ಯುವ ಸಮುದಾಯ ಪೌರಕಾರ್ಮಿಕ ವೃತ್ತಿಯಿಂದ ಹೊರಬರಲಿ: ಬೇಜ್ವಾಡ್ ವಿಲ್ಸನ್

Update: 2018-06-08 13:17 GMT

ಬೆಂಗಳೂರು, ಜೂ. 8: ತಲೆ ತಲಾಂತರಗಳಿಂದ ಪೌರಕಾರ್ಮಿಕ ವೃತ್ತಿ ಮಾಡುವ ಸಮುದಾಯದ ಯುವ ಪೀಳಿಗೆ ಪೌರಕಾರ್ಮಿಕ ವೃತ್ತಿಯನ್ನು ಮುಂದುವರೆಸದೆ, ಇತರೆ ಉದ್ಯೋಗಗಳ ಕಡೆಗೆ ಹೋಗಬೇಕು ಎಂದು ಸಫಾಯಿ ಕರ್ಮಚಾರಿ ಅಂದೋಲನದ ರಾಷ್ಟ್ರೀಯ ಸಂಚಾಲಕ ಬೇಜ್ವಾಡ್ ವಿಲ್ಸನ್ ಸಲಹೆ ನೀಡಿದ್ದಾರೆ.

ಶುಕ್ರವಾರ ಎಚ್‌ಸಿಜಿ ಫೌಂಡೇಷನ್ ವತಿಯಿಂದ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರೊ.ಬಿ.ಸದಾಶಿವಯ್ಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶತಮಾನಗಳಿಂದಲೂ ಕೇವಲ ಒಂದೇ ಸಮುದಾಯ ಪೌರ ಕಾರ್ಮಿಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿದೆ. ಪೌರಕಾರ್ಮಿಕರು ಮತ್ತೊಬ್ಬರ ಮಲವನ್ನು ತಲೆಯ ಮೇಲಿಟ್ಟುಕೊಂಡು ಸಾಗಿಸುವಂತಹ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ಹೀಗಾಗಿ ಇಂತಹ ವೃತ್ತಿಯನ್ನು ತ್ಯಜಿಸುವುದೆ ಉತ್ತಮವೆಂದು ಅಭಿಪ್ರಾಯಿಸಿದರು.

ನನ್ನ ಕುಟುಂಬ ತಲೆತಲಾಂತರಗಳಿಂದ ಪೌರಕಾರ್ಮಿಕ ವೃತ್ತಿಯನ್ನೆ ಮಾಡಿಕೊಂಡು ಬಂದಿದೆ. ಹೀಗಾಗಿ ನನ್ನ ತಾಯಿ ಯಾವಾಗಲು ಹೇಳುತ್ತಿದ್ದರು, ಪೌರ ಕಾರ್ಮಿಕ ವೃತ್ತಿಯನ್ನು ಬಿಟ್ಟು ಬೇರೆ ಯಾವುದಾದರು ಕೆಲಸ ಮಾಡುವೆಯೆಂದು. ಈ ವೃತ್ತಿಯಲ್ಲಿ ತೊಡಗಿರುವ ಪ್ರತಿಯೊಬ್ಬರ ಅಭಿಪ್ರಾಯವು ಇದೇ ಆಗಿರುತ್ತದೆ. ಆದರೂ ನಮ್ಮ ಸಾಮಾಜಿಕ ವ್ಯವಸ್ಥೆ ಪೌರ ಕಾರ್ಮಿಕ ಸಮುದಾಯ ಈ ವೃತ್ತಿಯಿಂದ ಹೊರ ಬರಲಾರದಷ್ಟು ಸಮಸ್ಯೆಗಳನ್ನು ನಿರ್ಮಿಸಿದೆ ಎಂದು ಅವರು ವಿಷಾದಿಸಿದರು.

