ಪಿಸ್ತೂಲ್ ಜತೆಗಿನ ಬಾಲಕನ ಸೆಲ್ಫಿ ಗೀಳಿಗೆ ಶಿಕ್ಷಕ ಬಲಿ
Update: 2018-03-10 04:18 GMT
ಹೊಸದಿಲ್ಲಿ, ಮಾ.10: ಬಾಲಕನೊಬ್ಬ ಪಿಸ್ತೂಲ್ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಭರಾಟೆಯಲ್ಲಿ ಆಕಸ್ಮಿಕವಾಗಿ ಗುಂಡು ಹಾರಿದ್ದರಿಂದ ಸಹೋದರ ಸಂಬಂಧಿಯೋರ್ವ ಮೃತಪಟ್ಟ ಘಟನೆ ದಕ್ಷಿಣ ದಿಲ್ಲಿಯಲ್ಲಿ ನಡೆದಿದೆ.
ದಕ್ಷಿಣ ದಿಲ್ಲಿಯ ಶಹದಾರ ಪ್ರದೇಶದಲ್ಲಿ ಈ ದುರಂತ ಶುಕ್ರವಾರ ನಡೆದಿದ್ದು, ಪ್ರಶಾಂತ್ ಚೌಹಾಣ್(23) ಮೃತಪಟ್ಟವರಾಗಿದ್ದಾರೆ. ಮೂಲತಃ ಉತ್ತರ ಪ್ರದೇಶದ ಪಾಲಿ ಗ್ರಾಮದವರಾಗಿದ್ದ ಪ್ರಶಾಂತ್ ಗುತ್ತಿಗೆ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಇವರು ಸರಿತಾ ವಿಹಾರದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಮನೆಯಲ್ಲಿ ಚಿಕ್ಕಪ್ಪನ ಮಗ, ಹನ್ನೊಂದನೇ ತರಗತಿ ವಿದ್ಯಾರ್ಥಿ ತಂದೆಯ ಪಿಸ್ತೂಲು ತೆಗೆದುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಆಕಸ್ಮಿಕವಾಗಿ ಹಾರಿದ ಗುಂಡು ಪ್ರಶಾಂತ್ ಅವರಿಗೆ ತಾಗಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.