ಅಂಧ ದಂಪತಿಗೆ ಹಲ್ಲೆಗೈದು ಜೈ ಶ್ರೀ ರಾಮ್ ಹೇಳಿಸಿದ ದುಷ್ಕರ್ಮಿಗಳು

Update: 2018-04-02 07:07 GMT

ಕೊಲ್ಕತ್ತಾ,ಎ.2 : ಪಶ್ಚಿಮ ಬಂಗಾಳದ ಬುದ್ರ್ವಾನ್ ಜಿಲ್ಲೆಯ ಅಂದಾಲ್ ಎಂಬಲ್ಲಿನ ಚಿತದಂಗ ಪ್ರದೇಶದಲ್ಲಿ ಅಂಧ ಬಿಕ್ಷುಕ ದಂಪತಿಗೆ  'ಜೈ ಶ್ರೀ ರಾಮ್' ಹಾಗೂ 'ಜೈ  ಮಾ ತಾರಾ' ಹೇಳುವಂತೆ  ಬಲವಂತಪಡಿಸಿ ಗುಂಪೊಂದು ಹಲ್ಲೆ ನಡೆಸಿದೆ.  ಈ ಅಂಧ ದಂಪತಿ ಅಬುಲ್ ಬಶರ್ (67) ಹಾಗೂ  ಬೇದನ ಬೀಬಿ(61) ಅವರ ಮೇಲೆ ಹಲ್ಲೆಗೈಯ್ಯುತ್ತಿರುವ  ವೀಡಿಯೋ ವೈರಲ್ ಆಗಿದೆ.

ಬಶರ್ ಹೇಳುವಂತೆ ಘಟನೆ ಕಳೆದ ಮಂಗಳವಾರ, ರಾಣಿಗಂಜ್ ಹಾಗೂ ಅಸನ್ಸೋಲ್ ನಲ್ಲಿ ಮತೀಯ ಹಿಂಸಾಚಾರ  ನಡೆದ ಮುನ್ನಾ ದಿನ ನಡೆದಿತ್ತು. ದಂಪತಿ ಮೇಲೆ ಹಲ್ಲೆ ನಡೆದ ಸ್ಥಳವು ಅಸನ್ಸೋಲ್ ಮತ್ತು ರಾಣಿಗಂಜ್ ನಿಂದ ಕ್ರಮವಾಗಿ 32 ಕಿಮೀ ಹಾಗೂ 18 ಕಿಮೀ ದೂರವಿದೆ.

“ಕೆಲ ಜನರು ನನ್ನ ಬಳಿ ಬಂದು ನನ್ನ ಟೊಪ್ಪಿ ಹಿಡಿದೆಳೆದರು. ನಾವು ಮುಸ್ಲಿಮರಾಗಿರುವುದರಿಂದ ಹಾಗೂ ಹಿಂದು ಬಾಹುಳ್ಯ ಪ್ರದೇಶವೊಂದಕ್ಕೆ ಪ್ರವೇಶಿಸಿರುವುದರಿಂದ ನಮ್ಮನ್ನು ಕೊಲ್ಲುವುದಾಗಿ ಅವರು ಹೇಳಿದರು. ನಂತರ ಅವರು ನನಗೆ ಹಾಗೂ ನನ್ನ ಪತ್ನಿಗೆ ಹೊಡೆಯಲು ಆರಂಭಿಸಿದರು. ನಮ್ಮನ್ನು ಹೋಗಲು ಬಿಟ್ಟರೆ ಮತ್ತೆ ಈ ಪ್ರದೇಶಕ್ಕೆ ಬರುವುದಿಲ್ಲವೆಂದು ನನ್ನ ಪತ್ನಿ ಬೇಡಿದರೂ ಅವರು ಕಿವಿಗೊಡಲಿಲ್ಲ. ನಾವಿಬ್ಬರೂ ಅಂಧರು, ಕೇವಲ ಭಿಕ್ಷೆ ಬೇಡಲು ಬಂದಿದ್ದೇವೆ ಎಂದು ಹೇಳಿದಾಗ ಜೈ ಶ್ರೀ ರಾಮ್ ಹಾಗೂ ಜೈ ಮಾ ತಾರಾ ಹೇಳುವಂತೆ ಒತ್ತಾಯಿಸಿದರು. ನಮ್ಮ ಜೀವಕ್ಕೆ ಬೆದರಿ ಅವರು ಹೇಳಿದಂತೆ ಮಾಡಿದೆವು'' ಎಂದು ಬಶರ್ ಹೇಳಿದ್ದಾರೆ.

 ಬಶರ್ ಜೈ ಶ್ರೀ ರಾಮ್ ಹೇಳುವಾಗ ಆತನ ಕೈಯ್ಯಲ್ಲಿ ಓಂ ಎಂದು ಬರೆದ ಕೇಸರಿ ಧ್ವಜವಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.

ಅಂದಾಲ್ ಪೊಲೀಸ್ ಠಾಣಾಧಿಕಾರಿಗಳು ಮಾತ್ರ ತಮಗೆ ಇಂತಹ ಘಟನೆ ನಡೆದ ಬಗ್ಗೆ ತಿಳಿದಿಲ್ಲ. ನಮಗೆ ಯಾವುದೇ ದೂರು ಬಂದಿಲ್ಲ ಎಂದಿದ್ದಾರೆ. ತಮಗೆ ಪೊಲೀಸ್ ಠಾಣೆಗೆ ತೆರಳಿ ದೂರು ನಿಡಲು ಭಯವಾಗಿತ್ತು, ಎಂದು ದಂಪತಿ ಹೇಳಿಕೊಂಡಿದ್ದಾರೆ.

ದಂಪತಿಗೆ ವಿವಾಹಿತ ಪುತ್ರನೊಬ್ಬನಿದ್ದು,  ಪುತ್ರಿ ಶಾಲೆಗೆ ಹೋಗುತ್ತಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News