ಈಗ ಕುಮಾರಸ್ವಾಮಿ ಪ್ರಮಾಣವಚನ ತಡೆಯಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಯಾರು ಗೊತ್ತೇ?
ಹೊಸದಿಲ್ಲಿ, ಮೇ 22: ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ವಿಶ್ವಾಸಮತಯಾಚನೆ ವೇಳೆ ಬಿಜೆಪಿಯು ಕಾಂಗ್ರೆಸ್-ಜೆಡಿಎಸ್ ಸರಕಾರ ರಚನೆಗೆ ಅಡ್ಡಗಾಲಿಡಬಹುದು ಎನ್ನುವ ಸಂಶಯಗಳ ನಡುವೆಯೇ ಎಚ್ ಡಿಕೆ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ಕೋರಿ ಸಂಘಟನೆಯೊಂದು ಸುಪ್ರೀಂ ಮೆಟ್ಟಿಲೇರಿದೆ.
ಕರ್ನಾಟಕದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿಯವರ ನೇಮಕಾತಿ ಪ್ರಶ್ನಿಸಿ ಹಾಗೂ ಬುಧವಾರ ನಡೆಯಲಿರುವ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಡೆ ಕೋರಿ ಅಖಿಲ ಭಾರತ ಹಿಂದೂ ಮಹಾಸಭಾ ಸುಪ್ರೀಂ ಕೋರ್ಟಿನ ಕದ ತಟ್ಟಿದೆ.
ಸೋಮವಾರ ತನ್ನ ವಕೀಲ ಬರುಣ್ ಕುಮಾರ್ ಸಿನ್ಹಾ ಮುಖಾಂತರ ಅಪೀಲು ಸಲ್ಲಿಸಿರುವ ಸಭಾ, ಕುಮಾರಸ್ವಾಮಿಗೆ ಸರಕಾರ ರಚಿಸಲು ರಾಜ್ಯಪಾಲರು ನೀಡಿರುವ ಆಹ್ವಾನವನ್ನು ರದ್ದುಗೊಳಿಸಬೇಕೆಂದು ಕೋರಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿಯನ್ನು `ಅಸಂವಿಧಾನಿಕ' ಎಂದೂ ಸಭಾ ಬಣ್ಣಿಸಿದೆ. ಆದರೆ ಮಂಗಳವಾರ ನ್ಯಾಯಾಲಯ ಈ ಅಪೀಲಿನ ಮೇಲೆ ಶೀಘ್ರ ವಿಚಾರಣೆ ನಡೆಸಲು ನಿರಾಕರಿಸಿದೆ.