ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬಿಜೆಪಿ ಕಾರ್ಪೊರೇಟರ್ ಪತಿಯ ಹತ್ಯೆ
ಬೆಂಗಳೂರು, ಫೆ.7: ಬಿಬಿಎಂಪಿ ಬಿಜೆಪಿ ಸದಸ್ಯೆ ರೇಖಾರವರ ಪತಿ ಕದಿರೇಶ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ದುಷ್ಕರ್ಮಿಗಳು ಅವರನ್ನು ಹತ್ಯೆಗೈದಿರುವ ಘಟನೆ ಇಲ್ಲಿನ ಕಾಟನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಾಲಿಕೆಯ 138ನೇ ಛಲವಾದಿ ಪಾಳ್ಯದ ವಾರ್ಡ್ ಸದಸ್ಯೆ ರೇಖಾ ರವರ ಪತಿ ಕದಿರೇಶ್ ರನ್ನು ನಾಲ್ವರು ದುಷ್ಕರ್ಮಿಗಳು, ಇಲ್ಲಿನ ಅಂಜಿನಪ್ಪ ಗಾರ್ಡನ್ ಬಳಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಬುಧವಾರ ಸಂಜೆ 4 ಗಂಟೆ ಸುಮಾರಿಗೆ ನಗರದ ಅಂಜಿನಪ್ಪ ಗಾರ್ಡನ್ನ ಕದಿರೇಶ್ ನಿವಾಸದ ಬಳಿ ನೂತನವಾಗಿ ನಿರ್ಮಿಸುತ್ತಿದ್ದ ದೇವಾಲಯದ ಕಾಮಗಾರಿ ವೀಕ್ಷಿಸಲು ಸಹೋದರನ ಜೊತೆ ತೆರಳಿದ್ದಾರೆ. ಈ ವೇಳೆ ಸ್ಥಳೀಯರಾದ ವಿನಯ್, ನವೀನ್ ಯಾನೆ ಅಣ್ಣ ಸೇರಿ ನಾಲ್ವರು ಏಕಾಏಕಿ ಮಾರಕಾಸ್ತ್ರಗಳಿಂದ ಕದಿರೇಶ್ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಕದಿರೇಶ್ ರನ್ನು ಆಸ್ಪತ್ರೆಗೆ ದಾಖಲಿಸಿದರೂ, ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಹಳೇ ದ್ವೇಷ: ಬೆಕ್ಕಿನ ಕಣ್ಣು ರಾಜೇಂದ್ರನ ಕೊಲೆ ಪ್ರಕರಣ ಸಂಬಂಧ ಕದಿರೇಶ್ ಮೇಲೆ ಇಲ್ಲಿನ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು ಎನ್ನಲಾಗಿದೆ. ಹಳೇ ದ್ವೇಷದ ಹಿನ್ನಲೆಯಲ್ಲಿ ಕದಿರೇಶ್ ನನ್ನು ಕೊಲೆಗೈದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗಾಂಜಾ: ಅಂಜಿನಪ್ಪ ಗಾರ್ಡನ್ನ ದೇವಾಲಯದ ಬಳಿ ಕೆಲ ಯುವಕರು ಗಾಂಜಾ ಸೇದುತ್ತಾರೆ ಎಂದು ಅವರ ಮೇಲೆ ಕದಿರೇಶ್ ಹಲ್ಲೆ ನಡೆಸಿದ್ದರು. ಈ ಕಾರಣಕ್ಕೆ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಹೇಳಲಾಗುತ್ತಿದೆ.
