×
Ad

ರೋಷನ್‌ ಬೇಗ್‌ಗೆ ಡಿಸಿಎಂ ಹುದ್ದೆ ನೀಡಲು ಆಗ್ರಹ

Update: 2018-05-30 18:20 IST

ಬೆಂಗಳೂರು, ಮೇ 30: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಹಿರಿಯ ಶಾಸಕ ಆರ್.ರೋಷನ್‌ಬೇಗ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಅಖಿಲ ಕರ್ನಾಟಕ ಸೂಫಿ ಸಂತರ ಸಂಘ ಆಗ್ರಹಿಸಿದೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೂಫಿ ಸಂತರ ಸಂಘದ ಸಂಚಾಲಕ ಸೂಫಿ ವಲಿಬಾ, ರಾಜ್ಯದಲ್ಲಿ ಎರಡನೆ ಅತಿ ದೊಡ್ಡ ಸಮುದಾಯ ಆಗಿರುವ ಮುಸ್ಲಿಮರಿಗೆ ರಾಜಕೀಯ ಮತ್ತು ಇನ್ನಿತರ ಕ್ಷೇತ್ರದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಲೇ ಬಂದಿದೆ ಎಂದರು.

ಎಲ್ಲಿಯವರೆಗೆ ನಮ್ಮನ್ನು ಕೇವಲ ಓಟ್ ಬ್ಯಾಂಕ್ ಆಗಿ ಉಪಯೋಗಿಸುವುದನ್ನು ಸಹಿಸಲು ಸಾಧ್ಯ. ನಮ್ಮ ಸಮುದಾಯ ಎಷ್ಟೇ ಹಿಂದುಳಿದಿದ್ದರೂ ಈ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯ ಮೇಲೆ ಅತ್ಯಂತ ವಿಶ್ವಾಸ ಇಟ್ಟು, ಪ್ರತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದೆ ಎಂದು ಅವರು ಹೇಳಿದರು.

ಮತಗಳಿಗಾಗಿ ಮುಸ್ಲಿಮ್ ಸಮುದಾಯದ ಹಿಂದೆ ದುಂಬಾಲು ಬೀಳುವ ಜಾತ್ಯತೀತ ಪಕ್ಷಗಳು, ಅವರಿಗೆ ಕೊಡಬೇಕಾದ ಪ್ರಾಶಸ್ತ್ಯವನ್ನು ನೀಡದೆ ವಂಚಿಸುತ್ತಾ ಬಂದಿವೆ. ಸಾಚಾರ್ ಸಮಿತಿ ವರದಿ ಅನ್ವಯ ಮುಸ್ಲಿಮ್ ಸಮುದಾಯ ತೀರಾ ಹಿಂದುಳಿದಿದ್ದು, ಅದರ ಸಮಸ್ಯೆ, ಸವಾಲುಗಳನ್ನು ತಳಮಟ್ಟದಿಂದ ಗ್ರಹಿಸಿದ ಏಳು ಬಾರಿ ಸಮುದಾಯವನ್ನು ಪ್ರತಿನಿಧಿಸಿರುವ ಹಿರಿಯ ಶಾಸಕ ರೋಷನ್‌ ಬೇಗ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಸೂಫಿ ವಲಿಬಾ ಒತ್ತಾಯಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮುಸ್ಲಿಮ್ ಸಮುದಾಯದ ನ್ಯಾಯಯುತ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ, ನಾವು ತೀವ್ರ ಹೋರಾಟ ಮಾಡಲು ಸಿದ್ಧರಾಗಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೈಯ್ಯದ್ ತಾಜುದ್ದೀನ್ ಅಹ್ಮದ್ ನೂರೆ ದರಿಯಾ, ಮುಖಂಡರಾದ ಅತೀಖ್ ಅಹ್ಮದ್, ಎನ್.ಎ.ಹಯಾತ್ ಶರೀಫ್, ಬಾನ್‌ಕೆ ನವಾಬ್ ಇಬ್ರತ್ ಅಲಿಶಾ, ಸೂಫಿ ಅಮೀನ್ ಅಲಿ ಶಾ, ಸೈಯ್ಯದ್ ಅಝ್ಮತ್ ಉಲ್ಲಾ ಶಾ, ಸೈಯ್ಯದ್ ಶರ್ಫುದ್ದೀನ್ ಶಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News