'ಪ್ರೇಮಿಗಳ ದಿನ' ಶುಭಾಶಯ ಕಳುಹಿಸಿದ ಯುವಕನಿಗೆ ಚೂರಿ ಇರಿತ

Update: 2018-02-17 04:32 GMT

ಥಾಣೆ, ಫೆ. 17: ಯುವತಿಯೊಬ್ಬಳಿಗೆ ಪ್ರೇಮಿಗಳ ದಿನದ ಶುಭಾಶಯ ಕಳುಹಿಸಿದ ಆರೋಪದಲ್ಲಿ ಯುವಕನೊಬ್ಬನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಎಚ್‌ಎಸ್‌ಸಿ ವಿದ್ಯಾರ್ಥಿ ಮಂದರ್ ತೆಲಿ ಎಂಬಾತನ ಮೇಲೆ ಗುಂಪು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ವಿದ್ಯಾರ್ಥಿ ಎಐಎಂಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಯುವಕ ಪ್ರೇಮಿಗಳ ದಿನದ ಶುಭಾಶಯವನ್ನು ಯುವತಿಗೆ ಕಳುಹಿಸಿದ್ದನ್ನು ನೋಡಿದ ಯುವತಿಯ ಅಣ್ಣ ಹಾಗೂ ಸ್ನೇಹಿತ ತೆಲಿಯನ್ನು ಇರಿದು ಆಸ್ಪತ್ರೆಯ ಮುಂದೆ ಎಸೆದು ಹೋಗಿದ್ದು, ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದು, ಕೊಲೆಯತ್ನ ಮತ್ತು ಅಪಹರಣದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಗುರುವಾರ ತನ್ನ ಸಹೋದರನಿಗೆ ಔಷಧಿ ತರುತ್ತಿದ್ದಾಗ ತೆಲಿ ಮೇಲೆ ಹಲ್ಲೆ ಮಾಡಲಾಗಿದೆ. ಅಟ್ಟಾಡಿಸಿಕೊಂಡು ಹೋಗಿ ಆತನಿಗೆ ಚೂರಿಯಿಂದ ಇರಿಯಲಾಯಿತು. ಬಳಿಕ ಬೈಕ್‌ನಲ್ಲಿ ಆತನನ್ನು ಕರೆದೊಯ್ದು ಖಾಸಗಿ ಆಸ್ಪತ್ರೆಯೊಂದರ ಮುಂದೆ ಎಸೆದು ಹೋಗಿದ್ದಾರೆ. ಈ ಘಟನೆಯನ್ನು ನೋಡುತ್ತಿದ್ದ ತೆಲಿಯ ಸ್ನೇಹಿತನಿಗೂ ಬೆದರಿಕೆ ಹಾಕಲಾಗಿದೆ. ಸ್ನೇಹಿತನ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ತೆಲಿ ಒಂದು ತಿಂಗಳಿಂದ ಸಹೋದರಿಯ ಜತೆ ಸಂಪರ್ಕ ಹೊಂದಿದ್ದ ಎನ್ನುವುದು ಮೊಬೈಲ್ ಸಂದೇಶದಿಂದ ತಿಳಿದು ಈ ಹಲ್ಲೆಗೆ ಮುಂದಾದರು ಎಂದು ತನಿಖೆಯಿಂದ ತಿಳಿದುಬಂದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News