ಅನುಕೂಲಸಿಂಧು ನೀತಿ ಮತ್ತು ತತ್ವಬದ್ಧ ನೀತಿ

Update: 2018-02-23 18:57 GMT

ಇಂದು ನಾಗಾಲ್ಯಾಂಡ್‌ನಲ್ಲಿ ಪರಸ್ಪರ ಬದ್ಧ ವೈರಿಗಳಾದ ಎರಡೂ ಪ್ರಾದೇಶಿಕ ಪಕ್ಷಗಳಿಗೆ ಸಮಾನ ರಾಷ್ಟ್ರೀಯ ಪಕ್ಷವೊಂದರ ಜೊತೆ ಮೈತ್ರಿ ಇದೆ. ಅದೇ ರೀತಿ ಪರಸ್ಪರ ಬದ್ಧ ವೈರಿಗಳಾದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಒಂದೇ ಪ್ರಾದೇಶಿಕ ಪಕ್ಷದೂಡನೆ ರಾಜಕೀಯ ಮೈತ್ರಿ ಇದೆ. 


ಇದೇ ಫೆಬ್ರವರಿ 27ರಂದು ನಾಗಾಲ್ಯಾಂಡ್‌ನಲ್ಲಿ ನಡೆಯಲಿರುವ ಚುನಾವಣೆಯು ಕೇವಲ ವಿವಿಧ ರಾಜಕೀಯ ಪಕ್ಷಗಳ ನಡುವಿನ ಸ್ಪರ್ಧೆಯಾಗಿರದೆ ಅನುಕೂಲಸಿಂಧು ನೀತಿ ಮತ್ತು ತತ್ವಬದ್ಧ ನೀತಿಗಳ ನಡುವಿನ ಸ್ಪರ್ಧೆಯೂ ಆಗಿಬಿಟ್ಟಿದೆ. ಆ ರಾಜ್ಯದಲ್ಲಿ ಜನವರಿ 29ರಂದು 11 ರಾಜಕೀಯ ಪಕ್ಷಗಳು ಒಟ್ಟು ಸೇರಿ ಎಲ್ಲಿಯತನಕ ನಾಗಾಗಳ ಭವಿಷ್ಯದ ಸ್ಥಾನಮಾನಗಳ ಕುರಿತು ಕೇಂದ್ರ ಮತ್ತು ನಾಗಾಗಳ ನಡುವೆ ಒಂದು ಒಪ್ಪಂದ ಏರ್ಪಡುವುದಿಲ್ಲವೋ ಅಲ್ಲಿಯತನಕ ತಾವು ಚುನಾವಣೆಗಳಲ್ಲಿ ಭಾಗವಹಿಸಬಾರದೆಂಬ ಒಪ್ಪಂದವನ್ನು ಮಾಡಿಕೊಂಡವು. ಆದರೆ ಕೆಲವೇ ದಿನಗಳಲ್ಲಿ ಆ ಒಗ್ಗಟ್ಟಿನ ಬಹಿಷ್ಕಾರ ಕರೆಯ ಒಪ್ಪಂದವು ಕುಸಿದುಬಿತ್ತು. ಭಾರತೀಯ ಜನತಾ ಪಕ್ಷವು ಕೂಡಾ ಆ ಹೇಳಿಕೆಗೆ ಸಹಿ ಹಾಕಿತ್ತು. ಆದರೆ ಯಾವ ಚುನಾವಣಾ ಬಹಿಷ್ಕಾರ ಒಪ್ಪಂದವು ಆ ಎಲ್ಲರನ್ನು ಒಟ್ಟಿಗೆ ತಂದಿತ್ತೋ ಅದಕ್ಕೆ ಯಾವ ಚುನಾವಣಾ ಪಕ್ಷಗಳು ಬದ್ಧತೆಯನ್ನು ತೋರಲಿಲ್ಲ. ಚುನಾವಣೆಯಲ್ಲಿ ತಾವು ಭಾಗವಹಿಸದೆ ಇರುವ ಲಾಭವನ್ನು ಮತ್ತೊಂದು ಪಕ್ಷವು ಪಡೆದುಕೊಂಡುಬಿಡುವ ಅಪಾಯವನ್ನು ಎದುರಿಸಲು ಯಾವ ಪಕ್ಷಗಳು ಸಿದ್ಧರಿರಲಿಲ್ಲ. ಏಕೆಂದರೆ ಇದೇ ಕಾರಣದಿಂದ 1998ರಲ್ಲಿ ಕಾಂಗ್ರೆಸ್ ಪಕ್ಷವು ನಾಗಾಲ್ಯಾಂಡ್‌ನ ಎಲ್ಲಾ ಸೀಟುಗಳನ್ನೂ ಪ್ರತಿಸ್ಪರ್ಧಿಗಳೇ ಇಲ್ಲದಂತೆ ಗೆದ್ದುಕೊಂಡಿತ್ತು.

