ನಲಪಾಡ್ ಸಹಚರರಿಂದ ಸಮಸ್ಯೆ ಆರೋಪ: ರಕ್ಷಣೆ ಕೋರಿದ ವಕೀಲ
ಬೆಂಗಳೂರು, ಫೆ.22: ವಿದ್ವತ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎನ್.ಎ.ಹಾರಿಸ್ ಅವರ ಪುತ್ರ ಮುಹಮ್ಮದ್ ನಲಪಾಡ್ನ ಸಹಚರರಿಂದ ನನಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಆರೋಪಿಸಿ ವಕೀಲ ಶ್ಯಾಮ್ ಸುಂದರ್ ಪೊಲೀಸ್ ಆಯುಕ್ತರಿಗೆ ದೂರು ನೀಡಿ, ರಕ್ಷಣೆ ನೀಡುವಂತೆ ಕೋರಿದ್ದಾರೆ.
ಗುರುವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ಯಾಮ್ ಸುಂದರ್, ನನ್ನ ವಿರುದ್ಧ ಆರೋಪಿಯ ಸಹಚರರು ಕುಪಿತರಾಗಿದ್ದು, ನನಗೆ ತೊಂದರೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಭರವಸೆ ನೀಡಿರುವುದಾಗಿ ಮಾಹಿತಿ ನೀಡಿದರು.
ಬುಧವಾರ ನಲಪಾಡ್ ವಿರುದ್ಧ ವಾದ ಮಾಡುತ್ತಿರುವುದಕ್ಕೆ ಆತನ ಬೆಂಬಲಿಗರು ತನ್ನ ಮೇಲೆ ಕುಪಿತರಾಗಿದ್ದರು. ಕೋರ್ಟ್ ವಿಚಾರಣೆಯ ಅವಧಿಯಲ್ಲಿಯೂ ನಲಪಾಡ್ ಸಹಚರರು ಕೆಕ್ಕರಿಸಿಕೊಂಡು ನೋಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾನೆ ಎಂದರು.