ಅಮಿತ್ ಶಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
Update: 2018-03-28 19:51 IST
ಬೆಂಗಳೂರು, ಮಾ.28: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಹಿಂದೂ(ಹಿಂದೂ ವಿರೋಧಿ) ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ರಾಜ್ಯ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ರಾಜ್ಯ ಸರಕಾರವು ಹಿಂದೂಗಳನ್ನು ವಿಭಜಿಸುತ್ತಿದೆ. ಆದರೆ, ಇತರೆ ಧರ್ಮಗಳನ್ನು ಮುಟ್ಟುತ್ತಿಲ್ಲ. ಸಿದ್ದರಾಮಯ್ಯ ಅಹಿಂದ ಪರವಲ್ಲ, ಅವರು ಅಹಿಂದೂ ಎಂದು ಅಮಿತ್ ಶಾ ಆರೋಪಿಸಿರುವುದಾಗಿ ದಿನಪತ್ರಿಕೆಗಳಲ್ಲಿ ವರದಿಯಾಗಿದೆ. ಅಲ್ಲದೆ, ಬಿಜೆಪಿಯ ಟ್ವಿಟರ್ನಲ್ಲಿಯೂ ಇದೇ ಸಂದೇಶ ಹರಿದಾಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಹೇಳಿಕೆಯು ಪ್ರಜಾಪ್ರತಿನಿಧಿ ಕಾಯ್ದೆ 1950-51ರ ಉಲ್ಲಂಘನೆಯಷ್ಟೇ ಅಲ್ಲ, ಸಮಾಜವನ್ನು ಕೋಮು ಆಧಾರದಲ್ಲಿ ವಿಭಜಿಸುವ ಷಡ್ಯಂತ್ರ ಅಡಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.