ರಾಜ್ಯದಲ್ಲಿ ಮೋದಿ-ಅಮಿತ್ ಶಾ ಆಟ ನಡೆಯಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಜ.16: ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿಯನ್ನು ಮೆಚ್ಚಿಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಆಟ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದ ಸರ್ದಾರ್ ಪಟೇಲ್ ಭವನದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕೆಪಿಸಿಸಿಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿಯವರು ಹಿಂದುತ್ವದ ಬಗ್ಗೆ ಪ್ರಸ್ತಾಪಿಸಿದರೆ ನಾವು ಕೂಡ ಸಮರ್ಥವಾಗಿ ಎದುರೇಟು ನೀಡಬೇಕು. ನಾವು ಹಿಂದೂಗಳಲ್ಲವೇ? ನಮ್ಮ ಸರಕಾರ ಹಿಂದೂಗಳ ರಕ್ಷಣೆ ಮಾಡುತ್ತಿಲ್ಲವೇ? ನಾವು ದೇವಸ್ಥಾನಗಳಿಗೆ ಹೋಗುತ್ತಿಲ್ಲವೇ? ಬಿಜೆಪಿಯವರು ನಮ್ಮ ವಿರುದ್ಧ ಮಾಡುವ ಆರೋಪಗಳಿಗೆ ತಕ್ಷಣ ಪ್ರತ್ಯುತ್ತರ ನೀಡುವ ಪ್ರವೃತ್ತಿಯನ್ನು ನೀವು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿಯವರಂತೆ ನಾವು ಸುಳ್ಳು ಹೇಳಿಕೊಂಡು ತಿರುಗುವ ಅಗತ್ಯವಿಲ್ಲ. ನಮ್ಮ ಸರಕಾರ ಮಾಡಿರುವ ಸಾಧನೆ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಜನತೆಗೆ ನೀಡಿದ ಆಶ್ವಾಸನೆಯಂತೆ ಆಡಳಿತ ನಡೆಸುವ ಮೂಲಕ ನುಡಿದಂತೆ ನಡೆಯುತ್ತಿರುವ ಬಗ್ಗೆ ಸತ್ಯ ಹೇಳಿದರೆ ಸಾಕು ಎಂದು ಮುಖ್ಯಮಂತ್ರಿ ಹೇಳಿದರು.
ಎಐಸಿಸಿ ದೊಡ್ಡ ಮನಸ್ಸು ಮಾಡಿ, ದೊಡ್ಡ ತಂಡವನ್ನು ಪರಮೇಶ್ವರ್ಗೆ ಕೊಟ್ಟಿದೆ. ಮೂರು ತಿಂಗಳಲ್ಲಿ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ಇದು ಮಹತ್ವದ ಸಭೆಯಾಗಿದೆ. ಪದಾಧಿಕಾರಿಗಳ ಜವಾಬ್ದಾರಿಯೂ ಬಹಳ ಹೆಚ್ಚಿದೆ. ಪ್ರತಿಯೊಬ್ಬ ಪದಾಧಿಕಾರಿಯೂ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ರಾಜ್ಯ ಸರಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸಲು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಆರಂಭಿಸಲಾಗಿದೆ. ಡಿ.13 ರಿಂದ ಜ.12ರವರೆಗೆ ನಿರಂತರವಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಲೋಕಸಭಾ ಸದಸ್ಯರು, ಪರಾಜಿತ ಅಭ್ಯರ್ಥಿಗಳ ಜತೆ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಶೇ.90ರಷ್ಟು ಬೂತ್ ಕಮಿಟಿ ಸದಸ್ಯರು ನೇಮಕವಾಗಿದ್ದಾರೆ. ಚುನಾವಣೆ ದೃಷ್ಟಿಯಿಂದ ಬೂತ್ ಕಮಿಟಿಗಳು ಬಹಳ ಮುಖ್ಯ. ನಮ್ಮ ಸರಕಾರದ ಕಾರ್ಯಕ್ರಮಗಳು ಹಾಗೂ ಸಾಧನೆಗಳನ್ನು ಪ್ರತಿ ಮತದಾರರಿಗೆ ಮುಟ್ಟಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಅನ್ನಭಾಗ್ಯ ಯೋಜನೆಯಲ್ಲಿ ಉಚಿತ ಅಕ್ಕಿ ಯಾರು ಕೊಡುತ್ತಾರೆ ಎಂದರೆ ಸೊಸೈಟಿಯವರು ಅಂತಾರೆ. ಸಹಕಾರ ಸಂಘಗಳಲ್ಲಿನ ಸಾಲ ಮನ್ನಾ ಮಾಡಿದ್ದು ಯಾರು ಅಂದರೆ ಸೊಸೈಟಿಯವರು ಎಂದು ಕೆಲವರು ಹೇಳುತ್ತಾರೆ. ಸರಕಾರದ ಸಾಧನೆಯನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಿ ಎಂದು ಅವರು ಹೇಳಿದರು.
