ಪತ್ರಕರ್ತ ಬುಖಾರಿ ಹತ್ಯೆಗೆ ಆದೇಶ ಬಂದದ್ದು ಎಲ್ಲಿಂದ ಗೊತ್ತೇ?
Update: 2018-06-25 04:05 GMT
ಕಾಶ್ಮೀರ, ಜೂ.25: ಖ್ಯಾತ ಪತ್ರಕರ್ತ ಹಾಗೂ ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆ ಪ್ರಕರಣದ ಸಂಬಂಧ ಪೊಲೀಸರಿಗೆ ಕೆಲ ಸುಳಿವು ಲಭ್ಯವಾಗಿದ್ದು, ಶೀಘ್ರದಲ್ಲೇ ಪ್ರಕರಣ ಭೇದಿಸುವ ವಿಶ್ವಾಸವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಾಸಾಂತ್ಯದ ಒಳಗಾಗಿ ಪ್ರಕರಣ ಭೇದಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಕಿಸ್ತಾನದ ಸೂಚನೆಯಂತೆ ಉಗ್ರರು ಬುಖಾರಿಗೆ ಗುಂಡು ಹೊಡೆದಿದ್ದಾರೆ ಎಂದು ತನಿಖಾ ತಂಡದಲ್ಲಿರುವ ಈ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಗೆ ಬುಖಾರಿ ನಡೆಸಿದ ಪ್ರಯತ್ನದ ಹಿನ್ನೆಲೆಯಲ್ಲಿ ಈ ಸೂಚನೆ ಬಂದಿರಬೇಕು ಎಂದು ಅವರು ಅಂದಾಜಿಸಿದ್ದಾರೆ.
ಆರೋಪಿಗಳನ್ನು ಪತ್ತೆ ಮಾಡುವತ್ತ ತನಿಖೆ ಸಾಗಿದೆ. ಸದ್ಯದಲ್ಲೇ ಹಂತಕರನ್ನು ಗುರುತಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.