ಜೂಜಾಟ: 7 ಜನರ ಬಂಧನ

Update: 2018-01-19 13:19 GMT

ಬೆಂಗಳೂರು, ಜ.19: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಏಳು ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 51 ಸಾವಿರ ರೂ. ನಗದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪುಟ್ಟೇನಹಳ್ಳಿ ವ್ಯಾಪ್ತಿಯ ನಿವಾಸಿಗಳಾದ ಮಹದೇವ, ಸೋಮಶೇಖರ್, ಮಧು, ಅಶೋಕ್‌ಕುಮಾರ್, ಚಂದನ್, ನವೀನ್, ಮಹದೇವ ಬಂಧಿತರು ಎಂದು ತಿಳಿದುಬಂದಿದೆ.

ಬನ್ನೇರುಘಟ್ಟ ಮುಖ್ಯರಸ್ತೆ, ಸಹ್ಯಾದ್ರಿ ಲೇಔಟ್, 1ನೆ ಕ್ರಾಸ್‌ನ ಮನೆಯೊಂದರಲ್ಲಿ ಕೆಲವರು ಹಣವನ್ನು ಕಟ್ಟಿಕೊಂಡು ಅಂದರ್-ಬಾಹರ್ ಎಂಬ ಅದೃಷ್ಟದ ಜೂಜಾಟ ಆಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಬಳಿಕ ಪೊಲೀಸರು ಮನೆ ಮೇಲೆ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ 7 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 51 ಸಾವಿರ ರೂ. ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News