ನಾನು ಬದುಕಬೇಕೆಂದರೆ ಜೆಡಿಎಸ್ ಗೆಲ್ಲಿಸಿ: ಕುಮಾರಸ್ವಾಮಿ

Update: 2018-05-10 13:07 GMT

ಬೆಂಗಳೂರು, ಮೇ 10: ನನ್ನ ಜೀವನ ನಿಮ್ಮ ಕೈಯಲ್ಲಿದೆ. ನಾನು ಹೆಚ್ಚು ದಿನ ಬದುಕಬೇಕೆಂದರೆ ನೀವು ನನಗೆ ಓಟ್ ಹಾಕಬೇಕು, ಇಲ್ಲವಾದಲ್ಲಿ ಹೆಚ್ಚುದಿನ ಬದುಕುವುದಿಲ್ಲ, ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತದಾರರಲ್ಲಿ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.

ಗುರುವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಲಗ್ಗೆರೆ ವೃತ್ತದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ನನಗೆ ಆರೋಗ್ಯ ಸರಿಯಿಲ್ಲದಿದ್ದರೂ ನನ್ನ ಜನರಿಗಾಗಿ ಏಕಾಂಗಿಯಾಗಿ ರಾಜ್ಯ ಸುತ್ತುತ್ತಿದ್ದೇನೆ. ಒಂದು ಬಾರಿ ಜೆಡಿಎಸ್ ಪಕ್ಷಕ್ಕೆ ಸರಕಾರ ರಚಿಸಲು ಅವಕಾಶ ನೀಡಿ, ಜನ ಮೆಚ್ಚುವಂತೆ ಆಡಳಿತ ನಡೆಸಿ ತೋರಿಸುತ್ತೇನೆ ಎಂದು ಹೇಳಿದರು.

ಚುನಾವಣೆಗೆ ಹಣ ಬೇಕೆಂದು ಅಭ್ಯರ್ಥಿಗಳು ದುಂಬಾಲು ಬೀಳುತ್ತಿದ್ದಾರೆ. ಹಣಕ್ಕಾಗಿ ನಾನೆಲ್ಲಿ ಹೋಗಿ ಸಾಯಲಿ, ಎಚ್‌ಡಿಕೆ ಬದುಕಬೇಕೆಂದರೆ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿ ಎಂದ ಅವರು, ಕ್ಷೇತ್ರದ ಮತದಾರರಲ್ಲಿ ಮತದಾನ ಗುರುತಿನ ಚೀಟಿ ಇಲ್ಲದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಚುನಾವಣಾ ಆಯೋಗ ನಿಗದಿಪಡಿಸಿರುವ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಲು ಅವಕಾಶವಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News