ಚಿರತೆಯ ಕಾಟಕ್ಕೆ ಮುಕ್ತಿ ಎಂದು?
Update: 2018-05-28 18:44 GMT
ಮಾನ್ಯರೇ,
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೂಲಂಬಿ ಹಳ್ಳದ ದಂಡೆಯ ಮೇಲೆ ಚಿರತೆಗಳು ಕಾಣಿಸಿಕೊಂಡಿರುವುದರಿಂದ ಸುತ್ತಮುತ್ತಲ ಹಳ್ಳಿಯ ಜನರಿಗೆ ತಮ್ಮ ಹೊಲಗಳಿಗೆ ಹೋಗಲು ಭಯವಾಗುತ್ತಿದೆ. ವರುಣನ ಕೃಪೆಯಿಂದ ಮುಂದೆ ಬಿತ್ತನೆ ಕೆಲಸ ಮಾಡುವುದಕ್ಕೆ ಹೊಲ ಗದ್ದೆ ಹದ ಮಾಡುವುದು ರೈತರಿಗೆ ಅವಶ್ಯಕವಾಗಿದೆ. ಆದರೆ ಚಿರತೆಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದರಿಂದ ರೈತರು ಹೊಲಗಳ ಉಳುಮೆಗೂ ಸಹ ಮುಂದಾಗದೆ ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೂ ಏನೂ ಪ್ರಯೋಜನವಿಲ್ಲ. ಸುಮಾರು ಮೂರು ವರ್ಷಗಳಿಂದಲೂ ಚಿರತೆಗಳ ಕಾಟ ವಿಪರೀತವಾಗುತ್ತಿದೆ.
ಆದ್ದರಿಂದ ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಚಿರತೆಗಳನ್ನು ಸೆರೆ ಹಿಡಿದು ದೊಡ್ಡ ಕಾಡುಗಳಿಗೆ ಸ್ಥಳಾಂತರಿಸಿ ಆತಂಕಗೊಂಡ ಜನರಿಗೆ ಭಯದಿಂದ ಮುಕ್ತಿ ನೀಡಬೇಕಾಗಿದೆ.