ರಾಜಕೀಯ ಮೈತ್ರಿಗಳ ವಿಷಯಕ್ಕೆ ಬರುವುದಾದಲ್ಲಿ ಭಾರತದ ಉಳಿದ ಯಾವುದೇ ಪ್ರದೇಶ ಕ್ಕಿಂತ ನಾಗಾಲ್ಯಾಂಡ್ ಒದಗಿಸುವ ಅವಕಾಶಗಳು ಹೆಚ್ಚು. ಹಾಲಿ ಚುನಾವಣೆಯಲ್ಲಿ ಗೆದ್ದುಬಂದಿರುವ ಎಲ್ಲಾ 60 ಶಾಸಕರೂ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ನೇತೃತ್ವದ ಆಳುವ ಡೆಮಾಕ್ರಟಿಕ್ ಅಲಯನ್ಸ್ ಆಫ್ ನಾಗಾಲ್ಯಾಂಡ್ (ಡಿಎಎನ್) ನ ಭಾಗವಾಗಿದ್ದಾರೆ. ಹೀಗಾಗಿ ಅಲ್ಲಿ ವಿರೋಧ ಪಕ್ಷವೆಂಬುದೇ ಇಲ್ಲ. ಎನ್‌ಪಿಎಫ್ ಪಕ್ಷವು ಬಿಜೆಪಿಯ ದೀರ್ಘಕಾಲೀನ ಮಿತ್ರ ಪಕ್ಷವಾಗಿದೆ. 2015ರಲ್ಲಿ ಎಂಟು ಜನ ಕಾಂಗ್ರೆಸ್ ಶಾಸಕರೂ ಸಹ ಡಿಎಎನ್ ಕೂಟವನ್ನು ಸೇರಿಕೊಂಡುಬಿಟ್ಟರು. ಹೀಗೆ ವಿಚಿತ್ರವೆಂಬಂತೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಸಹ ಒಂದೇ ಮೈತ್ರಿಕೂಟದ ಅಂಗಪಕ್ಷಗಳಾಗಿಬಿಟ್ಟಿವೆ. ಹೀಗಿದ್ದರೂ ಚುನಾವಣೆಗೆ ಮುನ್ನ ನಡೆದ ಬೆಳವಣಿಗೆಯಲ್ಲಿ ನಾಗಾಲ್ಯಾಂಡ್‌ನ ಮಾಜಿ ಮುಖ್ಯಮಂತ್ರಿ ನೆಯ್‌ಫೂ ರಿಯೋ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ಎನ್‌ಪಿಎಫ್‌ನ ಪ್ರತಿಸ್ಪರ್ಧಿ ಕೂಟವಾದ ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಗೆ ಬಿಜೆಪಿ ಬೆಂಬಲವನ್ನು ಘೋಷಿಸಿದೆ. ಆದರೆ ಅದೇ ಸಮಯದಲ್ಲಿ ನಾಗಾಲ್ಯಾಂಡ್‌ನ ಹಾಲಿ ಮುಖ್ಯಮಂತ್ರಿ ಟಿ.ಆರ್. ಜೆಲಿಯಾಂಗ್ ತಮ್ಮ ಪಕ್ಷವು ಬಿಜೆಪಿಯೊಡನೆ ಚುನಾವಣೋತ್ತರ ಮೈತ್ರಿಯನ್ನು ರಚಿಸಿಕೊಳ್ಳಲು ಸಿದ್ಧವಿದೆಯೆಂದು ಘೋಷಿಸಿದ್ದಾರೆ. ಹೀಗೆ ಇಂದು ನಾಗಾಲ್ಯಾಂಡ್‌ನಲ್ಲಿ ಪರಸ್ಪರ ಬದ್ಧ ವೈರಿಗಳಾದ ಎರಡೂ ಪ್ರಾದೇಶಿಕ ಪಕ್ಷಗಳಿಗೆ ಸಮಾನ ರಾಷ್ಟ್ರೀಯ ಪಕ್ಷವೊಂದರ ಜೊತೆ ಮೈತ್ರಿ ಇದೆ.

