೇ ಮೊಕ್ಕಾಂ ಹೂಡಿದ್ದು, ಶೀಘ್ರದಲ್ಲೆ ಸತ್ಯಾಂಶ ಬಹಿರಂಗಪಡಿಸಲಿದ್ದಾರೆ ಎಂದು ಅವರು ನುಡಿದರು.

ರಾಜಕೀಯ ಪಕ್ಷಗಳ ಮುಖಂಡರು ಹೊಣೆಗಾರಿಕೆಯಿಂದ ಮಾತನಾಡಬೇಕು. ತಮ್ಮ ತತ್ವ-ಸಿದ್ಧಾಂತಗಳು, ತಾವು ನೀಡಿದ ಆಶ್ವಾಸನೆಗಳು-ಅವುಗಳ ಈಡೇರಿಕೆ ಆಧರಿಸಿ ಮತ ಕೆಳಬೇಕೇ ಹೊರತು ಜಾತಿ-ಧರ್ಮ, ವೈಯಕ್ತಿಕ ವಿಚಾರಗಳನ್ನು ಆಧರಿಸಿ ಮತ ಕೇಳುವುದು ಸಲ್ಲದು ಎಂದು ಆಕ್ಷೇಪಿಸಿದರು.

ಕ್ರೈಂನಲ್ಲಿ ಮುಂಚೂಣಿ: ದೇಶದ ಒಟ್ಟಾರೆ ಅಪರಾಧ ಕೃತ್ಯಗಳ ಪೈಕಿ ಶೇ.11.50 ರಷ್ಟು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕ್ಷೇತ್ರದಲ್ಲೆ ನಡೆಯುತ್ತಿವೆ. ಅವರು ಪ್ರತಿನಿಧಿಸುವ ಕ್ಷೇತ್ರದಲ್ಲೆ 80 ಮಕ್ಕಳು ಅಸುನೀಗಿದ್ದಾರೆ. ಇಂತಹವರನ್ನು ರಾಜ್ಯಕ್ಕೆ ಕರೆಸಿ ನಮಗೆ ಬುದ್ಧಿ ಹೇಳಿಸಲಾಗುತ್ತದೆ ಎಂದು ಟೀಕಿಸಿದರು.

ಗೋವು ಸೇರಿ ಎಲ್ಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ. ಹೀಗಾಗಿ ಎಲ್ಲ ಪ್ರಾಣಿಗಳ ಹತ್ಯೆಯನ್ನು ನಿಷೇಧಿಸಿ ಕೇಂದ್ರ ಸರಕಾರ ಕೂಡಲೇ ಕಾನೂನು ಜಾರಿಗೆ ತರಬೇಕು ಎಂದ ಆಗ್ರಹಿಸಿದ ರಾಮಲಿಂಗಾರೆಡ್ಡಿ, ರಾಜಕೀಯ ಕಾರಣಕ್ಕಾಗಿ ಕೇವಲ ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಲಾಗುತ್ತಿದೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ತಟ್ಟೆಯಲ್ಲಿ ಹೆಗ್ಗಣ ಸತ್ತಿದೆ. ಆದರೆ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಎಂದು ನಮಗೆ ಹೇಳಲಿಕ್ಕೆ ಬಂದಿದ್ದಾರೆ. ಅವರು ಮೊದಲು ತಮ್ಮ ರಾಜ್ಯದಲ್ಲಿನ ಅಪರಾಧಗಳನ್ನು ನಿಯಂತ್ರಿಸಲಿ ಎಂದು ರೆಡ್ಡಿ ತಿರುಗೇಟು ನೀಡಿದರು.

‘ಸಂಸದೆ ಶೋಭಾ ಕರಂದ್ಲಾಜೆ ಬಂದಿದ್ದೇ ನಿಮ್ಹಾನ್ಸ್(ಮಾನಸಿಕ) ಆಸ್ಪತ್ರೆಯಿಂದ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ಅವರನ್ನು ಅಲ್ಲಿಗೆ ಸೇರಿಸಬೇಕಾಗುತ್ತದೆ. 2012ರಲ್ಲಿ ದಕ್ಷಿಣ ಕನ್ನಡದ ಸವಣೂರು ಗ್ರಾ.ಪಂ.ನಲ್ಲಿ ಎಸ್‌ಡಿಪಿಐ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿದಿದ್ದು, ಈ ಬಗ್ಗೆ ಪತ್ರಿಕಾ ವರದಿ ನನ್ನ ಬಳಿ ಇದೆ. ಇವರೆಲ್ಲ ರಾಜಕೀಯದಲ್ಲಿರಲು ನಾಲಾಯಕ್. ‘ತಾಲಿಬಾನಿ’ಗಳೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ’
-ರಾಮಲಿಂಗಾರೆಡ್ಡಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News