ಸರಕಾರಕ್ಕೆ ಬಿಸಿತುಪ್ಪವಾದ ಸಚಿವ ಸ್ಥಾನಾಕಾಂಕ್ಷಿಗಳ ಬಂಡಾಯ: ವರಿಷ್ಠರ ಮಧ್ಯಪ್ರವೇಶವಾದರೂ ಶಮನಗೊಳ್ಳದ ಬಿಕ್ಕಟ್ಟು
ಬೆಂಗಳೂರು, ಜೂ. 9: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದಲ್ಲಿ ಖಾತೆ ಹಂಚಿಕೆಯಾಗಿದ್ದರೂ, ಸಚಿವ ಸ್ಥಾನ ಆಕಾಂಕ್ಷಿಗಳ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ವರಿಷ್ಠರ ಮಧ್ಯೆ ಪ್ರವೇಶವಾದರೂ ಕಾಂಗ್ರೆಸ್ ಶಾಸಕರ ಬಂಡಾಯ ಶಮನಗೊಳ್ಳದಿರುವುದು ಮೈತ್ರಿಕೂಟ ಸರಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವ ಮಾಜಿ ಸಚಿವ ಹಾಗೂ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ್, ಹೊಸದಿಲ್ಲಿಯಲ್ಲಿಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಆದರೆ, ‘ಡಿಸಿಎಂ ಸ್ಥಾನ ನೀಡಲು ಸಾಧ್ಯವಿಲ್ಲ, ಮುಂದೆ ಸೂಕ್ತ ಸ್ಥಾನಮಾನ ನೀಡುತ್ತೇವೆ’ ಎಂದು ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ.
ಆದರೆ, ಮಾಜಿ ಸಚಿವ ಎಂ.ಬಿ.ಪಾಟೀಲ್ ತಮ್ಮ ಪಟ್ಟು ಸಡಿಲಿಸದೆ, ನಾನು ಏಕಾಂಗಿಯಲ್ಲ. ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಶಾಸಕರು ಒಗ್ಗಟ್ಟಿನಿಂದ ಇದ್ದು, ನಾವೆಲ್ಲರೂ ಕೂತು ಚರ್ಚಿಸಿ, ಅನಂತರ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ.
ಇದು ಕಾಂಗ್ರೆಸ್ ಪಕ್ಷದ ವರಿಷ್ಠರು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಲೆನೋವುಂಟು ಮಾಡಿದ್ದು, ಮೈತ್ರಿಕೂಟ ಸರಕಾರದ ‘ಭವಿಷ್ಯ’ದ ಮೇಲೆ ಕಾರ್ಮೋಡ ಸೃಷ್ಟಿಸಿದೆ. ಅಲ್ಲದೆ, ಈ ಸರಕಾರ ಎಷ್ಟು ದಿನ ಎಂಬ ಪ್ರಶ್ನೆಯನ್ನೇ ಹುಟ್ಟುಹಾಕಿದೆ.
ದಿಲ್ಲಿಯಲ್ಲಿ ವರಿಷ್ಠರ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ನನ್ನ ಅಸಮಾಧಾನದ ಬಗ್ಗೆ ಹೈಕಮಾಂಡ್ಗೆ ಎಲ್ಲ ಮಾಹಿತಿ ನೀಡಿದ್ದೇನೆ. ಅವರು ನನ್ನ ಮಾತನ್ನು ಆಲಿಸಿದ್ದಾರೆ. ಆದರೆ, ತಾನು ಯಾವುದೇ ಸ್ಥಾನದ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಣೆ ನೀಡಿದರು.
