ಹಗರಣಗಳ ನೆಪದಲ್ಲಿ ಅನುಚಿತ ಕ್ರಮ ಸಲ್ಲ: ಸಚಿವ ಆರ್.ವಿ.ದೇಶಪಾಂಡೆ
ಬೆಂಗಳೂರು, ಮಾ. 21: ಯಾವುದೋ ಒಂದು ಬ್ಯಾಂಕಿನಲ್ಲಿ ಹಗರಣವಾಯಿತೆಂದು ಎಲ್ಲರನ್ನೂ ಶಿಕ್ಷಿಸುವುದು ಅನುಚಿತವಾದ ಕ್ರಮ. ಇದರಿಂದ ದೇಶದಲ್ಲಿ ವಹಿವಾಟು ಸ್ಥಗಿತವಾಗುವ ಅಪಾಯವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಅಸೋಚಮ್ (ದಿ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ) ನಗರದಲ್ಲಿ ಏರ್ಪಡಿಸಿದ್ದ ‘ರೋಲ್ ಆಫ್ ಟ್ರೇಡ್ ಫೈನಾನ್ಸ್ ಫಾರ್ ಇನ್ಕ್ಲೂಸೀವ್ಗ್ರೋಥ್ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬ್ಯಾಂಕಿಂಗ್ ಸೇರಿದಂತೆ ಯಾವ ಕ್ಷೇತ್ರದಲ್ಲೇ ಆಗಲಿ, ಹಗರಣಗಳು ನಡೆಯದಂತೆ ನೋಡಿಕೊಳ್ಳಬೇಕೆನ್ನುವುದು ನಿಜ. ಆದರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಕೆಲವರು ಸ್ವಹಿತಾಸಕ್ತಿಗಾಗಿ ಕೆಲವರೊಂದಿಗೆ ಶಾಮೀಲಾಗುತ್ತಿದ್ದಾರೆ. ಹಗರಣಗಳು ನಡೆಯಲು ಇವರೇ ಮೂಲಕಾರಣರು ಎಂದು ಅವರು ಪ್ರತಿಪಾದಿಸಿದರು.
ಇತ್ತೀಚೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಹಗರಣ ಬೆಳಕಿಗೆ ಬಂತು. ಇದಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕೆನ್ನುವುದು ನಿಜ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಕೇಂದ್ರ ಸರಕಾರ ರಾತ್ರೋರಾತ್ರಿ ಅತಾರ್ಕಿಕವಾದ ನಿಯಮಗಳನ್ನೆಲ್ಲ ಹೇರುತ್ತಿದೆ. ಈ ರೀತಿಯ ಕ್ರಮಗಳಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಹೊಡೆತ ಬೀಳಲಿದೆ, ಇನ್ನೊಂದೆಡೆ, ಆರ್ಬಿಐ ಮತ್ತು ಕೇಂದ್ರ ಸರಕಾರದ ನಡುವೆ ಹೊಂದಾಣಿಕೆ ಇಲ್ಲದಿರುವುದು ಕಂಡುಬರುತ್ತಿದೆ. ಹೀಗಾಗಿ, ದೇಶದಲ್ಲಿ ಏನಾಗುತ್ತಿದೆ ಎನ್ನುವುದೇ ಯಾರಿಗೂ ಗೊತ್ತಾಗದಂತಹ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಗರಣಗಳಿಂದ ಯಾವ ದೇಶವೂ ಮುಕ್ತವಾಗಿಲ್ಲ. ಹಾಗೆಂದು, ಪ್ರಾಮಾಣಿಕರಿಗೆ ಶಿಕ್ಷೆಯಾಗಬಾರದು. ನಮ್ಮ ದೇಶದ ಬ್ಯಾಂಕುಗಳು ಸರಳವಾದ, ಪಾರದರ್ಶಕವಾದ ಮತ್ತು ಕಾಲಕ್ಕೆ ಪ್ರಸ್ತುತವಾದ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಈಗಿನ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಮುಕ್ಕಾಲು ಪಾಲು ನಿಯಮಗಳು ಓಬಿರಾಯನ ಕಾಲಕ್ಕೆ ಸೇರಿವೆ ಎಂದು ಅವರು ಟೀಕಿಸಿದರು.
ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬೆಳೆಯಬೇಕಾದರೆ ಬ್ಯಾಂಕುಗಳಲ್ಲಿ ಬಡ್ಡಿ ದರ ಇಳಿಯಬೇಕು. ಇದರ ಜೊತೆಗೆ ಉದ್ಯಮಿಗಳು ತಾವು ಹೇಳುವುದೊಂದು, ಮಾಡುವುದು ಇನ್ನೊಂದು ಎನ್ನುವಂತಹ ದ್ವಂದ್ವ ನೀತಿಯಿಂದ ಹೊರಬಂದು, ಗುಣಮಟ್ಟ ಮತ್ತು ಸಮಯಕ್ಕೆ ಸರಿಯಾಗಿ ಸೇವೆಯನ್ನು ಪೂರೈಸುವ ಕಡೆಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯುವುದು ಸಾಧ್ಯವಿಲ್ಲ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆರ್ಬಿಐ ನಿವೃತ್ತ ಡೆಪ್ಯುಟಿ ಗವರ್ನರ್ ಆರ್.ಗಾಂಧಿ, ಕೇಂದ್ರ ಸರಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆಯ ನಿವೃತ್ತ ಕಾರ್ಯದರ್ಶಿ ಅನೂಪ್ ಕೆ.ಪೂಜಾರಿ, ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಿ. ಭಾರತಿ, ಆರ್ಬಿಐನ ವಿದೇಶೀ ವಿನಿಮಯ ಇಲಾಖೆಯ ಜನರಲ್ ಮ್ಯಾನೇಜರ್ ಆರ್.ಸುದೀಪ್, ಅಸೋಚಮ್ ಹಿರಿಯ ಸಲಹೆಗಾರ ಎಂ.ನರೇಂದ್ರ, ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ ಉಪಸ್ಥಿತರಿದ್ದರು.
ಘೋಷಣೆಗಳಿಂದ ಪ್ರಯೋಜನವಿಲ್ಲ
‘ಯುವಜನರಿಗೆ ಉದ್ಯೋಗಸೃಷ್ಟಿಯ ತುರ್ತು ಅಗತ್ಯವಿದೆ. ಮೋದಿ ಸರಕಾರ ಅಧಿಕಾರಕ್ಕೆ ಬರುವ ಮೊದಲು ವಾರ್ಷಿಕ 2ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ, ಕೇಂದ್ರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ಬರಿ ಘೋಷಣೆಗಳಿಂದ ಪ್ರಯೋಜನವೂ ಆಗುವುದಿಲ್ಲ’
-ಆರ್.ವಿ.ದೇಶಪಾಂಡೆ ಬೃಹತ್ ಕೈಗಾರಿಕೆ ಸಚಿವ