ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಫೆಬ್ರವರಿ ಅಂತ್ಯದವರೆಗೆ ಅವಕಾಶ: ಸಂಜೀವ್ ಕುಮಾರ್

Update: 2018-02-17 12:50 GMT

ಬೆಂಗಳೂರು, ಫೆ.17: ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಫೆಬ್ರವರಿ ಅಂತ್ಯದೊಳಗೆ ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.

ಶನಿವಾರ ನಗರದ ಶೇಷಾದ್ರಿಪುರಂನಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಹೆಸರು ಸೇರ್ಪಡೆ ಮಾಡಿರುವವರು ಹಾಗೂ ಹೊಸದಾಗಿ ಸೇರ್ಪಡೆ ಮಾಡುವವರಿಗೆ ಮಾ.15ರವರೆಗೆ ಮತದಾರರ ಗುರುತಿನ ಚೀಟಿ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಇದುವರೆಗೂ 4 ಕೋಟಿ 96 ಲಕ್ಷದ 56 ಸಾವಿರದ 59 ಮತದಾರರಿದ್ದು, ಇನ್ನಷ್ಟು ಮತದಾರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಫೆ. 28ರೊಳಗೆ ಮತದಾರರ ಪಟ್ಟಿಗೆ ಸೇರ್ಪಡೆ, ಹೆಸರು ತೆಗೆಸುವುದು ಹಾಗೂ ಬದಲಾವಣೆಗೆ ಸಂಪೂರ್ಣ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಿಂದಿನ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ವಿಧಾನಸಭಾ ಚುನಾವಣೆಗೆ 7 ಲಕ್ಷದ 72 ಸಾವಿರ ಯುವ ಮತದಾರರೂ ಸೇರಿದಂತೆ, ಒಟ್ಟು 15,42,121 ಮತದಾರರು ಸೇರ್ಪಡೆಯಾಗಿದ್ದಾರೆ. ಅದೇ ರೀತಿ, 3,67,424 ಮಂದಿ ಮೃತಪಟ್ಟವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದರು.

ಒಂದಕ್ಕಿಂತ ಹೆಚ್ಚು ಕಡೆ ಹೆಸರಿದ್ದ 61,792 ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅಲ್ಲದೆ, ಬದಲಾವಣೆ ಬಯಸಿದ್ದ 5,84,438 ಅರ್ಜಿ ಸೇರಿದಂತೆ, ಒಟ್ಟು 10,48,668 ಅರ್ಜಿಗಳು ಬಂದಿದ್ದವು. ಅದರಲ್ಲಿ, 10,13,704 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.

ಫೆ. 28ರವರೆಗೆ ಹೆಸರು ನೋಂದಾಯಿಸಲು ಅವಕಾಶವಿರುವುದರಿಂದ ಜನವರಿಯಲ್ಲಿ ನಡೆಸಿದ ವಿಶೇಷ ಮತದಾರರ ಪಟ್ಟಿ ಸೇರ್ಪಡೆ ಅಭಿಯಾನದಲ್ಲಿ ಹೆಸರು ನೋಂದಣಿ ಮಾಡಲು ಸಾಧ್ಯವಾಗದವರ ಪಟ್ಟಿಯಿಂದ ಹೆಸರನ್ನು ಕೈಬಿಡಲಾಗುವುದು ಹಾಗೂ ಬದಲಾವಣೆ ಮಾಡಿಕೊಳ್ಳುವವರಿಗೆ ಅವಕಾಶ ಕಲ್ಪಿಸಲಾಗಿದೆ. ಆ ನಂತರ ಬಂದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದರು.

ಕರ್ನಾಟಕದಲ್ಲಿ 4,552 ತೃತೀಯ ಲಿಂಗಿ ಮತದಾರರಿದ್ದಾರೆ. ಅದೇ ರೀತಿ, ಶಿವಮೊಗ್ಗ ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿಕಡಿಮೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿಹೆಚ್ಚಿನ ಮತದಾರರಿದ್ದು, ಒಟ್ಟಾರೆ ಸರಾಸರಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2.21 ಲಕ್ಷ ಮತದಾರರಿದ್ದಾರೆ. ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News