ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ: ವಿಜಯೇಂದ್ರ ಮನವಿ

Update: 2018-04-24 14:16 GMT

ಬೆಂಗಳೂರು,ಎ. 24: ನನ್ನನ್ನು ಮನೆ ಮಗನಂತೆ ಕಂಡು ತುಂಬು ಹೃದಯದಿಂದ ಬರಮಾಡಿಕೊಂಡ ವರುಣಾ ಕ್ಷೇತ್ರದ ಜನತೆ ಪ್ರೀತಿ-ವಾತ್ಸಲ್ಯಕ್ಕೆ ನಾನು ಚಿರಋಣಿ ಎಂದು ಬಿ.ಎಸ್.ಯಡಿಯೂರಪ್ಪಅವರ ಪುತ್ರ ವಿಜಯೇಂದ್ರ ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

ಒಂದು ತಿಂಗಳಿನಿಂದ ವರುಣಾ ವಿಧಾನಸಭಾ ಕ್ಷೇತ್ರದ ಜನತೆ ತೋರುತ್ತಿರುವ ಅಪಾರ ಪ್ರೀತಿಗೆ ಮನಸೋತಿದ್ದೇನೆ. ಕ್ಷೇತ್ರದ ಜನರ ನೋವುಗಳಿಗೆ ಮುಂದೆಯೂ ನಾನು ಧ್ವನಿಯಾಗಿರುತ್ತೇನೆ. ನನ್ನ ಅಥವಾ ಪಕ್ಷದ ನಿರ್ಧಾರದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ವರುಣಾ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿದ್ದ ಎಲ್ಲ ಕಾರ್ಯಕರ್ತರು, ಸ್ಪರ್ಧಾಕಾಂಕ್ಷಿಗಳು ಹಾಗೂ ಮುಖಂಡರಿಗೆ ಕೃತಜ್ಞತೆಗಳು. ಪಕ್ಷದ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನ ಅಂತಿಮವಾಗಿದ್ದು, ಅದಕ್ಕೆ ಬದ್ಧವಾಗಿದ್ದುಕೊಂಡು ವರುಣಾದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಅಭಿವೃದ್ಧಿಗಾಗಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಿದೆ. ಇದು ನಮ್ಮೆಲ್ಲರ ಗುರಿಯಾಗಿದ್ದು, ಆ ಗುರಿ ಸಾಧನೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ. ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ. ಕಾರ್ಯಕರ್ತರು ಶಾಂತ ರೀತಿಯಲ್ಲಿ ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News