ಪೊಲೀಸ್ ಅಧಿಕಾರಿಯ ‘ಆಫ್ ದಿ ರೆಕಾರ್ಡ್’ ಆಡಿಯೋ ವೈರಲ್

Update: 2018-01-19 15:49 GMT

ಬೆಂಗಳೂರು, ಜ. 19: ವಿಜಯಪುರದ ದಲಿತ ಬಾಲಕಿಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಆಕೆಯ ಮರಣೋತ್ತರ ಪರೀಕ್ಷಾ ವರದಿಗೂ ಮೊದಲೇ ಪೊಲೀಸ್ ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಮಾತನಾಡಿದ್ದಾರೆ ಎನ್ನಲಾದ ‘ಆಫ್ ದಿ ರೆಕಾರ್ಡ್’ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಹಿಂದೆ ಉತ್ತರ ವಲಯದ ಐಜಿಪಿ ಡಾ.ಕೆ.ರಾಮಚಂದ್ರರಾವ್ ಹಾಗೂ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ವೇದಿಕೆ ಸಂಚಾಲಕ ಭಾಸ್ಕರ್ ಪ್ರಸಾದ್ ನಡುವಿನ ಸಂಭಾಷಣೆ ಜಾಲತಾಣಗಳಲ್ಲಿ ಬಹಿರಂಗಗೊಂಡಿದ್ದು, ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

“ದಲಿತ ಬಾಲಕಿ ಸಾವನ್ನಪ್ಪುವ ಮುನ್ನ ಗರ್ಭಪಾತಕ್ಕೆ ಒಳಗಾಗಿದ್ದಳು. ಆಕೆಗೆ ಅನೇಕ ಹುಡುಗರೊಂದಿಗೆ ಸಂಪರ್ಕವಿತ್ತು. ಅಂದೂ ಆಕೆ ಸ್ನೇಹಿತನೊಬ್ಬನ ಜತೆ ಲೈಂಗಿಕ ಸಂಪರ್ಕ ಹೊಂದಿದ್ದಳು. ಆ ಬಳಿಕ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದಳು. ದಲಿತ ಬಾಲಕಿಯೊಂದಿಗೆ ಇದ್ದ ಇನ್ನೊಬ್ಬ ಶಾಲಾ ಬಾಲಕಿಯ ನಡತೆಯೂ ಸರಿ ಇರಲಿಲ್ಲ” ಎಂದು ಕಾನೂನು ಪಾಲಿಸಬೇಕಾದ ಪೊಲೀಸ್ ಅಧಿಕಾರಿಯೇ ‘ಆಫ್ ದಿ ರೆಕಾರ್ಡ್’ ಹೆಸರಿನಲ್ಲಿ ಮೃತ ಬಾಲಕಿಯ ಬಗ್ಗೆ ಮನಸೋಇಚ್ಛೆ ಮಾತನಾಡಿದ್ದಾರೆ ಎನ್ನಲಾಗಿದೆ.

“ದಲಿತ ಬಾಲಕಿ ವೈಯಕ್ತಿಕವಾಗಿ ಸರಿ ಇರಲಿಲ್ಲ. ಅಲ್ಲದೆ, ಆಕೆಗೆ ಹಲವು ಮಂದಿ ಸ್ನೇಹಿತರಿದ್ದರು. ಒಂದು ವರ್ಷದಿಂದ ನಿರಂತರ ಲೈಂಗಿಕ ಸಂಪರ್ಕವಿತ್ತು” ಎಂಬುದು ಸೇರಿ ಸಾರ್ವಜನಿಕವಾಗಿ ಕೇಳಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಅಶ್ಲೀಲ ರೀತಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ದಲಿತ ಬಾಲಕಿ ಬಗ್ಗೆ ಪೊಲೀಸ್ ಅಧಿಕಾರಿ ಆಡಿರುವ ಮಾತುಗಳ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News