ಐದರ ಬಾಲಕಿಯ ಅತ್ಯಾಚಾರ ಆರೋಪಿಗಳಿಗೆ ಸಾರ್ವಜನಿಕರಿಂದಲೇ ಘನಘೋರ ಶಿಕ್ಷೆ

Update: 2018-02-20 04:27 GMT

ಇಟಾ ನಗರ, ಫೆ.20: ಐದು ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಆರೋಪಿ ಹಾಗೂ ಆತನ ಸಹಚರನನ್ನು ಪೊಲೀಸ್ ಠಾಣೆಗೆ ನುಗ್ಗಿದ ಉದ್ರಿಕ್ತರ ಗುಂಪು ಹೊಡೆದು ಸಾಯಿಸಿದ ಘಟನೆ ಅರುಣಾಚಲ ಪ್ರದೇಶದ ತೆಜು ನಗರದಲ್ಲಿ ನಡೆದಿದೆ.

ಆರೋಪಿಗಳಾದ ಸಂಜಯ್ ಸೊಬರ್ (30) ಮತ್ತು ಜಗದೀಶ್ ಲೊಹಾರ್ (25)ರನ್ನು ಬಂಧಿಸಿ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ಇರಿಸಲಾಗಿತ್ತು. ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಲಾಕಪ್‌ಗೆ ನುಗ್ಗಿ ಇಬ್ಬರನ್ನು ಹೊಡೆದು ಸಾಯಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನಿನ್ನೆ ಮಧ್ಯಾಹ್ನ ಲಾಕಪ್‌ಗೆ ನುಗ್ಗಿದ ಉದ್ರಿಕ್ತರ ಗುಂಪು ಇಬ್ಬರನ್ನೂ ಹೊರಕ್ಕೆಳೆದು ಬೀದಿಯಲ್ಲಿ ಹೊಡೆದು ಸಾಯಿಸಿತು. ಬಳಿಕ ಇಬ್ಬರ ಶವವನ್ನು ಮಾರುಕಟ್ಟೆ ಪ್ರದೇಶದಲ್ಲಿ ಬಿಸಾಕಿ ಹೋದರು ಎಂದು ಪೊಲೀಸರು ವಿವರಿಸಿದ್ದಾರೆ.
ಈ ಘಟನೆ ನಡೆದಿದ್ದು, ಘಟನೆಯಲ್ಲಿ ಕೆಲ ಪೊಲೀಸರಿಗೂ ಗಾಯಗಳಾಗಿವೆ ಎಂದು ಪೂರ್ವ ವಿಭಾಗದ ಡಿಐಜಿ ಅಪೂರ್ ಬಿತಿನ್ ಹೇಳಿದ್ದಾರೆ. ಫೆಬ್ರವರಿ 12ರಂದು ಇಬ್ಬರು ಆರೋಪಿಗಳು ಐದು ವರ್ಷದ ಬಾಲಕಿಯನ್ನು ಅಪಹರಿಸಿದ್ದರು. ಐದು ದಿನಗಳ ಬಳಿಕ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ರವಿವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆಗಾಗಿ ನ್ಯಾಯಾಲಯ ಇವರನ್ನು ಪೊಲೀಸ್ ವಶಕ್ಕೆ ನೀಡಿತ್ತು.

ಆರೋಪಿಗಳು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದರು. ಮಗುವನ್ನು ಅಪಹರಿಸಿ ಅತ್ಯಾಚಾರ ಎಸಗಿದ ಬಳಿಕ ಲೊಹಾರ್‌ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಸಂತ್ರಸ್ತೆಯ ನಗ್ನದೇಹ ಮತ್ತು ಕತ್ತರಿಸಿದ ತಲೆಯನ್ನು ಚಹಾ ತೋಟವೊಂದರಿಂದ ವಶಪಡಿಸಿಕೊಳ್ಳಲಾಗಿತ್ತು. ಸೋಮವಾರ ಇವರನ್ನು ಇರಿಸಿದ್ದ ಲಾಕಪ್‌ಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು, ಇಬ್ಬರನ್ನೂ ಲಾಕಪ್‌ನಿಂದ ಹೊರಗೆಳೆದು ಬಡಿಗೆಗಳಿಂದ ಹೊಡೆದು ಸಾಯಿಸಿದೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ಗುಂಪು ಚದುರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News