ರಾಮಾಯಣ ಬಲಪಂಥೀಯರ ವಶಕ್ಕೆ ಬೇಡ: ಓ.ಎಲ್.ನಾಗಭೂಷಣ ಸ್ವಾಮಿ
ಬೆಂಗಳೂರು, ಫೆ.28: ಸಾವಿರಾರು ವರ್ಷಗಳ ಕಾಲದಿಂದಲೂ ಜನ ಸಾಮಾನ್ಯರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಮಹಾಭಾರತ ಮತ್ತು ರಾಮಾಯಣವನ್ನು ಬಲಪಂಥೀಯರ ಕೈಗೆ ಒಪ್ಪಿಸಿ ಸುಮ್ಮನೆ ಕೂತ್ತಿದ್ದು ಸಾಕು. ಇನ್ನು ಮುಂದಾದರು ಈ ಮಹಾಕಾವ್ಯಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ವರ್ತಮಾನಕ್ಕೆ ಸರಿಹೊಂದುವಂತೆ ರೂಪಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ವಿಮರ್ಶಕ ಡಾ.ಓ.ಎಲ್.ನಾಗಭೂಷಣ ಸ್ವಾಮಿ ಅಭಿಪ್ರಾಯಿಸಿದರು.
ಬುಧವಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ನ್ಯಾಷನಲ್ ಕಾಲೇಜು ನಗರದ ಮಲ್ಟಿಮೀಡಿಯಾ ಸಭಾಂಗಣದಲ್ಲಿ ‘ಕುವೆಂಪು: ಶ್ರೀರಾಮಾಯಣ ದರ್ಶನಂ-ಜ್ಞಾನಪೀಠ-50’ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರಾಮಾಯಣ’ ಹಾಗೂ ‘ಮಹಾಭಾರತ’ ಎಂಬುದು ಒಂದು ಕಾವ್ಯ, ಒಂದು ಪುರಾಣವಲ್ಲ. ಹಳ್ಳಿಗೊಂದು ರಾಮಾಯಣ, ಮಹಾಭಾರತಗಳಿವೆ. ಹೀಗಾಗಿ ಕಾಳಿದಾಸ, ಅಭಿನವ ಗುಪ್ತ, ಪಂಪ, ರನ್ನ ಸೇರಿದಂತೆ ಹಲವು ಚಿಂತಕರು, ಬರಹಗಾರರು ರಾಮಾಯಣ, ಮಹಾಭಾರತ ಕಾವ್ಯವನ್ನು ತಮ್ಮ ಅನುಭವಕ್ಕೆ ತಕ್ಕಂತೆ ವಿಸ್ತರಿಸುತ್ತಾ ಬಂದಿದ್ದಾರೆ ಎಂದು ಅವರು ಹೇಳಿದರು.
ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯವಾಗಿದ್ದಾಗ, ಅದನ್ನು ತಮ್ಮ ಅನುಭವಕ್ಕೆ ತಕ್ಕಂತೆ ವಿಸ್ತರಿಸಿಕೊಳ್ಳಬಹುದಾಗಿತ್ತು. ಆದರೆ, ಭಕ್ತಿ ಪಂಥ ಪ್ರಾರಂಭವಾದ 13ನೆ ಶತಮಾನದ ಆರಂಭದಲ್ಲಿ ಈ ಕಾವ್ಯಗಳಿಗೆ ಪುರಾಣಗಳ ಬಣ್ಣ ಕಟ್ಟಲಾಯಿತು. ರಾಮ, ಸೀತೆ, ಕೃಷ್ಣ ಸೇರಿದಂತೆ ಇಲ್ಲಿ ಬರುವ ಪಾತ್ರಗಳಿಗೆ ದೈವಿಕ ಸ್ವರೂಪವನ್ನು ಕೊಡಲಾಯಿತು. ನಂತರದಲ್ಲಿ ಬ್ರಿಟಿಷರ ಕಾಲದಿಂದಾಚೆಗೆ ರಾಮಾಯಣ ಹಾಗೂ ಮಹಾಭಾರತಗಳು ಚರಿತ್ರೆಯ ರೂಪ ಪಡೆದುಕೊಂಡಿತು ಎಂದು ಅವರು ವಿಶ್ಲೇಷಿಸಿದರು.
