ಅಸ್ಪಶ್ಯತೆ-ಅಜ್ಞಾನ ಹೋಗಲಾಡಿಸಲು ರಾಜಕೀಯ ಪಕ್ಷಗಳು ಮುಂದಾಗಲಿ: ಬಿ.ಟಿ.ಲಲಿತಾನಾಯಕ್

Update: 2018-03-29 12:34 GMT

ಬೆಂಗಳೂರು, ಮಾ.29: ರಾಜಕೀಯ ಪಕ್ಷಗಳು ಕಾಂಗ್ರೆಸ್ ಮತ್ತು ಬಿಜೆಪಿ ಮುಕ್ತ ರಾಜ್ಯವೆಂದು ವಿರೋಧ ವ್ಯಕ್ತಪಡಿಸುವ ಬದಲು ಅಸ್ಪಶ್ಯತೆ ಹಾಗೂ ಅಜ್ಞಾನ ಮುಕ್ತ ನಾಡನ್ನಾಗಿ ಪರಿವರ್ತಿಸಲು ಎರಡೂ ಪಕ್ಷ ಮುಂದಾಗಬೇಕು ಎಂದು ಸಾಹಿತಿ ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.

ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಏಕದಿನ ಸಾಹಿತ್ಯ ರಚನಾ ಕಮ್ಮಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳು ಜನರ ಮುಂದೆ ಹಣವನ್ನು ಕೋಳಿ ಮುಂದೆ ಕಾಳಿನಂತೆ ಚೆಲ್ಲುತ್ತಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಾರೆ. ಆಡಳಿತಕ್ಕೆ ಬಂದ ಸರಕಾರಗಳು ಸಮಾಜಘಾತುಕ ಶಕ್ತಿಗಳನ್ನು ನಿರ್ಣಾಮ ಮಾಡುವಲ್ಲಿ ವಿಫಲವಾಗಿವೆ. ಇದು ರಾಜ್ಯದಲ್ಲಿ ನಡೆಯುತ್ತಿರುವ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದಲ್ಲಿ ಅಮಾನವೀಯ ಕೃತ್ಯಗಳನ್ನು ಹೋಗಲಾಡಿಸುವುದು ಬಂಡಾಯ ಸಾಹಿತ್ಯದ ಮೂಲ ಉದ್ದೇಶ. ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಮುಂತಾದ ಆದರ್ಶ ವ್ಯಕ್ತಿಗಳು ತೋರಿದ ಮಾರ್ಗೋಪಾಯದಂತೆ ಸಮಾಜ ನಡೆದರೆ ಉಜ್ವಲ ಭವಿಷ್ಯವನ್ನು ಕಾಣಬಹುದು. ಇಂದಿಗೂ ದೌರ್ಜನ್ಯ, ಜಾತೀಯತೆ, ಕೋಮುವಾದಿ ಶಕ್ತಿಗಳು ಬೇರೂರಿವೆ. ಇಂತಹ ಶಕ್ತಿಗಳಿಗೆ ಅಂತ್ಯ ಕಾಣಲು ಕಾನೂನು ವ್ಯವಸ್ಥೆ ಸರಿಯಾಗಿರಬೇಕು. ಬಂಡಾಯ ಸಾಹಿತ್ಯದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರೆದರೆ ಸಮಾನ ಸಾಜ ಕಾಣಬಹುದು ಎಂದು ಹೇಳಿದರು.

ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ಬಂಡಾಯ ಸಾಹಿತ್ಯ ಹುಟ್ಟಿ 40 ವರ್ಷಗಳಾಗಿದ್ದು, ಇಂದಿಗೂ ಇದರ ಅನಿವಾರ್ಯತೆಯಿದೆ. ಬಂಡಾಯ ಸಾಹಿತ್ಯ ಭೂತಕಾಲದ್ದಾಗಿದ್ದರೂ ವರ್ತಮಾನ ಕಾಲದ ತುರ್ತು ಪರಿಸ್ಥಿತಿ ನೋಡಿದರೆ ಅವಶ್ಯಕ ಎನಿಸುತ್ತಿದೆ. ಯಾವುದೇ ಸಾಹಿತ್ಯವಿರಬಹುದು ಅದರ ಪ್ರಸ್ತುತತೆಯು ಎಷ್ಟರ ಮಟ್ಟಿಗೆ ಸಮಕಾಲೀನ ಸವಾಲುಗಳನ್ನು ಎದುರಿಸುತ್ತಿದೆ ಎಂಬುದನ್ನು ತಿಳಿಯಬೇಕಿದೆ. ಕಾಳಿದಾಸ, ಪಂಪ, ಶೇಕ್ಸ್‌ಪಿಯರ್ ಮುಂತಾದ ಕವಿಗಳು ಅವರ ಕಾಲಘಟ್ಟದಲ್ಲಿ ಅನುಭವಿಸಿದ ಕಷ್ಟಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.

