ಆರೆಸೆಸ್ಸ್ ಕಾರ್ಯಕ್ರಮದಿಂದ ದೂರವಿರಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ಜಾಫರ್ ಶರೀಫ್ ಪತ್ರ

Update: 2018-05-29 15:38 GMT

ಬೆಂಗಳೂರು, ಮೇ 29: ನಾಗ್ಪುರದಲ್ಲಿರುವ ಆರೆಸೆಸ್ಸ್ ಕೇಂದ್ರ ಕಚೇರಿಯಲ್ಲಿ ಜೂ.7ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಡೆಗೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಣವ್ ಮುಖರ್ಜಿಗೆ ಮಂಗಳವಾರ ಪತ್ರ ಬರೆದಿರುವ ಜಾಫರ್ ಶರೀಫ್ ಹಾಗೂ ಮಾಜಿ ಸಂಸದ ಹನುಮಂತಪ್ಪ, ಆರೆಸೆಸ್ಸ್ ಕೇಂದ್ರ ಕಚೇರಿಗೆ ತಾವು ಭೇಟಿ ನೀಡುತ್ತಿರುವ ವಿಷಯ ತಿಳಿದು ನನಗೆ ಆಶ್ಚರ್ಯವಾಗಿದೆ. ಯಾವ ಕಾರಣಕ್ಕಾಗಿ ತಾವು ಅಲ್ಲಿ ಭೇಟಿ ನೀಡುತ್ತಿದ್ದೀರಾ ಎಂಬುದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ಸಿಗರಷ್ಟೇ ಅಲ್ಲ, ಜಾತ್ಯತೀತ ಮನೋಭಾವನೆಯ ಎಲ್ಲರೂ ಈ ಸುದ್ದಿಯನ್ನು ತಿಳಿದು ಚಕಿತರಾಗಿದ್ದಾರೆ. ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಸಂಘಪರಿವಾರದ ಕಚೇರಿಗೆ ತಮ್ಮ ಭೇಟಿ ಸರಿಯಾದುದ್ದಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರೆಸೆಸ್ಸ್ ಕೇಂದ್ರ ಕಚೇರಿಗೆ ಭೇಟಿ ನೀಡುವ ತಮ್ಮ ತೀರ್ಮಾನವನ್ನು ಪುನರ್ ಪರಿಶೀಲಿಸಿ ಅಥವಾ ಕಾರ್ಯಕ್ರಮದಿಂದ ದೂರವಿರಿ ಎಂದು ಅವರು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News