ದೇಶದಲ್ಲಿ ಸಾವಿರಾರು ಕಿಮೀ ದೂರ ತಲುಪುವಂತಹ ಅತ್ಯುನ್ನತ ದರ್ಜೆಯ ಕ್ಷಿಪಣಿ ತಂತ್ರಜ್ಞಾನವಿದ್ದರೂ ಮಲಹೊರುವ ಪದ್ಧತಿ ನಿರ್ಮೂಲನೆ ಮಾಡುವಂತಹ ತಂತ್ರಜ್ಞಾನ ವಿಲ್ಲ. ಕನಿಷ್ಟ ಮೂಲಭೂತ ಅಗತ್ಯಗಳಿಗೆ ಪೂರಕವಾಗುವಂತಹ ಸರಳ ತಂತ್ರಜ್ಞಾನವನ್ನು ದೇಶಿಯ ವಿಜ್ಞಾನಿಗಳು ಸಂಶೋಧನೆ ಮಾಡಿ ಬಳಕೆಗೆ ತರದಿರುವುದು ದುರಂತವೆಂದು ಅವರು ಹೇಳಿದರು.

ಯಾವುದೇ ಸುರಕ್ಷತಾ ಸಲಕರಣೆಗಳಿಲ್ಲದೆ ಶೌಚ ಗುಂಡಿ ಸ್ವಚ್ಚತೆಯ ವೇಳೆಗೆ ವರ್ಷಕ್ಕೆ ನೂರಾರು ಸಫಾಯಿ ಕರ್ಮಚಾರಿಗಳು ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ಪ್ರಜ್ಞಾವಂತ ಸಮಾಜ ಮೌನವಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಲಿ, ಅಧಿಕಾರಿಗಳಾಗಲಿ, ರಾಜಕೀಯ ಮುಖಂಡರು ಬಾಯಿ ಬಿಡದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ದೇಶದ ಗೋದಾಮುಗಳಲ್ಲಿ ಆಹಾರ ಧಾನ್ಯಗಳು ತುಂಬಿದ್ದರೂ ಬಡವರ ಹೊಟ್ಟೆಗೆ ಸೇರುತ್ತಿಲ್ಲ. ಮಕ್ಕಳು ಅಪೌಷ್ಟಿಕತೆಯಿಂದ ನರಳುವುದು ತಪ್ಪುತ್ತಿಲ್ಲ. ಯೋಜನಾ ಆಯೋಗವು ಬಡತನ ಬಗ್ಗೆ ಮಾತನಾಡದೆ ಕೆಲ ಸಮುದಾಯಕ್ಕೆ ಸಂಬಂಧಿಸಿದ ಅಭಿವೃದ್ಧಿಯ ಯೋಜನೆಗಳ ಕುರಿತು ವರದಿಗಳನ್ನು ಸಿದ್ಧಪಡಿಸುವುದರಲ್ಲಿ ತಲ್ಲೀನವಾಗಿದೆ ಎಂದು ಅವರು ದೂರಿದರು.

ಯುವಜನತೆ ಸಂವಿಧಾನ ನೀಡಿದ ಪರಮಾಧಿಕಾರವನ್ನು ಬಳಸಿಕೊಂಡು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳು ವಿರುದ್ಧ ಧ್ವನಿಯಾಗಬೇಕಾಗಿದೆ. ಮಾನವೀಯತೆ ಇಲ್ಲದೆ ಯಾವುದೇ ದೇಶ ಉಳಿಯುದಿಲ್ಲ ಎಂಬುದನ್ನು ಅರ್ಥೈಹಿಸಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.

ನಿವೃತ್ತ ನ್ಯಾ.ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, 21ನೆ ಶತಮಾನ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಯುವಕರು ತಂತ್ರಜ್ಞಾನದ ಮುಖಾಂತರ ಪ್ರಜಾಪ್ರಭುತ್ವ ಬಲಪಡಿಸಲು ಮುಂದಾಗಬೇಕು. ಈ ಮೂಲಕ ಎಲ್ಲರಿಗೂ ಮಾದರಿ ಆಗುವಂತಹ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ವೇಳೆ ಎಚ್‌ಸಿಜಿ ಸಂಸ್ಥೆಯ ಸಿಇಒ ಡಾ.ಬಿ.ಎಸ್.ಅಜಯಕುಮಾರ್, ಸೀತಾ ಲಕ್ಷ್ಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News