ಅದೇ ರೀತಿ ಪರಸ್ಪರ ಬದ್ಧ ವೈರಿಗಳಾದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಒಂದೇ ಪ್ರಾದೇಶಿಕ ಪಕ್ಷದೂಡನೆ ರಾಜಕೀಯ ಮೈತ್ರಿ ಇದೆ. ಇಂತಹ ವಿಚಿತ್ರವಾದ ಸಂದರ್ಭಕ್ಕೆ ಕಾರಣವಾದ ಪರಿಸ್ಥಿತಿಗಳ ವಿವರಣೆ ಸುಪರಿಚಿತವಾದದ್ದೇ ಆಗಿದೆ. ರಾಜ್ಯದ ಚುನಾವಣೆಯಲ್ಲಿ ಗೆಲ್ಲುವ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಮೈತ್ರಿಯನ್ನು ಖಾತರಿಪಡಿಸಿಕೊಳ್ಳಬೇಕಿದೆ. ನಾಗಾಲ್ಯಾಂಡ್‌ನ ರಾಜಕಾರಣವನ್ನು ದಶಕಗಳಿಂದ ಪ್ರಭಾವಿಸುತ್ತಿರುವುದು ಇದೇ ನಿಯಮವೇ ಆಗಿದೆ. ಇತರ ಈಶಾನ್ಯ ರಾಜ್ಯಗಳಂತೆ ನಾಗಾಲ್ಯಾಂಡ್ ಸಹ ತನ್ನ ಅಭಿವೃದ್ಧಿಗೆ ಸಂಪೂರ್ಣವಾಗಿ ಕೇಂದ್ರವನ್ನೇ ಅವಲಂಬಿಸಿದೆ. ಯಾವುದೇ ಚುನಾಯಿತ ಸರಕಾರವೂ ಸಹ ಕೇಂದ್ರದ ಕೃಪೆಯಿಂದ ದೂರವುಳಿಯಲು ಸಾಧ್ಯವೇ ಇಲ್ಲ. ಆದರೆ ಈ ವಾಸ್ತವವು ರಾಜ್ಯದ ರಾಜಕಾರಣದ ಸ್ವರೂಪವನ್ನು ವಿವರಿಸಬಹುದಾದರೂ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ಕಟು ಟೀಕೆ ಮಾಡುವ ಪಕ್ಷಗಳೂ ಸಹ ಅದರ ಜೊತೆ ಹೊಂದಾಣಿಕೆಯನ್ನೇಕೆ ಮಾಡಿಕೊಳ್ಳುತ್ತವೆ ಎಂಬುದನ್ನು ಅರ್ಥಪಡಿಸುವುದಿಲ್ಲ. ನಾಗಾಲ್ಯಾಂಡ್‌ನಲ್ಲಿ ಈಗ ಹಾಲಿ ಇರುವ ನೈಜ ವಿರೋಧ ಪಕ್ಷಗಳೆಂದರೆ ಅಲ್ಲಿನ ನಾಗರಿಕ ಸಮಾಜ ಮತ್ತು ಚರ್ಚು. ನಾಗಾಲ್ಯಾಂಡ್‌ನ ಬಲಿಷ್ಠ ನಾಗಾಲ್ಯಾಂಡ್ ಬ್ಯಾಪ್ಟಿಸ್ಟ್ ಚರ್ಚ್ ಕೌನ್ಸಿಲ್ ನೀಡಿರುವ ಇತ್ತೀಚಿನ ಮಹತ್ವದ ಹೇಳಿಕೆ ಯೊಂದರಲ್ಲಿ ಬಿಜೆಪಿಯ ಹಿಂದುತ್ವದ ಕಾರ್ಯಸೂಚಿಯ ಬಗ್ಗೆ ಎಚ್ಚರಿಸಿದೆ ಮತ್ತು ಅಭಿವೃದ್ಧಿ ಹಾಗೂ ರಾಜಕೀಯ ಪ್ರಯೋಜನಗಳಿಗಾಗಿ ನಮ್ಮ ಧರ್ಮದ ಜೊತೆ ರಾಜಿ ಮಾಡಿಕೊಳ್ಳಬಾರದೆಂದು ಕರೆ ನೀಡಿದೆ.