ಬೂತ್ ಸಮಿತಿ ಬಳಿ ಮತದಾರರ ಪಟ್ಟಿ ಇರಬೇಕು. ಮತದಾರರ ಪಟ್ಟಿಯಿಂದ ನಮ್ಮವರು ಬಿಟ್ಟು ಹೋಗಿದ್ದರೆ ಕೂಡಲೆ ಅವರನ್ನು ಸೇರಿಸಲು ಕ್ರಮ ಕೈಗೊಳ್ಳಬೇಕು. ಹೊರಗಿನವರು ಯಾರಾದರೂ ಪಟ್ಟಿಯಲ್ಲಿದ್ದರೆ ಅವರನ್ನು ತೆಗೆಸಬೇಕು. ಬಿಜೆಪಿಯವರು ಆರೆಸೆಸ್ಸ್ನವರನ್ನು ಕರೆದುಕೊಂಡು ಬಂದು ಇಲ್ಲಿ ಹಾಕುತ್ತಾರೆ. ಈ ಬಗ್ಗೆ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೆಪಿಸಿಸಿಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ಪೈಕಿ 54 ಮಂದಿ ಗೈರು ಹಾಜರಾಗಿದ್ದಾರೆ. ಪಕ್ಷದ ಕೆಲಸಕ್ಕೆ ಬಾರದವರು ಪದಾಧಿಕಾರಿಗಳಾಗಿ ಮುಂದುವರೆಯಲು ಅರ್ಹರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ಹಾಗೂ ಹಿಂದುಳಿದ ವರ್ಗಗಳ ವಿಭಾಗವು ನಿರೀಕ್ಷಿತ ಮಟ್ಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿಲ್ಲ. ಈ ವಿಭಾಗಗಳ ಕೆಲಸ ಮತ್ತಷ್ಟು ಚುರುಕಾಗಬೇಕಿದೆ. ನೀವು ಮಾಡುತ್ತಿರುವ ಕೆಲಸಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಚಟುವಟಿಕೆಗಳು ಕಾಣುತ್ತಿಲ್ಲ ಎಂದು ಅವರು ಹೇಳಿದರು.
ಸಭೆಯಲ್ಲಿ ಪಕ್ಷ ಸಂಘಟನೆ, ಮುಂಬರುವ ವಿಧಾನಸಭಾ ಚುನಾವಣೆಯ ರಣತಂತ್ರ, ಬಿಜೆಪಿ ಹೆಣೆಯುವ ತಂತ್ರಗಳಿಗೆ ಪ್ರತಿತಂತ್ರ ರೂಪಿಸುವುದು, ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಿಕೆ, ಸಮಾವೇಶಗಳನ್ನು ಆಯೋಜಿಸುವುದು, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ರಾಜ್ಯದಲ್ಲಿ ಕೈಗೊಳ್ಳಲಿರುವ ಪ್ರವಾಸದ ಕುರಿತು ಚರ್ಚೆ ನಡೆಸಲಾಗಿದೆ.