ಅನುಮತಿ ಇಲ್ಲದೆ ಕಡತ ವರ್ಗಾವಣೆ ಆರೋಪ: ವಿಧಾನಸಭೆ ಕಾರ್ಯದರ್ಶಿ ವಿರುದ್ಧ ದೂರು
ಬೆಂಗಳೂರು, ಮೇ 27: ತನ್ನ ಅನುಮತಿಯಿಲ್ಲದೆ ನನ್ನ ಕಚೇರಿಯ ಬೀಗ ಒಡೆದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರು ಕಡತಗಳು ಹಾಗೂ ಮಹತ್ವದ ದಾಖಲೆಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆಂದು ಸಚಿವಾಲಯ ಜಂಟಿ ಕಾರ್ಯದರ್ಶಿ ಶಶಿಕಲಾ ಭಟ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೇ 26ರಂದು ವಿಧಾನಸೌಧದಲ್ಲಿನ ತನ್ನ ಕೊಠಡಿ ಸಂಖ್ಯೆ 124ರ ಬೀಗ ಒಡೆದು ಕಡತಗಳನ್ನು ಬೇರೆಡೆ ಹಾಕಲಾಗಿದೆ. ತಾನು ರಜೆಯಲ್ಲಿದ್ದಾಗ ನನ್ನ ಗಮನಕ್ಕೂ ತರದೆ ನನ್ನ ಚೇಂಬರ್ನಲ್ಲಿದ್ದ ಕಡತಗಳು, ಚೆಕ್ಬುಕ್ ಹಾಗೂ ಕೋರ್ಟ್ಗೆ ಸಂಬಂಧಿಸಿದ ದಾಖಲೆಗಳನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂದು ಆಪಾದಿಸಲಾಗಿದೆ.
ಭಡ್ತಿ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ವಿಸ್ತರಣೆಗೆ ಒತ್ತಾಯ ಮಾಡಿದ್ದೇವು. ವಿಧಾನಸಭೆಗೂ ತೀರ್ಪು ವಿಸ್ತರಿಸಲು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೇವೆ. ತೀರ್ಪು ಜಾರಿಯಾದರೆ ಮೂರ್ತಿ ಹಿಂಭಡ್ತಿ ಪಡೆಯಲಿದ್ದಾರೆ. ಹೀಗಾಗಿ ನನ್ನ ವಿರುದ್ಧ ಮೂರ್ತಿ ದ್ವೇಷ ಸಾಧಿಸುತ್ತಿದ್ದಾರೆಂದು ಶಶಿಕಲಾ ಭಟ್ ಆರೋಪಿಸಿದ್ದಾರೆ.