ಪ್ರವಚನ, ಉಪದೇಶ, ಕವನಗಳ ಮೂಲಕ ಸಾಹಿತ್ಯ ರಚನೆ ಕೌಶಲ್ಯ ಪಡೆಯಲು ಸಾಧ್ಯವಿಲ್ಲ. ಇಂತಹ ಕೌಶಲ್ಯ ಪಡೆಯಲು ಅಧ್ಯಯನ ಮತ್ತು ಸಂಶೋಧನೆ ಮಾಡಬೇಕು. ಯುವ ಬರಹಗಾರರು ಸಾಹಿತ್ಯದ ಚಿಂತನ-ಮಂಥನದಲ್ಲಿ ತೊಡಗಿ ಅನುಭವ ಪಡೆಯಬೇಕು. ಹಾಗೆಯೇ ಸಂಕೇತಗಳ ಮೂಲಕ ಭಾಷೆ ರೂಪಿಸಬೇಕು. ಸಾಹಿತ್ಯದ ಉದ್ದೇಶ, ಬರವಣಿಗೆಯ ಚೌಕಟ್ಟು ಇವೆಲ್ಲವನ್ನು ಯುವ ಬರಹಗಾರ ತಿಳಿಯಬೇಕಿದೆ. ಯಾವುದೇ ಸಾಹಿತಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಬರೆದಂತಹ ಪುಸ್ತಕ ಯಾವ ಸಮುದಾಯಕ್ಕೆ ತಲುಪಬೇಕೆಂದು ತಿಳಿಯಬೇಕು ಎಂದರು.

ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿ, ಇಂದಿನ ಸಾಮಾಜಿಕ ಸಮಸ್ಯೆಗಳು ನಮ್ಮ ಬದುಕನ್ನು ಕಸಿಯುತ್ತಿವೆ. ರಾಜಕೀಯ, ಸಾಮಾಜಿಕ ಕ್ಷೇತ್ರಗಳು ಭೂತದಂತೆ ಕಾಡುತ್ತಿವೆ. ಇದಕ್ಕೆ ಬಂಡಾಯ ಸಾಹಿತ್ಯದಿಂದ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.

ರಾಜ್ಯ ಕೈಗಾರಿಕಾ ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ಮಾತನಾಡಿ, ಧರ್ಮಗಳ ನಡುವೆ ಒಡಕು ಉಂಟು ಮಾಡುತ್ತಿರುವ ರಾಜಕೀಯ ವ್ಯಕ್ತಿಗಳ ಕುರಿತು ವಿಭಿನ್ನವಾಗಿ ಪುಸ್ತಕಗಳನ್ನು ಬರೆಯುವ ಮೂಲಕ ಜನರಿಗೆ ಅವರ ಸ್ವಭಾವ ಅರ್ಥೈಸಬೇಕು. ಚುನಾವಣೆಯ ಹೊಸ್ತಿಲಲ್ಲಿ ಜಾತಿಗಳ ನಡುವೆ ವೈಷಮ್ಯ ಮೂಡಿಸುವುದು ನ್ಯಾಯಯುತವಲ್ಲ ಎಂದು ತಿಳಿಸಿದರು.

‘ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವ್ಯಕ್ತಿಗಳ ಆರೋಪ ಮತ್ತು ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಮನಸ್ಸಿನಲ್ಲಿ ನಿಜಾಂಶ ಮುಚ್ಚಿಟ್ಟು ಜನರ ಮುಂದೆ ಸುಳ್ಳು ಹೇಳುವ ಪ್ರವೃತ್ತಿಯನ್ನು ರಾಜಕಾರಣಿಗಳು ರೂಢಿಸಿಕೊಂಡಿದ್ದಾರೆ. ಇಂತಹ ಸಂಸ್ಕೃತಿಯನ್ನು ಬೆಳೆಸಿಕೊಂಡ ಯಾವುದೇ ವ್ಯಕ್ತಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ.’
-ಚಂದ್ರಶೇಖರ್ ಪಾಟೀಲ್, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News