ರಾಜಧಾನಿಯಲ್ಲಿ ಕಾಂಗ್ರೆಸ್‌ಗೆ 13, ಬಿಜೆಪಿಗೆ 11, ಜೆಡಿಎಸ್‌ಗೆ 2 ಸ್ಥಾನ

Update: 2018-05-15 16:43 GMT

ಬೆಂಗಳೂರು, ಮೇ 15: ರಾಜಧಾನಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 26 ವಿಧಾನಸಭಾ ಕ್ಷೇತ್ರಗಳ ಪೈಕಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಪಡೆದಿದ್ದು, ಬಿಜೆಪಿ 11 ಸ್ಥಾನಗಳನ್ನು ಪಡೆದಿದ್ದು, ಎರಡು ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ.

ಜಯನಗರ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ 26 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 11 ಕ್ಷೇತ್ರಗಳಲ್ಲಿ ಸ್ಥಾನ ಪಡೆದಿದೆ. ಅಲ್ಲದೆ, ಬಿಜೆಪಿಯ ಭದ್ರಕೋಟೆ ಹೆಬ್ಬಾಳದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ರಾಜಾಜಿನಗರದಲ್ಲಿ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಗೆಲುವು ಸಾಧಿಸಿದ್ದು, ಮಾಜಿ ಮೇಯರ್ ಜಿ.ಪದ್ಮಾವತಿ 9,453 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಜೆಡಿಎಸ್‌ನಿಂದ ಹೊರಬಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಚಾಮರಾಜಪೇಟೆಯಿಂದ ಸ್ಪರ್ಧಿಸಿದ್ದ ಝಮೀರ್ ಅಹಮದ್ ಖಾನ್ ಬಿಜೆಪಿಯ ಎಂ.ಲಕ್ಷ್ಮೀನಾರಾಯಣ ವಿರುದ್ಧ 33,137 ಮತಗಳ ಅಂತರದಿಂದ ಗೆದ್ದಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಬಿ.ಕೆ.ಅಲ್ತಾಫ್ ಖಾನ್ 19,393 ಮತಗಳಿಸಿದ್ದಾರೆ.

ಶಾಂತಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ವಾಸುದೇವ ಮೂರ್ತಿ ವಿರುದ್ಧ ಹಾಲಿ ಶಾಸಕ ಎನ್.ಎ.ಹಾರೀಸ್ 5,500 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಗಾಂಧಿನಗರ ಕ್ಷೇತ್ರದಲ್ಲಿ ದಿನೇಶ್ ಗುಂಡೂರಾವ್ ಬಿಜೆಪಿಯ ಅಭ್ಯಥಿ ಎ.ಆರ್.ಸಪ್ತಗಿರಿಗೌಡರನ್ನು 10,070 ಮತಗಳಿಂದ ಮಣಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ವಿ.ನಾರಾಯಣಸ್ವಾಮಿ 36,635 ಮತ ಪಡೆದಿದ್ದಾರೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಉದಯ್ ಗರುಡಾಚಾರ್ ಕಾಂಗ್ರೆಸ್‌ನ ಆರ್.ವಿ.ದೇವರಾಜ್‌ರನ್ನು 7,934 ಮತಗಳಿಂದ ಸೋಲಿಸಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿ ಮುಜಾಹಿದ್ ಪಾಶಾ 11,700 ಮತಗಳಿಸಿದ್ದಾರೆ.

ಸಿ.ವಿ.ರಾಮನ್ ನಗರದಲ್ಲಿ ಬಿಜೆಪಿಯ ಎಸ್.ರಘು ಅವರು 58,887 ಮತಗಳನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮೇಯರ್ ಆರ್.ಸಂಪತ್‌ರಾಜ್ ಅವರನ್ನು 12,227 ಮತಗಳಿಂದ ಪರಾಭವಗೊಳಿಸಿದ್ದಾರೆ.

ಮಹಾಲಕ್ಷ್ಮೀ ಬಡಾವಣೆಯಲ್ಲಿ ಜೆಡಿಎಸ್ ಹಾಲಿ ಶಾಸಕ ಕೆ.ಗೋಪಾಲಯ್ಯ ಅವರು ಒಟ್ಟು 88,218 ಮತಗಳನ್ನು ಪಡೆದಿದ್ದು, ಸಮೀಪದ ಬಿಜೆಪಿ ಅಭ್ಯರ್ಥಿ ಎನ್.ಎಲ್.ನರೇಂದ್ರಬಾಬುರನ್ನು 41,100 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಇನ್ನು ಮಲ್ಲೇಶ್ವರದಲ್ಲಿ ಬಿಜೆಪಿಯ ಅಶ್ವತ್ಥನಾರಾಯಣ ಅವರು 83,130 ಮತಗಳನ್ನು ಪಡೆದು, ಕಾಂಗ್ರೆಸ್ ಕೆಂಗಲ್ ಶ್ರೀಪಾದರೇಣು ಅವರನ್ನು 54 ಸಾವಿರ ಮತಗಳ ಅಂತದಿಂದ ಪರಾಭವಗೊಳಿಸಿದ್ದಾರೆ.