ಚುನಾವಣೆಗಳ ಸಂದರ್ಭಗಳಲ್ಲಿ ಧರ್ಮವನ್ನು ಬಳಸಿಕೊಳ್ಳುವುದರಲ್ಲಿ ಪರಿಣಿತಿಯನ್ನು ಪಡೆದಿರುವ ಬಿಜೆಪಿಯು ಇದರ ಬಗ್ಗೆ ಪ್ರತಿಕ್ರಿಯಿಸುತ್ತಾ ‘‘ನಾಗಾಲ್ಯಾಂಡ್‌ನಲ್ಲಿ ಕೆಲವರು ಚುನಾವಣೆಯ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ಧ್ರುವೀಕರಣ ಮಾಡುವ ತಂತ್ರವನ್ನು ಪ್ರಮುಖವಾಗಿ ಆಯ್ಕೆ ಮಾಡಿಕೊಂಡಿದ್ದಾರೆ’’ ಎಂದು ಯಾವುದೇ ಅಳುಕಿಲ್ಲದೆ ದೂರಿದೆ. ಬಿಜೆಪಿಯ ಎಲ್ಲಾ 20 ಉಮೇದುವಾರರು ಕ್ರಿಶ್ಚಿಯನ್ನರು ಮತ್ತು ನಾಗಗಳೇ ಆಗಿರುವುದರಿಂದ ಬ್ಯಾಪ್ಟಿಸ್ಟ್ ಕೌನ್ಸಿಲ್‌ನ ಹೇಳಿಕೆ ಈ ಹುರಿಯಾಳುಗಳ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದೆಂಬುದನ್ನು ಕಾದುನೋಡಬೇಕಿದೆ. ಚುನಾವಣೆಯನ್ನು ಬಹಿಷ್ಕರಿಸಬೇಕೆಂಬ ಕರೆಯನ್ನು ನೀಡಲು ಪ್ರೇರೇಪಿಸಿದ ರಾಜಕೀಯ ತತ್ವವೆಂದರೆ ನಾಗಾಲ್ಯಾಂಡ್‌ನ ರಾಜಕೀಯ ಸ್ಥಾನಮಾನದ ಪ್ರಶ್ನೆ. 1963ರಲ್ಲಿ ನಾಗಾಲ್ಯಾಂಡ್‌ಗೆ ರಾಜ್ಯದ ಸ್ಥಾನಮಾನ ದೊರೆತರೂ ಪ್ರತ್ಯೇಕ ಸಾರ್ವಭೌಮಿ ನಾಗಾ ರಾಷ್ಟ್ರದ ಕನಸು ಮಾತ್ರ ಜೀವಂತವಾಗಿಯೇ ಉಳಿದುಕೊಂಡು ಬಂದಿದೆ. ನಂತರದ ಸರಕಾರಗಳು ನಾಗಾ ಬಂಡಾಯಗಾರರ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳುತ್ತಾ ಬಂದಿರುವುದು ರಾಜ್ಯದಲ್ಲಿ ಒಂದಷ್ಟು ಶಾಂತಿ ನೆಲಸಲು ಕಾರಣವಾಗಿದ್ದರೂ ಸಂಘರ್ಷವಿನ್ನೂ ನಿಂತಿಲ್ಲ.

