×
Ad

ಕರೆಂಟ್ ಬಿಲ್: ಶಾಕ್‌ಗೆ ಸಿದ್ಧರಾಗಿ...

Update: 2018-05-14 09:17 IST

ಬೆಂಗಳೂರು, ಮೇ 14: ವಿಧಾನಸಭಾ ಚುನಾವಣೆ ಬೆನ್ನಲ್ಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ) ಪ್ರತಿ ಯೂನಿಟ್ ವಿದ್ಯುತ್ ದರವನ್ನು 20 ಪೈಸೆಯಿಂದ ಗರಿಷ್ಠ 60 ಪೈಸೆಯಷ್ಟು ದಿಢೀರ್ ಹೆಚ್ಚಿಸಿ ಆದೇಶಿಸಿದೆ.

ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಇಆರ್‌ಸಿ ಅಧ್ಯಕ್ಷ, ಎಂ.ಕೆ. ಶಂಕರಲಿಂಗೇಗೌಡ, ಬೆಂಗಳೂರು ನಗರ ಪ್ರದೇಶದ ಗೃಹ ಬಳಕೆ ವಿದ್ಯುತ್‌ನ ಪ್ರತಿ ಯೂನಿಟ್‌ಗೆ 28 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಪ್ರತಿ ಯೂನಿಟ್‌ಗೆ 25 ಪೈಸೆಯಷ್ಟು ದರ ಹೆಚ್ಚಿಸಲಾಗಿದೆ. ಒಟ್ಟಾರೆ ಶೇ. 5.93ರಷ್ಟು ಹೆಚ್ಚಿಸಲಾಗಿದ್ದು, ನೂತನ ದರ ಪರಿಷ್ಕರಣೆ ಎ.1ರಿಂದಲ್ಲೇ ಪೂರ್ವಾನ್ವಯವಾಗಲಿದೆ ಎಂದು ಮಾಹಿತಿ ನೀಡಿದರು.

ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್‌ಗೆ 20ರಿಂದ 30 ಪೈಸೆ ಅಧಿಕ ಮಾಡಲಿದ್ದು, ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಬಳಸುವ ವಿದ್ಯುತ್‌ನ ಪ್ರತಿಯೂನಿಟ್ ಮೇಲೆ 2 ರೂ ರಿಯಾಯಿತಿ ನೀಡಲಾಗಿದೆ. ವಾಣಿಜ್ಯ ಬಳಕೆಗೆ 25 ರಿಂದ 30 ಪೈಸೆ ಹೆಚ್ಚಳ ಮಾಡಲಾಗಿದೆ. ನೀರು ಸರಬರಾಜಿಗೆ ಬಳಸುವ ವಿದ್ಯುತ್‌ಗೆ 15 ಪೈಸೆಯಂತೆ ಪ್ರತಿ ಯೂನಿಟ್‌ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಬೆಸ್ಕಾಂ ನಿಂದ ಗ್ರಾಮೀಣ ಪ್ರದೇಶಗಳಲ್ಲಿ ಬಳಕೆ ಮಾಡುತ್ತಿರುವ ಪ್ರತಿ ಯೂನಿಟ್‌ಗೆ 25 ಪೈಸೆ, ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಜೆಸ್ಕಾಂ ವಿಭಾಗದಲ್ಲಿ 25 ಪೈಸೆಯಷ್ಟು ಏಕರೂಪ ದರ ಹೆಚ್ಚಳ ಮಾಡಲಾಗಿದೆ. ಮಾರ್ಚ್‌ನಲ್ಲಿ ಬೆಸ್ಕಾಂ 82 ಪೈಸೆ, ಮೆಸ್ಕಾಂ 1.23 ಪೈಸೆ, ಚೆಸ್ಕಾಂ 1.13ಪೈಸೆ, ಹೆಸ್ಕಾಂ 1.23, ಜೆಸ್ಕಾಂ 1.62ಪೈಸೆಯಷ್ಟು ವಿದ್ಯುತ್ ದರ ಹೆಚ್ಚಿಸಲು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು ಎಂದು ಹೇಳಿದರು.

ರೈಲ್ವೇಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ಗೆ 40ಪೈಸೆ ಕಡಿಮೆ ಮಾಡಿ, ಪ್ರತಿ ಯೂನಿಟ್‌ಗೆ 6 ರೂ. ದರ ನಿಗದಿ ಮಾಡಲಾಗಿದೆ. 4,500 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಬಳಕೆ ಮಾಡಲಾಗುತ್ತಿದ್ದು, ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.

ಅಕ್ಟೋಬರ್ ತಿಂಗಳ ಕೊನೆಯವರೆಗೆ ರೈತರಿಗೆ ಹಗಲು 3, ರಾತ್ರಿ 3 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದು. ಅಕ್ರಮವಾಗಿ ಪಂಪ್‌ಸೆಟ್ ಬಳಕೆ ಮಾಡುತ್ತಿರುವವರಿಗೆ ಸಬ್ಸಿಡಿ ನೀಡಬೇಕೋ, ಬೇಡವೋ ಎಂಬುದನ್ನು ಸರಕಾರ ನಿರ್ಧರಿಸಬೇಕಿದೆ ಎಂದ ಅವರು, 11 ಸಾವಿರ ಕೋಟಿ ರೂ. ಸಬ್ಸಿಡಿ ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ, ಸರಕಾರದಿಂದ 8 ಸಾವಿರ ಕೋಟಿ ರೂ ಬಿಡುಗಡೆಯಾಗಿದೆ ಎಂದು ಹೇಳಿದರು.

ಕಳೆದ ಸಾಲಿನ ಡಿಸೆಂಬರ್‌ನಲ್ಲೇ ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತಿ ಯೂನಿಟ್ ದರ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿದ್ದವು. ಅದರನ್ವಯ ದರ ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರ 2018ರ ಎಪ್ರಿಲ್ ತಿಂಗಳಿನಿಂದಲೇ ಪೂರ್ವಾನ್ವಯ ಆಗಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News