ರಾಹುಲ್ ಗಾಂಧಿಗೆ ಬಿಜೆಪಿಯಿಂದ 5 ಪ್ರಶ್ನೆಗಳು
ಬೆಂಗಳೂರು, ಎ.25: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತ ಅವಧಿಯಲ್ಲಿ 3857 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು 800 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಜನರಿಗೆ ಉತ್ತರ ನೀಡಬೇಕು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಒತ್ತಾಯಿಸಿದ್ದಾರೆ.
ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಮಹಿಳಾ ಸುರಕ್ಷತೆ, ಸಬಲೀಕರಣ ಸಂಬಂಧ ಇಂಡಿಯಾ ಗೇಟ್ಬಳಿ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ಮಾಡಿದ್ದರು. ಈಗ, ರಾಜ್ಯದಲ್ಲಿ ಒಟ್ಟು 7523 ಮಹಿಳೆಯರ ಹತ್ಯೆಯಾಗಿದೆ. ಇಲ್ಲೂ ಸಹ ಪ್ರತಿಭಟನೆ ನಡೆಸುವರೇ ಎಂಬುದನ್ನು ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು ಎಂದ ಅವರು, ರಾಹುಲ್ ಅವರು ಗುರುವಾರದಿಂದ ರಾಜ್ಯ ಚುನಾವಣಾ ಪ್ರಚಾರ ನಡೆಸುತ್ತಾರೆ. ಅದಕ್ಕೂ ಮೊದಲು ಐದು ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿಗೆ ಈ ಪ್ರಶ್ನೆಗಳು
-ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಮುನ್ನ ರಾಜ್ಯದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳ ಬಗ್ಗೆ ಉತ್ತರ ನೀಡಬೇಕು.
-ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 3718 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ. ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಈ ಪ್ರಮಾಣದಲ್ಲಿ ಆತ್ಮಹತ್ಯೆಗಳು ಆಗಿಲ್ಲ.
-ಯುಪಿಎ ಸರಕಾರದ 5 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಬರಗಾಲ ಮತ್ತು ಪ್ರವಾಹ ಸಂಭವಿಸಿದಾಗ 4822 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ, ಮೋದಿ ಸರಕಾರ 2014 ರಿಂದ 2017ರ ಅವಧಿಯಲ್ಲಿ ಬರಗಾಲ ಪರಿಹಾರವಾಗಿ 5693 ಕೋಟಿ ರೂ. ಹಣ ನೀಡಿದೆ. ಮೋದಿ ಕೊಟ್ಟ ಹಣವನ್ನು ಸಿದ್ದರಾಮಯ್ಯ ಯಾವ ರೀತಿ ಖರ್ಚು ಮಾಡಿದ್ದಾರೆ ಎಂಬುದಕ್ಕೆ ಲೆಕ್ಕ ಕೊಡಬೇಕು.
-ರಾಜ್ಯದಲ್ಲಿ 2015 ರಲ್ಲಿ 254 ಕೋಮುಗಲಭೆಗಳು ನಡೆದಿವೆ. ಸಿದ್ದರಾಮಯ್ಯ ಅವರ ತುಷ್ಟೀಕರಣದಿಂದಾಗಿ ಬಹುಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಪಿಎಫ್ಐ ಮತ್ತು ಎಸ್ಡಿಪಿಐ ಕಾರಣ. ಈ ಎರಡೂ ಸಂಘಟನೆಗಳಿಗೆ ಸೇರಿದ 175 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ವಾಪಸ್ ಪಡೆಯಲಾಗಿದೆ. ಇದಕ್ಕೆ ಏನು ಉತ್ತರಿಸುತ್ತಾರೆ.
-ಬೆಂಗಳೂರಿನಲ್ಲಿ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಭಾರಿ ಹಗರಣ ನಡೆದಿವೆ. ಕೇವಲ 10.7 ಕಿ.ಮೀ ವರ್ತುಲ ರಸ್ತೆಗೆ 468 ಕೋಟಿ ನಿಗದಿ ಮಾಡಲಾಗಿದೆ. ಅಚ್ಚರಿ ಎಂದರೆ ಇಸ್ರೋ ಮಂಗಳ ಗ್ರಹಕ್ಕೆ 450 ಕೋಟಿ ಖರ್ಚು ಮಾಡಿ ನೌಕೆಯನ್ನು ಕಳುಹಿಸಿದೆ. ಬೆಂಗಳೂರಿನಲ್ಲಿ 10 ಕಿ.ಮೀ ರಸ್ತೆ ನಿರ್ಮಾಣ ಬಾಹ್ಯಾಕಾಶ ಯಾನಕ್ಕಿಂತ ದುಬಾರಿಯಾಗಿದೆ. ಈ ಪ್ರಶ್ನೆಗಳ ಮೂಲಕ ರಾಹುಲ್ ಅವರನ್ನು ರಾಜ್ಯಕ್ಕೆ ಸ್ವಾಗತಿಸುತ್ತಿದ್ದೇವೆ. ಅವರು ಉತ್ತರಿಸಲು ಸಿದ್ಧವಾಗಿ ಬರಲಿ ಎಂದು ಅನಂತ್ ಕುಮಾರ್ ಸವಾಲೆಸೆದರು.