ಬೆಂಗಳೂರು: ಕರವೇಯಿಂದ ಅಬ್ದುಲ್ಲಾ ಮೋನು ಅವರಿಗೆ ‘ಕದಂಬ ಪ್ರಶಸ್ತಿ’ ಪ್ರದಾನ
Update: 2018-01-23 15:36 GMT
ಬೆಂಗಳೂರು, ಜ.23: ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ವತಿಯಿಂದ ಅನಿವಾಸಿ ಭಾರತೀಯ ಉದ್ಯಮಿ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ಲಾ ಮೋನು ಅವರಿಗೆ 2018ನೆ ಸಾಲಿನ ‘ಕದಂಬ ಪ್ರಶಸ್ತಿ’ಯನ್ನು ಪ್ರದಾನಿಸಲಾಯಿತು.
ಬೆಂಗಳೂರಿನ ಬಸವನಗುಡಿಯ ನ್ಯಾಶನಲ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಅನಿವಾಸಿ ಉದ್ಯಮಿ ಸರ್ವೋತ್ತಮ ಶೆಟ್ಟಿ, ರವಿ ಶೆಟ್ಟಿ, ಶರೀಫ್ ಜುಬೈಲ್, ರಾಜೇಶ್ ಶೆಟ್ಟಿ, ವಿಶ್ವಾಸ್ ಬಾವ ಬಿಲ್ಡರ್ಸ್ ನ ಆಡಳಿತ ನಿರ್ದೇಶಕ ಅಬ್ದುರ್ರವೂಫ್ ಪುತ್ತಿಗೆ ಹಾಗು ‘ಅಕ್ಷರಸಂತ’ ಹರೇಕಳ ಹಾಜಬ್ಬರಿಗೆ ‘ಕದಂಬ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಡಬದ ‘ಏಮ್ಸ್’ ಕಾಲೇಜಿನ ಸಂಸ್ಥಾಪಕರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಅನಿವಾಸಿ ಭಾರತೀಯ ಉದ್ಯಮಿ ಅಬ್ದುಲ್ಲಾ ಮೋನು ಅವರು ಕತರ್ ನಲ್ಲಿ ವಿವಿಧ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಮುಂದಿದ್ದಾರೆ.