ಆಮ್ ಆದ್ಮಿ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ: ಪಂಕಜ್ ಗುಪ್ತಾ
ಬೆಂಗಳೂರು, ಜ.18: ಮುಂದಿನ ದಿನಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಎಎಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ಗುಪ್ತಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಕೇಂದ್ರದ ಸಮಿತಿ ವತಿಯಿಂದ ಸರ್ವೆ ಮಾಡಲಾಗಿದ್ದು, ಅದರ ಪ್ರಕಾರ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಬಗ್ಗೆ ಜನ ಬೇಸತ್ತಿದ್ದು, ಪರ್ಯಾಯ ಪಕ್ಷಕ್ಕಾಗಿ ಕಾಯುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ, ಶೇ.80 ರಷ್ಟು ಜನರು ಪರ್ಯಾಯ ಬೇಕು ಎಂದು ಅಭಿಪ್ರಾಯಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕದ ಜನತೆ ಎಲ್ಲ ರಾಜಕೀಯ ಪಕ್ಷಗಳನ್ನು ಪರಾಮರ್ಶಿಸಿ ನೋಡಿದ್ದಾರೆ. ಮೂರು ಪಕ್ಷಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಅವರು ಜನರ ಸೇವೆಗಾಗಿ ಬಂದವರಲ್ಲ, ಜನರ ಮೇಲೆ ಆಡಳಿತ ಮಾಡಲು ಬಂದವರು. ಅವರು ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಬಂದವರಲ್ಲ, ಹಣ ಮಾಡಿಕೊಳ್ಳಲು ಬಂದವರು ಎಂಬ ಅಂಶವನ್ನು ಮನಗಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರ ಪಕ್ಷವಾದ ಆಮ್ ಆದ್ಮಿ ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಎಎಪಿ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಮಾತನಾಡಿ, ರಾಜ್ಯದ ರಾಜಧಾನಿ ನೀರು ಸರಬರಾಜು, ಕಸ ನಿರ್ವಹಣೆ, ಸಾರಿಗೆ, ವಸತಿ ಸೇರಿದಂತೆ ಎಲ್ಲ ವಿಷಯಗಳಲ್ಲಿ ಸ್ಪಂದಿಸುತ್ತಿಲ್ಲ. ರಾಜ್ಯ ಸರಕಾರ ಮತ್ತು ಬಿಬಿಎಂಪಿ ಜನರ ಯಾವುದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ರಾಜ್ಯದ ಆರ್ಥಿಕ ಪ್ರಗತಿಯ ಎಂಜಿನ್ ಎನಿಸಿಕೊಂಡ ಮುಖ್ಯ ನಗರವನ್ನು ಎಲ್ಲಾ ಸರಕಾರಗಳು ನಿರ್ಲಕ್ಷಿಸಿವೆ. ರಸ್ತೆಗಳು ಹೊಂಡಗಳಾಗಿವೆ, ಕೆರೆಗಳು ಬೆಂಕಿ ಉಗುಳುತ್ತಿವೆ, ಎಲ್ಲೆಂದರಲ್ಲಿ ಕಸದ ರಾಶಿ, ಮಕ್ಕಳು ತೆರೆದ ಚರಂಡಿಗೆ ಬಿದ್ದು ಸಾಯುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದೆಲ್ಲೆಡೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆಯ ವಿಷಯದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ. ಮತ್ತೊಂದು ಕಡೆ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಬದಲಿಗೆ ಬೀಗ ಹಾಕಿ ಶಿಕ್ಷಣದ ಖಾಸಗೀಕರಣ ಮಾಡುತ್ತಿದ್ದಾರೆ. ಆರ್ಥಿಕ ಪ್ರಗತಿಯಾಗುತ್ತಿದ್ದರೂ ಉದ್ಯೋಗಾವಕಾಶ ಸಂಖ್ಯೆ ಕಡಿಮೆಯಾಗುತ್ತಿದೆ. ತಮ್ಮ ಹಳ್ಳಿಗಳಲ್ಲಿ ಕೆಲಸ ಪಡೆಯಲಾಗದೇ ಜನರು ಹತಾಶರಾಗಿ ಬೆಂಗಳೂರು ಮತ್ತು ಇತರ ನಗರದೆಡೆಗೆ ವಲಸೆ ಹೋಗುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಜನರನ್ನು ಒಗ್ಗೂಡಿಸುವ ಬದಲಿಗೆ ಕೋಮು ವಿಷಬೀಜವನ್ನು ಬಿತ್ತುತ್ತಿದ್ದಾರೆ. ಈ ಮೂಲಕ ಜನರ ನಡುವೆ ಒಡಕು ಮೂಡಿಸಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಹ ಸಂಚಾಲಕರಾದ ವಿಜಯ್ ಶರ್ಮಾ, ಮೋಹನ್ ದಾಸರಿ, ಶಿವಕುಮಾರ ಚೆಂಗಲರಾಯ ಉಪಸ್ಥಿತರಿದ್ದರು.