ಗೋವಿಂದರಾಜನಗರದಲ್ಲಿ ಕಾಂಗ್ರೆಸ್‌ನ ಪ್ರಿಯಾಕೃಷ್ಣರನ್ನು ಬಿಜೆಪಿಯ ವಿ.ಸೋಮಣ್ಣ ಅವರು 11,760 ಮತಗಳ ಅಂತರದಿಂದ ಸೋಲಿಸಿದ್ದಾರೆ.
ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂ.ಕೃಷ್ಣಪ್ಪ ಅವರು ಬಿಜೆಪಿಯ ಎಚ್.ರವೀಂದ್ರ ಅವರ ವಿರುದ್ಧ 2,775 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಅರವಿಂದ ಲಿಂಬಾವಳಿ ಅವರು ಕಾಂಗ್ರೆಸ್‌ನ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ ವಿರುದ್ಧ 17,784 ಮತಗಳಿಂದ ಪರಾಭವಗೊಳಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಆನೇಕಲ್‌ನಲ್ಲಿ ಕಾಂಗ್ರೆಸ್ ಬಿ.ಶಿವಣ್ಣ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದು, ಸಮೀಪದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಅವರು 8,027 ಮತಗಳ ಅಂತರದಿಂದ ಸೋತಿದ್ದಾರೆ.

ಶಿವಾಜಿನಗರದಲ್ಲಿ ಕಾಂಗ್ರೆಸ್‌ನ ರೋಷನ್ ಬೇಗ್ 59,742 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ 15,040 ಮತಗಳ ಅಂತರದಿಂದ ಗೆದ್ದಿದ್ದಾರೆ. ಅದೇ ರೀತಿ, ಹೆಬ್ಬಾಳದಲ್ಲಿ ಭೈರತಿ ಸುರೇಶ್ ಅವರು 74,453 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ವೈ.ಎ.ನಾರಾಯಣಸ್ವಾಮಿ ಅವರನ್ನು 21,140 ಮತಗಳಿಂದ ಮಣಿಸಿದ್ದಾರೆ.

ಯಲಹಂಕ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಆರ್.ವಿಶ್ವನಾಥ್ ಅವರು ಜೆಡಿಎಸ್‌ನ ಎ.ಎಂ.ಹನುಮಂತೇಗೌಡ ಅವರನ್ನು 42,503 ಮತಗಳಿಂದ ಜಯಭೇರಿ ಬಾರಿಸಿದ್ದು, ಯಶವಂತಪುರದಲ್ಲಿ ಕಾಂಗ್ರೆಸ್‌ನ ಎಸ್.ಟಿ.ಸೋಮಶೇಖರ್ ಅವರು ಜೆಡಿಎಸ್‌ನ ಟಿ.ಎನ್.ಜವರೇಗೌಡ ವಿರುದ್ಧ 10,711 ಮತಗಳಿಂದ ಜಯಗಳಿಸಿದ್ದಾರೆ.

ಇನ್ನು ದಾಸರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ನ ಆರ್.ಮಂಜುನಾಥ್ ಅವರು ಬಿಜೆಪಿಯ ಶಾಸಕ ಎಸ್.ಮುನಿರಾಜು ಅವರನ್ನು 10,675 ಮತಗಳಿಂದ ಸೋಲಿಸಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಎಂ.ಕೃಷ್ಣಪ್ಪ ಕಾಂಗ್ರೆಸ್‌ನ ಆರ್.ಕೆ.ರಮೇಶ್ ವಿರುದ್ಧ 28,204 ಮತಗಳಿಂದ ಜಯಗಳಿಸಿದ್ದಾರೆ.

ಪುಲಿಕೇಶಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಖಂಡ ಶ್ರೀನಿವಾಸ್ ಬರೋಬ್ಬರಿ 81,626 ಮತಗಳ ಅಂತರದಿಂದ ಜೆಡಿಎಸ್‌ನ ಬಿ.ಪ್ರಸನ್ನಕುಮಾರ್‌ನ್ನು ಮಣಿಸಿದ್ದು, ಸರ್ವಜ್ಞನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ಜೆ.ಜಾರ್ಜ್ 53,304 ಮತಗಳ ಅಂತರದಿಂದ ಬಿಜೆಪಿಯ ಎಂ.ಎನ್.ರೆಡ್ಡಿ ಅವರನ್ನು ಸೋಲಿಸಿದ್ದಾರೆ.
ಜತೆಗೆ ಬಿಟಿಎಂ ಬಡಾವಣೆಯಲ್ಲಿ ರಾಮಲಿಂಗಾರೆಡ್ಡಿಯವರು ತಮ್ಮ ಗೆಲುವಿನ ಓಟವನ್ನು ಮುಂದುವರಿಸಿದ್ದು, ಬಿಜೆಪಿಯ ಲಲ್ಲೇಶ್ ವಿರುದ್ಧ 20,478 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬಸವನಗುಡಿಯಲ್ಲಿ ಬಿಜೆಪಿಯ ರವಿಸುಬ್ರಮಣ್ಯ ಅವರು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದು, ಸಮೀಪದ ಜೆಡಿಎಸ್ ನ ಬಾಗೇಗೌಡ ವಿರುದ್ಧ 38,009 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಇನ್ನು ಪದ್ಮನಾಭನಗರದಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್ ಅವರು ಜೆಡಿಎಸ್‌ನ ವಿ.ಕೆ.ಗೋಪಾಲ್‌ರನ್ನು 32,166 ಮತಗಳಿಂದ ಸೋಲಿಸಿದ್ದಾರೆ. ಹೊರವಲಯದ ಬೊಮ್ಮನಹಳ್ಳಿಯಲ್ಲಿ ಬಿಜೆಪಿಯ ಸತೀಶ್‌ರೆಡ್ಡಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ಸುಷ್ಮಾ ರಾಜಗೋಪಾಲರೆಡ್ಡಿ ಅವರನ್ನು 47,162 ಮತಗಳಿಂದ ಪರಾಭವಗೊಳಿಸಿದ್ದಾರೆ. ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ.ಎ.ಬಸವರಾಜು ಗೆಲವು ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News