ಕೆಲವು ಪಟ್ಟಭದ್ರರು ರಾಮಾಯಣ ಮತ್ತು ಮಹಾಭಾರತಕ್ಕೆ ಚರಿತ್ರೆಯ ಬಣ್ಣ ಕಟ್ಟಿ ರಾಜಕೀಯ ಸ್ವರೂಪ ಕೊಟ್ಟರು. ಅಲ್ಲಿಂದ ರಾಮಾಯಣ, ಮಹಾಭಾರತದ ಪಾತ್ರಗಳ ಕುರಿತು ವಿಮರ್ಶೆ, ಪ್ರಶ್ನೆ ಮಾಡುವವರ ವಿರುದ್ಧ ವಾಗ್ದಾಳಿ, ಹಲ್ಲೆಗಳು ನಡೆಸುವಂತಹ ಘಟನೆಗಳು ನಡೆಯುತ್ತಾ ಬಂದಿವೆ. ಹೀಗಾಗಿ ರಾಮಾಯಣ, ಮಹಾಭಾರತದ ನಿಜವಾದ ಸ್ವರೂಪ, ತತ್ವಗಳೇನು ಎಂಬುದನ್ನು ಜನಸಾಮಾನ್ಯರಿಗೆ ತಿಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ಧಪ್ಪ ಮಾತನಾಡಿ, ಇಂದಿಗೂ ಗ್ರಾಮಾಂತರ ಜನತೆ ರಾಮಾಯಣ, ಮಹಾಭಾರತದ ಮಹಾಕಾವ್ಯಗಳಲ್ಲಿ ಕಂಡುಬರುವ ಪಾತ್ರಗಳ ಜತೆಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಆಯಾ ಪ್ರದೇಶಗಳಿಗೆ ಹೊಂದಿಕೊಂಡಂತೆ ರಾಮಾಯಣ, ಮಹಾಭಾರತದ ಕಥನಾ ಸ್ವರೂಪವು ಬದಲಾಗಿರುವುದನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ರಾಮಾಯಣ ಹಾಗೂ ಮಹಾಭಾರತ ಕುರಿತು ಗೊತ್ತಿರದ ಯಾವ ವ್ಯಕ್ತಿಯೂ ಇಲ್ಲ. ಪ್ರತಿಯೊಬ್ಬನು ತನ್ನದೆ ಆದ ಅನುಭವದಲ್ಲಿ ರಾಮಾಯಣ ಮಹಾ ಕಾವ್ಯದಲ್ಲಿ ಬರುವ ಪಾತ್ರಗಳ ಜತೆ ಸಂಬಂಧ ಏರ್ಪಡಿಸಿಕೊಂಡಿರುತ್ತಾರೆ. ಹೀಗಾಗಿ ದೇಶದ ನಿಜವಾದ ಅಸ್ಮಿತೆ ರಾಮಾಯಣ ಹಾಗೂ ಮಹಾಭಾರತದಲ್ಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಟಕಕಾರ ಕೆ.ವೈ.ನಾರಾಯಣಸ್ವಾಮಿ, ವಿಮರ್ಶಕ ಎಚ್.ದಂಡಪ್ಪ, ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಎಚ್.ಆರ್.ಕೃಷ್ಣಮೂರ್ತಿ, ಗೌರವ ಕಾರ್ಯದರ್ಶಿ ಎಸ್.ಎನ್.ನಾಗರಾಜ ರೆಡ್ಡಿ ಮತ್ತಿತರರಿದ್ದರು.
ರಾಮನ ಜನ್ಮಸ್ಥಳ ನೂರಾರು
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ರಾಮ ಮಂದಿರಗಳಿವೆ. ಅಲ್ಲಿನ ಎಲ್ಲ ದೇವಸ್ಥಾನಗಳ ಅರ್ಚಕರು ರಾಮ ಇಲ್ಲಿಯೆ ಹುಟ್ಟಿದ ಅನ್ನುತ್ತಾರೆ. ಹೀಗಾಗಿ ದೇಶದಲ್ಲಿ ಒಂದು ರಾಮನಿಲ್ಲ. ನಮ್ಮ ಮಹಾಕಾವ್ಯಗಳ ಪ್ರಕಾರ ಹಳ್ಳಿಗೊಂದು ರಾಮಾಯಣ ನಡೆದಿರಬಹುದು. ಹಳ್ಳಿಗೊಬ್ಬ ರಾಮನಿರಬಹುದು.
-ಮರುಳಸಿದ್ಧಪ್ಪ ಅಧ್ಯಕ್ಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