ಸಿಎಚ್ಎಸ್ ಸಂಸ್ಥೆ ವಿರುದ್ಧ ಕಾಂಗ್ರೆಸ್ ದೂರು
ಬೆಂಗಳೂರು, ಜ.15: ಚುನಾವಣಾ ಪೂರ್ವ ನಕಲಿ ಸಮೀಕ್ಷೆಯನ್ನು ಸೃಷ್ಟಿ ಮಾಡಿ ಸಾಮಾಜಿಕ ಮಾಧ್ಯಮಗಳಿಗೆ ಹರಿಬಿಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಎಚ್ಎಸ್ ಸರ್ವೇಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಅವಸ್ಥಿ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಹಾಗೂ ಮಾಧ್ಯಮ ಸಂಚಾಲಕ ಎ.ಎನ್.ನಟರಾಜಗೌಡ ದೂರು ನೀಡಿದ್ದಾರೆ.
ರಾಜ್ಯದ ಜನತೆ ವಿಧಾನಸಭಾ ಚುನಾವಣೆಗಳ ಕುರಿತು ಲೆಕ್ಕಾಚಾರ ಮಾಡುತ್ತಿರುವ ಈ ಸಂದರ್ಭದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಕಲಿ ಸಮೀಕ್ಷೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟು ಜನರಲ್ಲಿ ತಪ್ಪುಗ್ರಹಿಕೆ ಮೂಡಿಸುವ ಅನೈತಿಕ ಮಾರ್ಗ ಹಿಡಿದಿವೆ ಎಂದು ದೂರುದಾರರು ಆರೋಪಿಸಿದ್ದಾರೆ.
ದೀಪಕ್ ಅವಸ್ಥಿ ಎಂಬವರು ಜ.5ರಂದು ‘Survey Report for the month of December 2017’ ಎಂಬ ಶೀರ್ಷಿಕೆಯಿರುವ ಮುಂಬರುವ ವಿಧಾನಸಭಾ ಚುನಾವಣಾ ಸಮೀಕ್ಷೆಯ ವರದಿಯೊಂದನ್ನು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್ ಸೂಚನೆಯಂತೆ ಮಾಡಿರುವುದಾಗಿ ಹೇಳಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಮತ್ತು ಮಾಧ್ಯಮಗಳಿಗೆ ಹರಿಯಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯತೆಯನ್ನು ಕುಗ್ಗಿಸಲು, ಚುನಾವಣೆಯಲ್ಲಿ ಪಕ್ಷ ಕೇವಲ 76 ಸ್ಥಾನಗಳನ್ನು ಪಡೆಯಲಿದೆ ಎಂದು ನಕಲಿ ಸಮೀಕ್ಷೆಯಲ್ಲಿ ಹೇಳಿಕೊಳ್ಳಲಾಗಿದೆ. ರಾಜ್ಯ ಸರಕಾರದ ಸಾಧನೆಯನ್ನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೊರಕುತ್ತಿರುವ ಅಭೂತಪೂರ್ವ ಜನಬೆಂಬಲವನ್ನು ದಿಕ್ಕು ತಪ್ಪಿಸುವ ದುರುದ್ದೇಶದಿಂದ ಈ ತಪ್ಪು ಮಾಹಿತಿಯನ್ನು ನೀಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪ್ರಮುಖವಾಗಿ ಸಿಎಚ್ಎಸ್ ಸಂಸ್ಥೆ ಸ್ವಯಂ ಘೋಷಿಸಿಕೊಂಡಿರುವಂತೆ ಪರಮೇಶ್ವರ್ ಅವರಾಗಲಿ ಬೇರೆ ಘಟಕಗಳ ಪದಾಧಿಕಾರಿಗಳಾಗಲಿ ಚುನಾವಣಾ ಪೂರ್ವ ಸಮೀಕ್ಷೆ ಮಾಡಲು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಿಲ್ಲ. ಆದರೆ ಕೆಲವು ಕುತ್ಸಿತ ಹಿತಾಸಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸಮೀಕ್ಷೆಯನ್ನು ಹರಿದಾಡುವಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ನಕಲಿ ಸಮೀಕ್ಷೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಪರಮೇಶ್ವರ್ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಆದರೂ, ರಾಷ್ಟ್ರ ಮತ್ತು ರಾಜ್ಯದ ವಾಹಿನಿಗಳು ಮತ್ತು ಪತ್ರಿಕೆಗಳು ಈ ನಕಲಿ ಸಮೀಕ್ಷೆಯನ್ನು ವರದಿ ಮಾಡಿವೆ. ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಕಾನೂನು ಬಾಹಿರ ಚಟುವಟಿಕೆ ಗಳನ್ನು ಮಾಡುವ, ಮತದಾರರಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ತಪ್ಪು ಗ್ರಹಿಕೆ ಬಿತ್ತುವ ಕೆಲಸವನ್ನು ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.