ಅಂಡರ್-19 ವಿಶ್ವಕಪ್ ಹೀರೋ ಕಮಲೇಶ್ಗೆ 25 ಲಕ್ಷ ರೂ. ಬಹುಮಾನ
ಜೈಪುರ, ಫೆ.12: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸೋಮವಾರ ಮಂಡಿಸಿದ ತನ್ನ ರಾಜ್ಯ ಬಜೆಟ್ನಲ್ಲಿ ಇತ್ತೀಚೆಗೆ ಅಂಡರ್-19 ವಿಶ್ವಕಪ್ನಲ್ಲಿ ಬೌಲಿಂಗ್ನಲ್ಲಿ ಮಿಂಚಿದ್ದ ವೇಗದ ಬೌಲರ್ ಕಮಲೇಶ್ ನಾಗರಕೋಟಿಗೆ 25 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ನ್ಯೂಝಿಲೆಂಡ್ನಲ್ಲಿ ನಡೆದ ಕಿರಿಯರ ವಿಶ್ವಕಪ್ನಲ್ಲಿ ನಾಗರಕೋಟಿ ಅತ್ಯುತ್ತಮ ಬೌಲಿಂಗ್ ಮಾಡಿದ್ದರು. ವಿಶ್ವಕಪ್ನಲ್ಲಿ ನೀಡಿರುವ ಗಮನಾರ್ಹ ಪ್ರದರ್ಶನದ ಬಲದಿಂದ ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 3.2 ಕೋ.ರೂ.ಗೆ ಮಾರಾಟವಾಗಿದ್ದರು. ಐಪಿಎಲ್ನಲ್ಲಿ ಹರಾಜಾದ ಅತ್ಯಂತ ದುಬಾರಿ ಅಂಡರ್-19 ಕ್ರಿಕೆಟಿಗ ಎನಿಸಿಕೊಂಡಿದ್ದರು. ನಾಗರಕೋಟಿ ವಿಶ್ವಕಪ್ನಲ್ಲಿ ಪ್ರತಿಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರ ಚಿತ್ತ ತನ್ನತ್ತ ಸೆಳೆದಿದ್ದರು. ಕಳೆದ ವಾರ ತವರು ಪಟ್ಟಣ ಜೈಪುರಕ್ಕೆ ವಾಪಸಾಗಿದ್ದ ನಾಗರಕೋಟಿಗೆ ಭವ್ಯಸ್ವಾಗತ ಕೋರಲಾಗಿತ್ತು. ಬಾಲ್ಯದಲ್ಲಿ ಜೈಪುರದ ವಿಜಯ್ ಪರೇಡ್ ಗ್ರೌಂಡ್ನಲ್ಲಿ ನಾಗರಕೋಟಿ ಆಡುತ್ತಿದ್ದರು. ಅಲ್ಲಿಯೇ ತರಬೇತಿ ಪಡೆದಿದ್ದರು.