‘ಬಿಜೆಪಿ ಪಕ್ಷದ ಯಾವುದೇ ನಾಯಕರು ತಮ್ಮನ್ನು ಸಂಪರ್ಕ ಮಾಡಿಲ್ಲ. ತಾನು ಯಾವ ನಾಯಕರನ್ನು ಸಂಪರ್ಕ ಮಾಡಿಲ್ಲ. ಪಕ್ಷದ ಯಾವುದೇ ವಿಚಾರವಾದರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಸಲಾಗುತ್ತದೆ ಎಂದರು. ತಾನು ಸದ್ಯ ಒಬ್ಬಂಟಿ ಅಲ್ಲ. ದಿಲ್ಲಿಯಲ್ಲಿ ನಡೆದ ಬೆಳವಣಿಗೆ ಕುರಿತು ತಮ್ಮ ಶಾಸಕರೊಂದಿಗೆ ಚರ್ಚೆ ನಡೆಸಬೇಕಿದೆ. ಆ ಬಳಿಕ ಮುಂದಿನ ನಡೆಯ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು
ನಮ್ಮ ಬೇಡಿಕೆ ಏನು ಇರಲಿಲ್ಲ. ಸಮುದಾಯಗಳಿಗೆ ಸ್ಥಾನ ಮಾನ ಕೊಡುವ ಬಗ್ಗೆ ಚರ್ಚೆ ಮಾಡಲಾಯಿತು. ಆದರೆ ಚರ್ಚೆಯಾದ ಎಲ್ಲವೂ ಮಾಧ್ಯಮಗಳ ಮುಂದೆ ವಿವರಿಸಲು ಸಾಧ್ಯ ಇಲ್ಲ. ಮಲ್ಲಿಕಾರ್ಜುನ ಖರ್ಗೆಯಿಂದ ನನ್ನ ಸ್ಥಾನ ತಪ್ಪಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವೂ ಕಾರಣವಲ್ಲ. ಸುಮ್ಮನೇ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ವರಿಷ್ಠರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆಂದು ಪಾಟೀಲ್ ಸ್ಪಷ್ಟಣೆ ನೀಡಿದರು.
ಈ ಮಧ್ಯೆ ಲಿಂಗಾಯತ ಸಮುದಾಯದ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೆಲ ಮಠಾಧೀಶರು ಅಖಾಡಕ್ಕೆ ಇಳಿದಿದ್ದಾರೆ. ಈ ನಡುವೆ ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್ ತನಗೂ ಸಚಿವ ಸ್ಥಾನ ನೀಡಬೇಕೆಂದು ಗುಟುರು ಹಾಕಿದ್ದಾರೆ. ‘ಮತದಾರರೇ ನನ್ನ ಹೈಕಮಾಂಡ್. ಅವರು ಯಾವ ರೀತಿ ಸೂಚಿಸುತ್ತಾರೆ ಆ ರೀತಿ ಕ್ರಮ ಕೈಗೊಳ್ಳುವೆ. ಸೋಮವಾರ ಕಾರ್ಯಕರ್ತರ ಜೊತೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಮಂತ್ರಿ ಸ್ಥಾನಕ್ಕಾಗಿ ಯಾರ ಬಳಿಯೂ ಮಂಡಿಯೂರಿ ಕುಳಿತುಕೊಳ್ಳುವ ಸ್ವಭಾವ ನನ್ನದಲ್ಲ. ಸಚಿವ ಸ್ಥಾನ ಕೇಳುವ ಹಕ್ಕು ನನಗಿದೆ’ ಎಂದು ಬಿ.ಸಿ.ಪಾಟೀಲ್ ಪ್ರತಿಪಾದಿಸಿದರು.
ಈ ಮಧ್ಯೆ ಬೀದರ್ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರಾದ ರಹೀಂ ಖಾನ್, ಈಶ್ವರ್ ಖಂಡ್ರೆ ಹಾಗೂ ಬಿ.ನಾರಾಯಣ ಬೀದರ್ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇತ್ತ ಬಳ್ಳಾರಿ ಜಿಲ್ಲೆಯ ಶಾಸಕರು ಸಚಿವ ಸ್ಥಾನದ ಬೇಡಿಕೆ ಇಟ್ಟಿರುವುದು ಬಿಕ್ಕಟ್ಟು ಸೃಷ್ಟಿಸಿದೆ.
‘ನಾನು ಪಕ್ಷದ ವಿರೋಧಿಯಲ್ಲ. ಎಂ.ಬಿ.ಪಾಟೀಲ್ ತಂಡದಲ್ಲಿ ಗುರುತಿಸಿಕೊಂಡಿಲ್ಲ. ಪಕ್ಷದ ವಿರುದ್ಧ ಯಾವುದೇ ಗುಂಪುಗಾರಿಕೆ ನಡೆಸಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಯಾದ ನನಗೆ ಪಕ್ಷದ ಶಾಸಕರು ಬೆಂಬಲ ನೀಡಿದ್ದರು. ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇದೆ’
-ಬಿ.ಸಿ.ಪಾಟೀಲ್ ಕಾಂಗ್ರೆಸ್ ಶಾಸಕ