ರಾಜ್ಯದೆಲ್ಲೆಡೆ ನಾಳೆಯಿಂದ ಬಿರುಗಾಳಿ ಮಳೆ ಸಾಧ್ಯತೆ

Update: 2018-04-21 15:51 GMT

ಬೆಂಗಳೂರು, ಎ.21: ರಾಜ್ಯದಲ್ಲಿ ಬೇಸಿಗೆ ಮಳೆ ಮುಂದುವರಿದಿದ್ದು, ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ದಾಖಲಾಗಿದೆ. ಎ. 25 ರವರೆಗೂ ರಾಜ್ಯದ ಹಲವೆಡೆ ಬಿರುಗಾಳಿ, ಗುಡುಗು ಸಿಡಿಲು ಸಹಿತ ಮಳೆ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಮಲೆನಾಡಿನಾದ್ಯಂತ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ಚಾಮರಾಜನಗರ, ಚಿತ್ರದುರ್ಗ, ಕೊಡಗು, ಮಂಡ್ಯ, ಮೆಸೂರು ಮತ್ತು ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಂದೆರಡು ದಿನ ಭಾರಿ ಮಳೆ ಮುಂದುವರಿಯಲಿದ್ದು, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೊಲಾರ, ರಾಮನಗರ ಜಿಲ್ಲೆಗಳಲ್ಲೂ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ ಮತ್ತು ರಾಯಚೂರಿನಲ್ಲಿ ಎ.23 ರಂದು ಬಿರುಗಾಳಿ ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆ ದಾಖಲಾಗುತ್ತಿದ್ದರೆ ಉತ್ತರ ಕರ್ನಾಟದಲ್ಲಿ ಬಿಸಿಲ ಬೇಗೆ ಏರುತ್ತಿದೆ. ವಿಜಯಪುರ, ಬೀದರ್, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಷಿಯಸ್ ದಾಟಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ(41.8 ಡಿ.ಸೆ.) ದಾಖಲಾಗಿದೆ. ಮಳೆ ಮತ್ತು ಭಾಗಶಃ ಮೋಡ ಕವಿದ ವಾತಾವರಣವಿದ್ದರೂ ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ 42 ಡಿ.ಸೆ. ದಾಟುವ ಮುನ್ಸೂಚನೆ ಇದೆ. ರಾಜ್ಯದ ದಕ್ಷಿಣ ಒಳನಾಡನ್ನು ಹಾದುಹೋಗುವಂತೆ ಉತ್ತರ ಕರ್ನಾಟಕ ಭಾಗದಿಂದ ತಮಿಳುನಾಡಿನ ದಕ್ಷಿಣ ಭಾಗದವರೆಗೂ ಗಾಳಿಯ ಚಲನೆ ಇರುವುದು ಮಳೆಯಾಗಲು ಕಾರಣ.

ಉಡುಪಿ, ಮುರುಡೇಶ್ವರ ಮತ್ತು ಗೋಕರ್ಣ ಭಾಗದಲ್ಲಿ ಎ.21 ಮತ್ತು 22ರಂದು ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಸಮುದ್ರದಲ್ಲಿ 2.5 ಮಿ. ಎತ್ತರದ ಅಲೆಗಳು ಏಳುವ ಸಾಧ್ಯತೆ ಇದ್ದು, ಬಂದರಿನಲ್ಲಿ ಬೋಟುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News