ಗ್ರಾಮಸ್ಥರು ಬಾಯಿ ಮುಚ್ಚುವಂತೆ ಬಿಜೆಪಿ ಶಾಸಕನ ಜನರು ಬೆದರಿಕೆ ಹಾಕುತ್ತಿದ್ದಾರೆ: ಅತ್ಯಾಚಾರ ಸಂತ್ರಸ್ತೆಯ ಚಿಕ್ಕಪ್ಪ

Update: 2018-04-15 17:09 GMT

ಉನ್ನಾವೊ, ಎ.15: ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗಾರ್‌ನ ಗೂಂಡಾಗಳು ಗ್ರಾಮಸ್ಥರು ಬಾಯಿ ಮುಚ್ಚಿಕೊಂಡಿರುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತೆಯ ಚಿಕ್ಕಪ್ಪ ಆರೋಪಿಸಿದ್ದಾರೆ. ಸೆಂಗಾರ್‌ನ ಗೂಂಡಾಗಳು ಗ್ರಾಮದ ಜನರಿಗೆ ಬೆದರಿಕೆ ಹಾಕಿ ಬಾಯಿ ಮುಚ್ಚಿಕೊಂಡಿರುವಂತೆ ತಾಕೀತು ಮಾಡಿದ್ದಾರೆ. "ಎರಡು ಕಾರುಗಳಲ್ಲಿ ಗ್ರಾಮಕ್ಕೆ ತೆರಳಿದ್ದ ಗೂಂಡಾಗಳು ನನ್ನ ಜೊತೆ ಸಂಪರ್ಕವನ್ನು ಕಡಿಯುವಂತೆ ಅಥವಾ ಪರಿಣಾಮವನ್ನು ಎದುರಿಸುವಂತೆ ಬೆದರಿಸಿದ್ದಾರೆ. ಗ್ರಾಮಸ್ಥರನ್ನು ಗ್ರಾಮದಿಂದ ಹೊರಗೆ ಹಾಕುವುದಾಗಿ ಅವರು ಹೆದರಿಸುತ್ತಿದ್ದಾರೆ. ನನ್ನ ಜೊತೆ ಸಂಪರ್ಕದಲ್ಲಿದ್ದ ಇಬ್ಬರು ವ್ಯಕ್ತಿಗಳು ಈಗಾಗಲೇ ನಾಪತ್ತೆಯಾಗಿದ್ದಾರೆ" ಎಂದು ಸಂತ್ರಸ್ತೆಯ ಚಿಕ್ಕಪ್ಪ ತಿಳಿಸಿದ್ದಾರೆ. 

ಶುಕ್ರವಾರದಂದು ಸಿಬಿಐ ಆರೋಪಿ ಶಾಸಕ ಸೆಂಗಾರ್‌ನನ್ನು ಬಂಧಿಸಿದ್ದು ನ್ಯಾಯಾಲಯವು ಶಾಸಕನಿಗೆ ಏಳು ದಿನಗಳ ಸಿಬಿಐ ಕಸ್ಟಡಿ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಉನ್ನಾವೊದ ಜಿಲ್ಲಾಸ್ಪತ್ರೆಯ ವೈದ್ಯಕೀಯ ವರಿಷ್ಠಾಧಿಕಾರಿ ಮತ್ತು ಇನ್ನೊರ್ವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಬಿಜೆಪಿ ಶಾಸಕ ತನ್ನ ಅತ್ಯಾಚಾರ ನಡೆಸಿರುವುದಾಗಿ ಯುವತಿ ಆರೋಪಿಸಿದ್ದಳು. ಇದಾದ ನಂತರ ಆಕೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿರುವಾಗ ಸಾವನ್ನಪ್ಪಿದ್ದರು. ಆರೋಪಿ ಶಾಸಕನ ಸಹೋದರ ಅತುಲ್ ಸಿಂಗ್ ಸೆಂಗಾರ್, ಶಾಸಕನ ಜೊತೆ ಸೇರಿ ತನ್ನನ್ನು ಅತ್ಯಾಚಾರ ಮಾಡಿದ್ದು ಮಾತ್ರವಲ್ಲದೆ ತನ್ನ ತಂದೆಯನ್ನು ಥಳಿಸಿ ಹತ್ಯೆ ಮಾಡಿದ್ದಾನೆ ಎಂದು ಯುವತಿ ದೂರಿಕೊಂಡಿದ್ದಳು. ಪೊಲೀಸರು ಗುರುವಾರದಂದು ಅತುಲ್ ಸಿಂಗ್ ಜೊತೆಗೆ ಇತರ ಐವರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News