2015ರ ಆಗಸ್ಟ್ಟ್‌ನಲ್ಲಿ ನಾಗಾ ಬಂಡಾಯಗಾರ ಬಣಗಳಲ್ಲೇ ಅತೀ ದೊಡ್ಡ ಬಣವಾದ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಐಸಾಕ್- ಮುಯಿವಾ) ಬಣವು ಕೇಂದ್ರ ಸರಕಾರ ದೊಂದಿಗೆ ಒಂದು ಒಪ್ಪಂದದ ಚೌಕಟ್ಟಿನ ಸೂತ್ರಗಳಿಗೆ ಸಹಿ ಹಾಕಿತು. ಇದರೊಂದಿಗೆ ನಾಗಾ ಸಮಸ್ಯೆಗೆ ಯಾವುದಾದರೂ ಒಂದು ಬಗೆಯ ಪರಿಹಾರವು ಒದಗಿಬರುತ್ತದೆಂಬ ನಿರೀಕ್ಷೆ ಎಲ್ಲರಲ್ಲೂ ಹೆಚ್ಚಾಯಿತು. ಆದರೂ ಆ ಒಪ್ಪಂದದಲ್ಲೇನಿದೆ ಎಂಬುದನ್ನು ಈಗಲೂ ಅತ್ಯಂತ ರಹಸ್ಯವಾಗಿಯೇ ಕಾಪಾಡಿಕೊಂಡು ಬರಲಾಗಿದೆ ಮತ್ತು ಪ್ರತೀ ಕೆಲವು ತಿಂಗಳುಗಳಿಗೊಮ್ಮೆ ಇನ್ನೇನು ಒಪ್ಪಂದವು ಬಹಿರಂಗಗೊಳ್ಳುತ್ತದೆಂಬ ನಿರೀಕ್ಷೆಯನ್ನು ಮಾತ್ರ ಪದೇಪದೇ ಹುಟ್ಟುಹಾಕಲಾಗುತ್ತಿದೆ. ಈ ಬಗೆಯ ಪರಿಹಾರವೊಂದು ಸಿಗಲಿದೆ ಎಂಬ ನಿರೀಕ್ಷೆಯಿಂದಲೇ ನಾಗಾಲ್ಯಾಂಡ್‌ನ ನಾಗರಿಕ ಸಮಾಜ, ಚರ್ಚು ಮತ್ತು ರಾಜಕೀಯ ಪಕ್ಷಗಳು ಅಲ್ಲಿಯವರೆಗೆ ಚುನಾವಣೆಯನ್ನು ಮುಂದೂಡಬೇಕೆಂಬ ಒತ್ತಾಯವನ್ನು ಮಾಡುತ್ತಾ ಬಂದಿದ್ದವು. ಚುನಾವಣೆಗಳ ಫಲಿತಾಂಶಗಳು ಯಾವುದೇ ಸಮಾಧಾನವನ್ನಾಗಲೀ, ಪರಿಹಾರವನ್ನಾಗಲೀ ನೀಡುವ ಸಾಧ್ಯತೆ ಇಲ್ಲ. ಸಾಕಷ್ಟು ಸಂಪನ್ಮೂಲಗಳಿದ್ದಾಗ್ಯೂ ನಾಗಾಲ್ಯಾಂಡ್‌ನ ಅಭಿವೃದ್ಧಿಯು ತುಂಬಾ ಕಡೆಗಣಿಸಲ್ಪಟ್ಟಿದೆ. ಅದರಲ್ಲಿ ಎದ್ದು ಕಾಣುವುದು ರಸ್ತೆಗಳ ಪರಿಸ್ಥಿತಿ. ರಾಜ್ಯದಲ್ಲಿ ಶಿಕ್ಷಣ ಮಟ್ಟ ಹೆಚ್ಚಿದ್ದು ಸುಶಿಕ್ಷಿತ ಯುವ ಜನತೆ ನಿರುದ್ಯೋಗದ ಸಮಸ್ಯೆಯನ್ನೂ ತೀವ್ರವಾಗಿ ಅನುಭವಿಸುತ್ತಿದ್ದಾರೆ.