ಆಕ್ರಂದನ: ಕದಿರೇಶ್ ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅಂಜಿನಪ್ಪ ಗಾರ್ಡನ್ ನಿವಾಸ ಹಾಗೂ ವಿಕ್ಟೋರಿಯಾ ಶವಾಗಾರದ ಬಳಿ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಈ ವೇಳೆ ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಬಿಬಿಎಂಪಿ ಸದಸ್ಯೆ ರೇಖಾ ಅವರಿಗೆ ಧೈರ್ಯ ತುಂಬಿದರು. ರಾಜ್ಯ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಒತ್ತಾಯ: ಕದಿರೇಶ್ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಪೊಲೀಸರು ಮುಂದಾಗಬೇಕು. ಇಂತಹ ರಾಜಕೀಯ ಹತ್ಯೆಗಳು ಪುನಃ ನಡೆಯದಂತೆ ಕಠಿಣ ಕಾನೂನು ಕ್ರಮ ಜರುಗಿಸಲು ಗೃಹ ಇಲಾಖೆ ಮುಂದುವರೆಯುವಂತೆ ಕದಿರೇಶ್ ಸಂಬಂಧಿಕರು ಆಗ್ರಹಿಸಿದರು.
ಪೊಲೀಸರ ಭೇಟಿ: ಘಟನಾ ಸ್ಥಳಕ್ಕೆ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್, ಡಿಸಿಪಿಗಳಾದ ಶರಣಪ್ಪ, ಎಂ.ಎನ್.ಅನುಚೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.
4 ತಂಡ ರಚನೆ
ಕದಿರೇಶ್ ಹತ್ಯೆ ಪ್ರಕರಣ ಸಂಬಂಧ ಎಸಿಬಿ ನೇತೃತ್ವದಲ್ಲಿ ಒಂದು ತಂಡ ಹಾಗೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ 3 ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿದೆ. ಇನ್ನು ಸ್ಥಳೀಯರ ಮಾಹಿತಿ ಪ್ರಕಾರ ವಿನಯ್ ಮತ್ತು ನವೀನ್ ಪ್ರಮುಖ ಆರೋಪಿಗಳೆಂದು ತಿಳಿದುಬಂದಿದೆ’
-ಎಂ.ಎನ್.ಅನುಚೇತ್, ಡಿಸಿಪಿ, ಪಶ್ಚಿಮ ವಲಯರಾಜಕೀಯ ಇಲ್ಲ
ಕದಿರೇಶ್ ಹಾಗೂ ಅವರ ಪತ್ನಿ ರೇಖಾ ನನಗೆ ಪರಿಚಯಸ್ಥರು. ಕದಿರೇಶ್ ಹತ್ಯೆಯಿಂದ ನನಗೆ ನೋವಾಗಿದೆ. ಆದರೆ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ವಿಚಾರಣೆ ಬಳಿಕವೇ ಹತ್ಯೆಗೆ ಕಾರಣ ತಿಳಿಯಲಿದೆ’
-ರಾಮಲಿಂಗಾರೆಡ್ಡಿ, ಗೃಹ ಸಚಿವಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ನೆರವಿನಿಂದ ಕೃತ್ಯ ನಡೆದಿದೆ. ಇದು ಕಾಂಗ್ರೆಸ್ ಪಕ್ಷದ ಬೆಂಬಲದಿಂದ ರಾಜಕೀಯ ಕಾರಣಕ್ಕಾಗಿ ನಡೆದ ಹತ್ಯೆ.
-ಎನ್.ಆರ್.ರಮೇಶ್, ಬಿಜೆಪಿ ವಕ್ತಾರ
ರೌಡಿಶೀಟರ್ ಕದಿರೇಶ್ಮೃತ ಕದಿರೇಶ್(47) ನಗರದ ಆಂಜಿನಪ್ಪ ಗಾರ್ಡನ್ ನಿವಾಸಿಯಾಗಿದ್ದು, ಇಲ್ಲಿನ ಕಾಟನ್ ಪೇಟೆ ಪೊಲೀಸ್ ಠಾಣೆ ಪೊಲೀಸರು ಈತನನ್ನು 2002ರಲ್ಲಿ ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಾರೆ. ಕಾಟನ್ಪೇಟೆ, ಶ್ರೀರಾಂ ಪುರ ಪೊಲೀಸ್ ಠಾಣೆಯಲ್ಲಿ 15 ಗಂಭೀರ ಪ್ರಕರಣಗಳು ಕದಿರೇಶ್ ವಿರುದ್ಧ ದಾಖಲಾಗಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.