ಮತ್ತೊಂದು ಕಡೆ ರಾಜ್ಯದ ಸಾಮಾನ್ಯ ಜನ ಬಂಡುಕೋರ ಗುಂಪುಗಳಿಗೆ ಶಾಂತಿಯ ಸಲುವಾಗಿ ಪರೋಕ್ಷವಾಗಿ ತೆರಿಗೆಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಆ ಪರೋಕ್ಷ ತೆರಿಗೆಗಳಿಂದಾಗಲೀ, ಕೇಂದ್ರ ಸರಕಾರ ಕೊಡುತ್ತಿರುವ ಅನುದಾನಗಳಿಂದಾಗಲೀ ಅಲ್ಲಿನ ಜನರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಇದು ಅವರನ್ನು ಹತಾಷರನ್ನಾಗಿಸುತ್ತಿದೆ. ಕೇಂದ್ರ ಸರಕಾರದಿಂದ ಬರುವ ಅನುದಾನದ ಬಹಳಷ್ಟು ಭಾಗವು ನೇರವಾಗಿ ಅಧಿಕಾರದಲ್ಲಿರುವ ಕಿಸೆಗಳನ್ನು ಸೇರುತ್ತದೆ. ರಾಜಕೀಯ ಸಿದ್ಧಾಂತಗಳಿಗಿಂತ ಅಧಿಕಾರದಿಂದ ದೊರೆಯುವ ಸಂಪತ್ತು ಮತ್ತು ರಾಜಕೀಯ ಆಶ್ರಯಗಳೇ ರಾಜ್ಯದ ರಾಜಕೀಯವನ್ನು ನಿರ್ದೇಶಿಸುತ್ತಿದೆ. ರಾಜಕೀಯ ರಂಗ ಇಷ್ಟೊಂದು ಹದಗೆಟ್ಟಿದ್ದರೂ ನಾಗಾಲ್ಯಾಂಡ್‌ನ ನಾಗರಿಕ ಸಮಾಜ ಮಾತ್ರ ಸಾಕಷ್ಟು ಭರವಸೆಗಳನ್ನು ಹುಟ್ಟಿಹಾಕುತ್ತದೆ. ಅದರ ಸದಸ್ಯರು ಶಾಂತಿ ಪ್ರಕ್ರಿಯೆಯು ಮುಂದೆ ಸಾಗಲು ಪ್ರೇರೇಪಿಸಿದ್ದಾರೆ, ರಾಜಕೀಯದಲ್ಲಿರುವ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ ಮತ್ತು ಚುನಾವಣೆಯು ಸ್ವಚ್ಛವಾಗಿರಬೇಕೆಂದು ಆಗ್ರಹಿಸುತ್ತಾ ಜನಾಂದೋಲನಗಳನ್ನು ನಡೆಸಿದ್ದಾರೆ.

ಕಳೆದ ವರ್ಷ ಸರಕಾರಿ ಸಂಸ್ಥೆಗಳಲ್ಲಿ ಲಿಂಗ ಪ್ರಾತಿನಿಧ್ಯದಂಥ ವಿಷಯಗಳನ್ನು ನಾಗಾ ಮಹಿಳಾ ಗುಂಪುಗಳು ಎತ್ತಿದ್ದವು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಪಡೆದುಕೊಳ್ಳುವಲ್ಲಿ ಅವರು ವಿಫಲರಾದರೂ ಲಿಂಗ ಸಮಾನತೆಯ ಬಗ್ಗೆ ನಾಗಾಲ್ಯಾಂಡ್‌ನಂತಹ ಸಂಪ್ರದಾಯಶೀಲ ಸಮಾಜದಲ್ಲಿ ಒಂದು ಅರ್ಥಪೂರ್ಣ ಚರ್ಚೆಯನ್ನು ಹುಟ್ಟುಹಾಕುವಲ್ಲಿ ಸಫಲರಾದರು. ಬರಲಿರುವ ಚುನಾವಣೆಗಳಲ್ಲಿ ಕೇವಲ ಐವರು ಮಹಿಳೆಯರು ಮಾತ್ರ ಸ್ಪರ್ಧಿಸುತ್ತಿದ್ದಾರೆ. 1963ರಿಂದ ಈವರೆಗೆ ನಾಗಾಲ್ಯಾಂಡ್ ವಿಧಾನಸಭೆಗೆ ಒಬ್ಬ ಮಹಿಳೆಯೂ ಆಯ್ಕೆಯಾಗಿಲ್ಲ ಮತ್ತು ಒಂದೇ ಒಂದು ಬಾರಿ ಮಾತ್ರ ಒಬ್ಬ ಮಹಿಳೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ನಾಗಾಲ್ಯಾಂಡ್‌ನೊಳಗೆ ನಾಗಾ ನಾಗರಿಕ ಸಮಾಜವು ಎತ್ತುತ್ತಿರುವ ಪ್ರಶ್ನೆಗಳೇ ರಾಜ್ಯದ ನಿಜವಾದ ರಾಜಕಾರಣವಾಗಿದೆಯೇ ಹೊರತು ಪ್ರತೀ ಕೆಲವು ವರ್ಷಗಳಿಗೊಮ್ಮೆ ನಡೆಯುವ ಚುನಾವಣಾ ನಾಟಕಗಳಲ್ಲ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News